ಕೇಂದ್ರದ ವಿರುದ್ಧ ಬೆಂಕಿ ಉಗುಳಿದ ಕಾಂಗ್ರೆಸ್; ಹೀಗೆ ಮಾಡುವುದೇ ಮೋದಿ?
ನವದೆಹಲಿ, ನವೆಂಬರ್.08: ಗಾಂಧಿ ಕುಟುಂಬದ ಮೂವರಿಗೆ ನೀಡಿದ್ದ ವಿಶೇಷ ಭದ್ರತಾ ಸೌಲಭ್ಯ ಕಡಿತಗೊಳಿಸಿದ್ದಕ್ಕೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಕೇಂದ್ರ ಸರ್ಕಾರ ಗಾಂಧಿ ಕುಟುಂಬದವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನಡೆ ದುರುದ್ದೇಶದಿಂದ ಕೂಡಿದೆ ಎಂದು ಕಾಂಗ್ರೆಸ್ಸಿಗರು ಕೆಂಡ ಕಾರುತ್ತಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್, ಕೇಂದ್ರ ಸರ್ಕಾರದ ವಿರುದ್ಧ ಬೆಂಕಿ ಉಗುಳಿದ್ದಾರೆ. ಬಿಜೆಪಿಗರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿಯೇ ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾಗೆ ನೀಡಿದ್ದ ವಿಶೇಷ ಭದ್ರತಾ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ ಎಂದು ಕೆ.ಸಿ.ವೇಣುಗೋಪಾಲ್ ದೂಷಿಸಿದ್ದಾರೆ.
ಈ ಹಿಂದೆ ದೇಶದ ಪ್ರಧಾನಮಂತ್ರಿ ಆಗಿದ್ದ ಇಂದಿರಾ ಗಾಂಧಿ ಅವರನ್ನು ಅಂಗರಕ್ಷಕರೇ ಹತ್ಯೆಗೈದಿದ್ದರು. ರಾಜೀವ್ ಗಾಂಧಿ ಹತ್ಯೆ ಕೂಡಾ ದೇಶದ ಭದ್ರತಾ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತೆ ಮಾಡಿತ್ತು. ಅಂದಿನ ಪರಿಸ್ಥಿತಿಯನ್ನು ಅರಿತು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು, ಗಾಂಧಿ ಕುಟುಂಬದವರಿಗೆ ವಿಶೇಷ ಭದ್ರತಾ ಸೌಲಭ್ಯವನ್ನು ನೀಡಿದ್ದರು. ಆದರೆ, ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಸೌಲಭ್ಯವನ್ನು ಮುಂದುವರಿಸಲು ಮನಸ್ಸಿಲ್ಲ. ಉಭಯ ನಾಯಕರಿಗೆ ಭದ್ರತಾ ವ್ಯವಸ್ಥೆಗಿಂತಲೂ ದ್ವೇಷದ ರಾಜಕಾರಣವೇ ಹೆಚ್ಚಾಗಿದೆ ಎಂದು ಕೆ.ಸಿ.ವೇಣುಗೋಪಾಲ್ ದೂಷಿಸಿದ್ದಾರೆ.


ಬಿಜೆಪಿಗೆ ಧಿಕ್ಕಾರ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು
ಗಾಂಧಿ ಕುಟುಂಬಕ್ಕೆ ನೀಡಿದ್ದ ವಿಶೇಷ ಭದ್ರತಾ ಸೌಲಭ್ಯವನ್ನು ಹಿಂಪಡೆದ ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಕೆರಳಿ ಕೆಂಡವಾಗಿದ್ದಾರೆ. ಮಧ್ಯಾಹ್ನ ಕೇಂದ್ರ ಸರ್ಕಾರ ಈ ಆದೇಶವನ್ನು ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಇಳಿದರು. ಗೃಹಸಚಿವ ಅಮಿತ್ ಶಾ ಅವರ ದೆಹಲಿ ನಿವಾಸದ ಎದುರು ನೆರೆ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಗಾಂಧಿ ಕುಟುಂಬಕ್ಕೆ ಎಸ್ ಪಿಜಿ ಬದಲು ಝೆಡ್ ಪ್ಲಸ್ ಸೆಕ್ಯೂರಿಟಿ
ಈ ಮೊದಲು ಗಾಂಧಿ ಕುಟುಂಬದ ಮೂವರಿಗೆ ವಿಶೇಷ ಭದ್ರತಾ ಸೌಲಭ್ಯವನ್ನು ನೀಡಲಾಗುತ್ತಿತ್ತು. ಆದರೆ, ಇಂದಿನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೊರತಾಗಿ ದೇಶದ ಯಾವುದೇ ನಾಯಕರಿಗೂ ಎಸ್ ಪಿಜಿ ಭದ್ರತೆಯನ್ನು ನೀಡಲಾಗುವುದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಇನ್ನು ಮುಂದೆ ಎಸ್ ಪಿಜಿ ಭದ್ರತೆ ಬದಲು ಝೆಡ್ ಪ್ಲಸ್ ಭದ್ರತೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಗಾಂಧಿ ಕುಟುಂಬಕ್ಕಿಲ್ಲ ಯಾವುದೇ ಭೀತಿ
ಎಸ್ ಪಿಜಿ ಭದ್ರತೆ ನೀಡುವ ಮೊದಲು ಆ ವ್ಯಕ್ತಿಗೆ ಪ್ರಾಣ ಬೆದರಿಕೆ ಇದೆಯೋ ಇಲ್ಲವೋ ಎಂಬುದನ್ನು ಪ್ರತಿವರ್ಷ ಪರಿಶೀಲನೆ ಮಾಡಲಾಗುತ್ತದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪತ್ನಿ ಸೋನಿಯಾ ಗಾಂಧಿ ಹಾಗೂ ಅವರ ಇಬ್ಬರು ಮಕ್ಕಳಿಗೆ ನೀಡಿದ್ದ ಎಸ್ ಪಿಜಿ ಭದ್ರತೆಯ ಬಗ್ಗೆಯೂ ಪದ್ಧತಿಯಂತೆ ಪರಾಮರ್ಶೆಗೆ ಒಳಪಡಿಸಲಾಯಿತು. ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಸಂಸ್ಥೆಗಳಿಂದ ಈ ವ್ಯಕ್ತಿಗಳಿಗೆ ಪ್ರಾಣ ಬೆದರಿಕೆ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಈ ವೇಳೆ ಗಾಂಧಿ ಕುಟುಂಬದವರಿಗೆ ಯಾವುದೇ ರೀತಿ ನೇರ ಬೆದರಿಕೆ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಮೊದಲು ನೀಡಿದ್ದ ವಿಶೇಷ ಭದ್ರತಾ ಸೌಲಭ್ಯವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದೆ.

ಎಸ್ ಪಿಜಿ ಸೆಕ್ಯೂರಿಟಿ ಕುರಿತು ಒಂದಿಷ್ಟು ಮಾಹಿತಿ
ವಿಶೇಷ ಭದ್ರತಾ ಸೌಲಭ್ಯ ಅಂದರೆ ಅದು ಸಾಮಾನ್ಯವಲ್ಲ. ಸದ್ಯ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹೊರತಾಗಿ ಯಾವೊಬ್ಬ ನಾಯಕರಿಗೂ ಈ ಎಸ್ ಪಿಜಿ ಸೆಕ್ಯೂರಿಟಿಯನ್ನು ನೀಡಿಲ್ಲ. ಹಾಗಿದ್ರೆ ಎಸ್ ಪಿಜಿ ಸೆಕ್ಯೂರಿಟಿ ಹೇಗಿರುತ್ತೆ ಎಂದು ತಿಳಿದುಕೊಳ್ಳುವುದಾದರೆ, ಇದು 3 ಸಾವಿರ ಭದ್ರತಾ ಸಿಬ್ಬಂದಿಯುಳ್ಳ ಒಂದು ತಂಡ. ಅತ್ಯುನ್ನತ ತರಬೇತಿ ಪಡೆದ ಸಿಬ್ಬಂದಿ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಉಪಕರಣ ಹಾಗೂ ವಾಹನಗಳು ಇರುತ್ತವೆ. ಈ ತಂಡ ಪ್ರಧಾನಮಂತ್ರಿ ತೆರಳುವ ಪ್ರದೇಶಕ್ಕೆ ಮೊದಲು ಭೇಟಿ ನೀಡಿ ಅಲ್ಲಿನ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸುತ್ತವೆ. ನಂತರವಷ್ಟೇ ಅಲ್ಲಿಗೆ ಪ್ರಧಾನಮಂತ್ರಿಗಳು ತೆರಳುತ್ತಾರೆ. ಕಳೆದ 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ಬಳಿಕ ದೇಶದಲ್ಲಿ ಈ ವಿಶೇಷ ಭದ್ರತಾ ಸೌಲಭ್ಯವನ್ನು ಜಾರಿಗೊಳಿಸಲಾಯಿತು.












Click it and Unblock the Notifications