'ಪ್ರಧಾನಿ ಹಸ್ತಕ್ಷೇಪ ಮಾಡಿದರಾ, ಇಲ್ಲವಾ? ಇಷ್ಟುದ್ದ ಭಾಷಣ ಏಕೆ?'
ನವದೆಹಲಿ, ಜನವರಿ 7: "ರಫೇಲ್ ಖರೀದಿ ವ್ಯವಹಾರದಲ್ಲಿ ಪ್ರಧಾನಿಗಳ ಹಸ್ತಕ್ಷೇಪವನ್ನು ರಕ್ಷಣಾ ಸಚಿವೆ ಪ್ರಶ್ನೆ ಮಾಡಿದರಾ? ಬೈಪಾಸ್ ಸರ್ಜರಿ ಮಾಡಿ ಹಾಗೂ ವಿಮಾನಗಳ ಸಂಖ್ಯೆಯನ್ನು 126ರಿಂದ 36ಕ್ಕೆ ಇಳಿಸಿದಾಗ, ಇದಕ್ಕೆ ಭಾರತೀಯ ವಾಯು ಸೇನೆ ಅಧಿಕಾರಿಗಳು ಆಕ್ಷೇಪ ಮಾಡಿದರೋ ಇಲ್ಲವೋ? ಲೋಕಸಭೆಯಲ್ಲಿ ರಕ್ಷಣಾ ಸಚಿವೆ ಸುದೀರ್ಘ ಉತ್ತರ ನೀಡಿದರು. ಆದರೆ ಪ್ರಧಾನಿ ಮೋದಿ ಹಸ್ತಕ್ಷೇಪ ಮಾಡಿದರಾ ಅಥವಾ ಇಲ್ಲವಾ? ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ".
That HAL doesn’t have enough cash to pay salaries, isn’t surprising.
— Rahul Gandhi (@RahulGandhi) 7 January 2019
Anil Ambani has Rafale. He now needs HAL’s brilliant talent pool to deliver on his contracts.
Without salaries, HAL’s best engineers & scientists will be forced to move to AA’s venture.#SaveHAL https://t.co/IaqgS3pyJ7
-ಹೀಗೆ ಮತ್ತೆ ರಕ್ಷಣಾ ಸಚಿವೆ ಸೀತಾರಾಮನ್ ರನ್ನು ಪ್ರಶ್ನೆ ಮಾಡಿದ್ದಾರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಈಗ ಅಧಿಕಾರದಲ್ಲಿ ಇರುವ ನರೇಂದ್ರ ಮೋದಿ ಸರಕಾರವು ಎಚ್ ಎಎಲ್ ಗೆ ಒಂದು ಲಕ್ಷ ಕೋಟಿ ರುಪಾಯಿಯ ವ್ಯವಹಾರ ನೀಡಿದೆ ಎಂದು ಹೇಳುವ ಮೂಲಕ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಆರೋಪಿಸಿದರು.
ಎಚ್ ಎ ಎಲ್ ಜತೆಗಿನ ಸರಕಾರದ ಒಪ್ಪಂದದ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದ್ದು, ತಪ್ಪು ಮಾಹಿತಿ ಹಾಗೂ ದಾರಿ ತಪ್ಪಿಸುವ ಹೇಳಿಕೆಗಳನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರೆ ಎಂದು ಆರೋಪಿಸಿದೆ. ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ಸಚಿವೆ, ಎಚ್ ಎ ಎಲ್ ಜತೆಗೆ 26 ಸಾವಿರ ಕೋಟಿ ವೆಚ್ಚದ ಒಪ್ಪಂದ ಈಗಾಗಲೇ ಅಂತಿಮವಾಗಿದೆ. 73 ಸಾವಿರ ಕೋಟಿ ರುಪಾಯಿ ಮೊತ್ತದ ಆರ್ಡರ್ ವಿವಿಧ ಹಂತಗಳಲ್ಲಿವೆ ಎಂದು ಹೇಳಿದ್ದಾರೆ.

ಆದರೆ, ಸಚಿವೆ ಮಾತನ್ನು ಒಪ್ಪದ ಕಾಂಗ್ರೆಸ್, ಎಚ್ ಎಎಲ್ ನಿಂದ ಈಗಾಗಲೇ ಪಡೆದ ವಿಮಾನ ಹಾಗೂ ಹೆಲಿಕಾಪ್ಟರ್ ಗಳಿಗೆ ಸರಕಾರವು 15,700 ಕೋಟಿ ಬಾಕಿ ಉಳಿಸಿಕೊಂಡಿದೆ. ಆದರೆ ಈ ವರೆಗೆ ಒಂದು ವಿಮಾನವನ್ನು ಕೂಡ ಡೆಲಿವರಿ ನೀಡದ ಫ್ರಾನ್ಸ್ ನ ಡಸಾಲ್ಟ್ ಕಂಪನಿಗೆ 20 ಸಾವಿರ ಕೋಟಿ ರುಪಾಯಿ ಪಾವತಿಸಿದೆ ಎಂದು ಆರೋಪಿಸಿದೆ.
ಈ ವರೆಗೆ ಏನನ್ನೂ ಉತ್ಪಾದಿಸದ ಅನಿಲ್ ಅಂಬಾನಿ ಕಂಪನಿಗೆ ವಿಮಾನದ ಕಾಂಟ್ರ್ಯಾಕ್ಟ್ ದೊರೆತಿದೆ. ಆದರೆ ವಿಮಾನಗಳು, ಹೆಲಿಕಾಪ್ಟರ್ ಗಳು ಮುಂತಾದವುಗಳು ನಿರ್ಮಾಣ ಮಾಡಿದ ಎಚ್ ಎಎಲ್ ಗೆ ಕಾಂಟ್ರ್ಯಾಕ್ಟ್ ನೀಡಿಲ್ಲ. ಇದರ ಹಿಂದಿನ ಉದ್ದೇಶ ಏನೆಂದರೆ, ಎಚ್ ಎಎಲ್ ನ ದುರ್ಬಲಗೊಳಿಸುವುದು. ಅದಕ್ಕೆ ಹಣ ನೀಡದೆ ಭಾರತದ ತಾಕತ್ತು ಕಡಿಮೆ ಮಾಡಿ, ಅನಿಲ್ ಅಂಬಾನಿಗೆ 'ಕೊಡುಗೆ' ನೀಡುವುದು ಎಂದು ಆರೋಪಿಸಿದ್ದಾರೆ ರಾಹುಲ್ ಗಾಂಧಿ.
ಮತ್ತೊಮ್ಮೆ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಚರ್ಚೆಗೆ ಆಹ್ವಾನಿಸಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರ ಬಗ್ಗೆ ಪ್ರಧಾನಿ ಮೋದಿ ಜತೆಗೆ ಮಾತನಾಡಲು ನನಗೆ ಹದಿನೈದು ನಿಮಿಷ ಸಮಯ ನೀಡಿ. ಈ ದೇಶವು ಸತ್ಯವನ್ನು ತಿಳಿದುಕೊಳ್ಳುತ್ತದೆ ಎಂದಿದ್ದಾರೆ.












Click it and Unblock the Notifications