ಏರುತ್ತಲೇ ಇದೆ ತೈಲಬೆಲೆ: ಮೋದಿ ಸಭೆಯಿಂದ ಮೋಡಿಯಾಗುತ್ತಾ ಕಾದು ನೋಡಿ!
ನವದೆಹಲಿ, ಅಕ್ಟೋಬರ್ 16: ಜನಸಾಮಾನ್ಯನ ಜೇಬಿಗೆ ನಿರಂತರವಾಗಿ 'ಕತ್ತರಿಪ್ರಯೋಗ' ಮಾಡುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ತೈಲ ಬೆಲೆಯನ್ನು ಕೊಂಚವಾದರೂ ಕೈಗೆಟಕುವಂತೆ ಮಾಡಲು ಅಬಕಾರಿ ಸುಂಕವನ್ನು ಕಡಿತಗೊಳಿಸಿ, ಪ್ರತಿ ಲೀಟರ್ ಗೆ ಸುಮಾರು 2.50 ರೂ.ನಷ್ಟು ಬೆಲೆ ಕಡಿತಗೊಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇಂದು ಸಹ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆಯೇ ಕಂಡುಬಂದಿದೆ. ಸೋಮವಾರ ಸೌದಿ ಅರೆಬಿಯಾ ಮತ್ತು ಯನೈಟೆಡ್ ಅರಬ್ ಎಮಿರೇಟ್ಸ್ ನ ತೈಲಕಂಪನಿಗಳೊಂದಿಗೆ ಮತ್ತು ತಜ್ಞರೊಂದಿಗೆ ಮಾತುಕತೆ ನಡೆಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ತೈಲ ಬೆಲೆ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಪರಿಹಾರ ಕಂಡುಕೊಳ್ಳಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಎಷ್ಟಿದೆ ಪೆಟ್ರೋಲ್ ಬೆಲೆ
ಹಲವು ಪ್ರಯತ್ನಗಳು ನಡೆದರೂ ಪೆಟ್ರೋಲ್ ಮತ್ತು ಡಿಸೆಲ್ ದರದಲ್ಲಿ ಮಾತ್ರ ಇಳಿಕೆ ಕಂಡುಬಂದಿಲ್ಲ. ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 82.83 ರೂ. ಇದ್ದರೆ, ಡೀಸೆಲ್ ದರ ಲೀ.ಗೆ 75.69 ರೂ ಆಗಿದೆ. ಪೆಟ್ರೋಲ್ ಬೆಲೆ 11 ಪೈಸೆಯಷ್ಟು ಹೆಚ್ಚಾಗಿದ್ದರೆ, ಡಿಸೆಲ್ ದರ 23 ಪೈಸೆಯಷ್ಟು ಹೆಚ್ಚಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 88.18 ರೂ. ಮತ್ತು 79.02 ರೂ. ಆಗಿದ್ದರೆ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 83.37 ರೂಪಾಯಿಯಾಗಿದ್ದು, ಡೀಸೆಲ್ ದರ 75.85 ರೂ ಆಗಿದೆ.

ಫಲಪ್ರದವಾಗುತ್ತದೆಯೇ ಮೋದಿ ಮಾತುಕತೆ?
ತೈಲ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನ ಪ್ರಮುಖ ತೈಲ ಕಂಪನಿಗಳ ಜೊತೆ ಸಭೆ ನಡೆಸಿದರು. ಸೌದಿ ಅರೇಬಿಯಾದ ಪೆಟ್ರೋಲಿಯಂ ಸಚಿವ ಖಾಲಿದ್ ಎ ಅಲ್ ಫಾಲಿಹ್ ಮತ್ತು ಇತರ ತೈಲ ಮಾರಿಕಟ್ಟೆಯ ತಜ್ಞರೊಂದಿಗೆ ಅವರು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಕುರಿತು ಚರ್ಚೆ ನಡೆಸಲಾಯಿತು.

ಹಣ ಪಾವತಿ ನಿಯಮಗಳನ್ನು ಸಡಿಲಿಸಿ
ಭಾರತವು ಶೇ.80 ರಷ್ಟು ತೈಲವನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ತೈಲವನ್ನು ಕೊಳ್ಳುವಾಗ ಡಾಲರ್ ಬದಲು ರೂಪಾಯಿಯಲ್ಲೇ ಹಣಪಾವತಿಸುವುದಕ್ಕೆ ಅನುಕೂಲವಾಗುವಂತೆ ಪೇಮೆಂಟ್ ನಿಯಮಗಳನ್ನು ಸಡಿಲಗೊಳಿಸಲು ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದಾರೆ. ಇದರಿಂದ ತೈಲ ಬೆಲೆ ಏರಿಕೆಯೂ ನಿಯಂತ್ರಣಕ್ಕೆ ಬರುವುದಲ್ಲದೆ, ಸ್ಥಳೀಯ ಕರೆನ್ಸಿಗಳ ಮೌಲ್ಯವೂ ಹೆಚ್ಚುತ್ತದೆ ಎಂಬುದು ಈ ಸಲಹೆಯ ಹಿಂದಿನ ಉದ್ದೇಶವಾಗಿದೆ.

ಸೌದಿ ಅರೆಬಿಯಾ ನಿಲುವೇನು?
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಮತ್ತು ತೈಲ ಬೆಲೆಯಲ್ಲಿ ಏರಿಕೆಯಾಘುತ್ತಿರುವುದು ಜಾಗತಿಕ ಮಾರುಕಟ್ಟೆಗೆ ಸಂಬಂಧಿಸಿದ ವಿಷಯ. ಆದ್ದರಿಂದ ಇದಕ್ಕೆ ತಾನು ಕಾರಣವಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ತೈಲವನ್ನು ಪೂರೈಸುವ ಜವಾಬ್ದಾರಿ ತನ್ನದು, ಆದರೆ ಭಾರತಕ್ಕೆ ನಮ್ಮಿಂದ ಅಗತ್ಯ ನೆರವನ್ನು ನೀಡುವುದಾಗಿ ಅದು ಅಭಯ ನೀಡಿದೆ.












Click it and Unblock the Notifications