ದೆಹಲಿಯ ಕೆಂಪು ಕೋಟೆ ಮೇಲೆ ಹಾರಿದ್ದು ಸಿಖ್ಖರ ಧಾರ್ಮಿಕ ಧ್ವಜ
ನವದೆಹಲಿ, ಜನವರಿ 26: ದೇಶದ ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ಪರೇಡ್ ನಂತರ ನಿಯೋಜನೆಗೊಂಡಿದ್ದ ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ಗಲಭೆ ಉಂಟಾಗಿದ್ದು, ಬ್ಯಾರಿಕೇಡ್ ಗಳನ್ನು ಒಡೆದು ನಗರದ ಒಳನುಗ್ಗಿದ ರೈತರು ಕೆಂಪು ಕೋಟೆಯಲ್ಲಿ ಅಂತಿಮವಾಗಿ ಬಾವುಟ ಹಾರಿಸಿದ್ದರು.
ಆದರೆ ಅವರು ಹಾರಿಸಿದ್ದ ಧ್ವಜ ರಾಷ್ಟ್ರದ ತ್ರಿವರ್ಣ ಧ್ವಜವಲ್ಲದೇ ಬೇರೆಯಾಗಿದ್ದುದು ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಭಾರತದ ತ್ರಿವರ್ಣ ಧ್ವಜವಲ್ಲ, ಖಲಿಸ್ತಾನಿಗಳ ಧ್ವಜ ಎಂಬ ಆರೋಪವೂ ಕೇಳಿಬಂದಿತ್ತು. ಪ್ರತ್ಯೇಕ ಖಲಿಸ್ತಾನಿ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ (SFJ) ಧ್ವಜ ಇದಾಗಿದ್ದು, ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದಕ್ಕೆ ಪಂಜಾಬ್ ರೈತನಿಗೆ ಬಹುಮಾನವನ್ನೂ ಘೋಷಿಸಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.
ಇದೀಗ ಧ್ವಜದ ಬಗ್ಗೆ ಸ್ಪಷ್ಟನೆ ದೊರೆತಿದ್ದು, ಪ್ರತಿಭಟನಾಕಾರರು ಹಾರಿಸಿದ ಈ ಧ್ವಜ ಸಿಖ್ಖರ ಧಾರ್ಮಿಕ ಧ್ವಜ "ನಿಶಾನ್ ಸಾಹಿಬ್" ಎನ್ನಲಾಗಿದೆ.

ಕೆಂಪುಕೋಟೆಯ ಧ್ವಜಸ್ಥಂಭವನ್ನು ಏರಿದ ಕಿಸಾನ್ ಯೂನಿಯನ್ ಸಂಘಟನೆಯ ಪ್ರತಿಭಟನಾಕಾರರು ತಮ್ಮ ಧ್ವಜವನ್ನು ಹಾರಿಸಿದ್ದರು. ರಾಷ್ಟ್ರಧ್ವಜದ ಜೊತೆಗೆ ಕಿಸಾನ್ ಯೂನಿಯನ್ ಮತ್ತು ಇನ್ನೊಂದು ಸಂಘಟನೆಯ ಧ್ವಜವೂ ಹಾರಾಡುತ್ತಿತ್ತು. ಆನಂತರ ರೈತರು ಹಾರಿಸಿದ್ದ ಧ್ವಜದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು. ಇದೀಗ ರೈತರು ಹಾರಿಸಿದ್ದ ಈ ಧ್ವಜ, ಸಿಖ್ಖರ ಧಾರ್ಮಿಕ ಧ್ವಜ ಎಂದು ತಿಳಿದುಬಂದಿದೆ.
72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ
ಕೆಂಪು ಕೋಟೆ ಮೇಲೆ ಹಾರಿಸಿದ ಕೇಸರಿ ಬಣ್ಣದ ಈ ಧ್ವಜ ತ್ರಿಭುಜಾಕೃತಿಯಲ್ಲಿದ್ದು, ಸಿಖ್ಖರಿಗೆ ಪವಿತ್ರ ಎನಿಸಿಕೊಂಡಿದೆ. ಈ ಧ್ವಜ ಎರಡು ಅಂಚಿನ ಕತ್ತಿ, ಚಕ್ರ, ಬಿಲ್ಲೆ ಹಾಗೂ ಎರಡು ಖಡ್ಗದ ಹಿಡಿಗಳನ್ನು ಒಳಗೊಡಿದೆ. ಕೆಂಪು ಕೋಟೆಯಲ್ಲಿ ಹಾರಾಡಿದ ಇನ್ನೊಂದು ಧ್ವಜ ರೈತ ಸಂಘಟನೆಯದ್ದು ಎನ್ನಲಾಗಿದೆ.












Click it and Unblock the Notifications