ಗಲ್ವಾನ್ ಕಣಿವೆ ಧೀರ ಯೋಧರಿಗೆ ಶೌರ್ಯ ಪ್ರಶಸ್ತಿ
ಗಲ್ವಾನ್ ವ್ಯಾಲಿಯ ವೀರ ಹಾಗೂ ಧೀರ ಯೋಧರಿಗೆ ಸೇನಾ ಶೌರ್ಯ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಚೀನಾ ಪಿಎಲ್ಎ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ ಮೃತಪಟ್ಟಿದ್ದ ವೀರ ಯೋಧ ಕರ್ನಲ್ ಸಂತೋಷ್ ಬಾಬುಗೆ ಮರಣೋತ್ತರ ಮಹಾವೀರಚಕ್ರ ಹಾಗೂ ಆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇತರೆ ಯೋಧರಿಗೆ ಸೇನಾ ಶೌರ್ಯ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ದಿನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಹಾಗೆಯೇ ಈ ಘಟನೆಯಲ್ಲಿ ವೀರಮರಣ ಹೊಂದಿದ ಸೈನಿಕರ ಹೆಸುರುಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿಯೂ ನಮೂದಿಸಲಾಗಿದೆ.

ಕಳೆದ ವರ್ಷ ಜೂನ್ 15 ರಂದು ಸಂತೋಷ್ ಬಾಬು ಸೇರಿದಂತೆ ಇತರೆ ಸೈನಿಕರು, ಚೀನಾ ಸೈನಿಕರೊಂದಿಗೆ, ಮುಷ್ಠಿ ಯುದ್ಧ ನಡೆಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಚೀನಾ ಸೈನ್ಯದ ನಡುವಿನ ಅತ್ಯಂತ ಭೀಕರ ಘಟನೆ ಇದಾಗಿತ್ತು.
ಈ ಘಟನೆಯಲ್ಲಿ ಚೀನಾದ 35ಕ್ಕೂ ಅಧಿಕ ಸೈನಿಕರು ಮೃತಪಟ್ಟಿರುವ ಕುರಿತು ವರದಿ ಇದ್ದು, ಆದರೆ ಇಲ್ಲಿಯವರೆಗೆ ಚೀನಾ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಈ ಘಟನೆಯ ಬಳಿಕ ಲಡಾಖ್ ಗಡಿ ಭಾಗದಲ್ಲಿ ಭಾರತ ಹಾಗೂ ಚೀನಾ ಸಾವಿರಕ್ಕೂ ಹೆಚ್ಚು ಸೇನಾ ತುಕಡಿಗಳನ್ನು ನಿರ್ಮಿಸಿದ್ದು, ಯುದ್ಧೋನ್ಮಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜೂನ್ ನಿಂದಲೂ ಪರಿಸ್ಥಿತಿ ತಿಳಿಗೊಳಿಸಲು ಸರ್ಕಾರ ಹಾಗೂ ಸೈನ್ಯದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಸೇನೆ ಹಿಂತೆಗೆತ ಆಗಿಲ್ಲ, ಹಾಗಾಗಿ ಗಡಿಯಲ್ಲಿ ಈಗಲೂ ಉದ್ವಿಗ್ನ ಸ್ಥಿತಿಯೇ ಮುಂದುವರೆದಿದೆ.












Click it and Unblock the Notifications