ಪ್ರತಿಯೊಬ್ಬರಿಗೂ ಉಚಿತ ಕೊರೊನಾ ಲಸಿಕೆ; ಇದು ಪ್ರಧಾನಿ ಮೋದಿ ಘೋಷಣೆಯಲ್ಲ!
ನವದೆಹಲಿ, ಜನವರಿ.25: ರಾಷ್ಟ್ರ ರಾಜಧಾನಿಯ ಪ್ರತಿಯೊಬ್ಬ ಪ್ರಜೆಗೂ ಕೊರೊನಾವೈರಸ್ ಲಸಿಕೆಯನ್ನು ಉಚಿತವಾಗಿ ನೀಡುವುದಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀರ್ಮಾನಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರದ ಸೂಚನೆಯನ್ನಷ್ಟೇ ಎದುರು ನೋಡಲಾಗುತ್ತಿದೆ.
ದೆಹಲಿಯಲ್ಲಿ ಎಲ್ಲ ಪ್ರಜೆಗಳಿಗೆ ಉಚಿತವಾಗಿ ಕೊವಿಡ್-19 ಲಸಿಕೆಯ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರವು ಇದೀಗ ಕೇಂದ್ರದ ಸೂಚನೆಯನ್ನು ನಿರೀಕ್ಷಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ಶಾಸಕರಾದ ರಾಘವ್ ಛದ್ದಾ ತಿಳಿಸಿದ್ದಾರೆ.
ಸುಮ್ನಿರಿ ಸಾರ್; ಕೊರೊನಾ ಲಸಿಕೆ ಬಗ್ಗೆ ಸುಳ್ ಹೇಳಿದ್ರೆ ಶಿಕ್ಷೆ ಪಕ್ಕಾ
ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆಯನ್ನು ನೀಡುವುದು ಸರ್ಕಾರದ ಹೊಣೆಯಾಗಿದೆ. ಒಬ್ಬರು ಕೂಡಾ ಲಸಿಕೆಯಿಂದ ವಂಚಿತರಾಗಬಾರದು. ಲಸಿಕೆ ನೀಡುವುದಕ್ಕೆ ಹಣದ ಕೊರತೆಯಿದ್ದಲ್ಲಿ ರಾಜ್ಯ ಸರ್ಕಾರದ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಕೇಂದ್ರ ಸರ್ಕಾರ ನೀಡುವ ಸೂಚನೆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ರಾಘವ್ ಛದ್ದಾ ಹೇಳಿದ್ದಾರೆ.
ಉಚಿತ ಲಸಿಕೆ ನೀಡುವ ಬಗ್ಗೆ ಆಪ್ ಘೋಷಣೆ
ನವದೆಹಲಿಯ ಪ್ರತಿಯೊಬ್ಬ ನಿವಾಸಿಗೂ ಕೊರೊನಾವೈರಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಕೇಂದ್ರ ಸರ್ಕಾರವೇ ಲಸಿಕೆ ನೀಡಿದರೆ ಸರಿ. ಕೇಂದ್ರ ಸರ್ಕಾರದಿಂದ ಆಗದಿದ್ದಲ್ಲಿ ದೆಹಲಿ ಸರ್ಕಾರವು ತನ್ನ ರಾಜ್ಯದ ಎಲ್ಲ ಪ್ರಜೆಗಳಿಗೆ ಉಚಿತವಾಗಿಯೇ ಕೊವಿಡ್-19 ಲಸಿಕೆಯನ್ನು ನೀಡುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಲಸಿಕೆ ಕೇಂದ್ರ
ನವದೆಹಲಿಯಲ್ಲಿ ಕೊರೊನಾವೈರಸ್ ಲಸಿಕೆ ಕೇಂದ್ರಗಳ ಸಂಖ್ಯೆಯು ಸದ್ಯದ ಮಟ್ಟಿಗೆ 81 ಇದೆ. ಮುಂದಿನ ಕೆಲವು ದಿನಗಳಲ್ಲಿ ಈ ಲಸಿಕೆ ಕೇಂದ್ರಗಳ ಸಂಖ್ಯೆಯನ್ನು 175ಕ್ಕೆ ಏರಿಕೆ ಮಾಡಲಾಗುತ್ತದೆ. ಅದಾಗಿ ಸ್ವಲ್ಪ ದಿನಕ್ಕೆ ರಾಜ್ಯದಲ್ಲಿ 1000 ಲಸಿಕೆ ಕೇಂದ್ರಗಳನ್ನು ತೆರೆಯಲು ಸರ್ಕಾರವು ಯೋಜನೆ ರೂಪಿಸಿಕೊಳ್ಳುತ್ತಿದೆ. ಒಂದು ವಾರದಲ್ಲಿ ನಾಲ್ಕು ದಿನ ಅಂದರೆ ಸೋಮವಾರ, ಮಂಗಳವಾರ, ಗುರುವಾರ ಮತ್ತು ಶನಿವಾರ ಲಸಿಕೆಯನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.
ದೆಹಲಿಯಲ್ಲಿ 51 ಲಕ್ಷ ಜನರ ಪಟ್ಟಿ ಸಿದ್ಧಪಿಡಿಸಿದ ಸರ್ಕಾರ
ಕೊರೊನಾವೈರಸ್ ಲಸಿಕೆಯನ್ನು ಯಾರಿಗೆ ನೀಡಬೇಕು ಎನ್ನುವುದರ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈಗಾಗಲೇ ಸ್ಪಷ್ಟಪಡಿಸಿದೆ. ನವದೆಹಲಿಯಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ, ಕೊರೊನಾ ವಾರಿಯರ್ಸ್ ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟವರು ಸೇರಿದಂತೆ 51 ಲಕ್ಷ ಮಂದಿಯ ಹೆಸರಿನ ಪಟ್ಟಿ ಸಿದ್ಧಪಡಿಸಲಾಗಿದೆ. ಈ 51 ಲಕ್ಷ ಜನರಿಗೆ ಪ್ರಾಥಮಿಕ ಹಂತದಲ್ಲಿ ಉಚಿತವಾಗಿ ಕೊರೊನಾ ಲಸಿಕೆಯನ್ನು ನೀಡಲಾಗುತ್ತದೆ ಎಂದು ಆಪ್ ಸರ್ಕಾರವು ಹೇಳಿದೆ.
ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ
ಕೊರೊನಾವೈರಸ್ ಸೋಂಕಿಗಾಗಿ ದೇಶದಲ್ಲಿ ಎರಡು ಕಂಪನಿಯ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಜ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಸಂಶೋಧಿಸಿರುವ ಮಹಾರಾಷ್ಟ್ರದ ಪುಣೆಯಲ್ಲಿರುವ ಸೆರಮ್ ಇನ್ಸ್ ಟಿಟ್ಯೂಟ್ ನಲ್ಲಿ ಉತ್ಪಾದಿಸಲಾಗುತ್ತಿರುವ ಕೊವಿಶೀಲ್ಡ್ ಲಸಿಕೆ ಒಂದಾಗಿದೆ. ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಮತ್ತೊಂದು ಲಸಿಕೆಯಾಗಿದೆ. ಎರಡು ಲಸಿಕೆಗಳನ್ನು ದೇಶದ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೊವಿಡ್-19 ಯೋಧರಿಗೆ ನೀಡುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ಜನವರಿ.16ರಂದು ಚಾಲನೆ ನೀಡಿದರು.
ಭಾರತದಲ್ಲಿ 30 ಕೋಟಿ ಮಂದಿಗೆ ಕೊರೊನಾ ಲಸಿಕೆಯ ಗುರಿ
ಮೊದಲ ಹಂತದಲ್ಲಿ ದೇಶದ 3 ಕೋಟಿ ವೈದ್ಯಕೀಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೊವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದೆ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ 27 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ. ವಿಶ್ವದಾದ್ಯಂತ ಕೊರೊನಾವೈರಸ್ ಸೋಂಕಿನ ವಿರುದ್ಧ ಲಸಿಕೆ ಅಭಿಯಾನ ಆರಂಭಿಸಲಾಗಿದೆ.