ದೆಹಲಿಯ ಜಂತರ್ ಮಂತರ್ ಎದುರು ರೈತರ ಪ್ರತಿಭಟನೆ: ಗಡಿಯಲ್ಲಿ ರೈತರ ಜಮಾವಣೆ
ನವದೆಹಲಿ, ಜುಲೈ 22: ಸಂಸತ್ ಮುಂಗಾರು ಅಧಿವೇಶನ ಒಂದೆಡೆ ನಡೆಯುತ್ತಿದೆ, ಇನ್ನೊಂದೆಡೆ ರೈತರು ಜಂತರ್ ಮಂತರ್ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಈ ಮೂಲಕ ರೈತರು ಸರ್ಕಾರದ ಗಮನವನ್ನು ರೈತರತ್ತ ಸೆಳೆಯಲು ಮುಂದಾಗಿದ್ದಾರೆ. ಇಂದು ಬೆಳಗ್ಗೆಯೇ ಜಂತರ್ ಮಂತರ್ ಗೆ ಸಾಗುವ ಮುನ್ನ ಸಿಂಘು ಗಡಿಯಲ್ಲಿ ರೈತರು ಜಮಾಯಿಸಿದ್ದಾರೆ. ದೆಹಲಿ ಗಡಿಭಾಗದಲ್ಲಿ ಮತ್ತು ಜಂತರ್ ಮಂತರ್ ನಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.
ಕೇಂದ್ರ ಸರ್ಕಾರದ ಮೂರು ರೈತ ಕಾಯ್ದೆಯ ವಿರುದ್ಧ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆಗೆ ಸಜ್ಜಾಗುತ್ತಿದ್ದಂತೆ ದೆಹಲಿ ಪೊಲೀಸರು ತೀವ್ರ ಭದ್ರತೆ ಕಲ್ಪಿಸಿದ್ದಾರೆ.

ಈ ಕುರಿತು ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆ ನಾಯಕ ರಾಕೇಶ್ ಟಿಕಾಯತ್, ನಾನು ಮತ್ತು ಇತರ 8 ಮಂದಿ ಸಿಂಘು ಗಡಿಯಿಂದ ಜಂತರ್ ಮಂತರ್ಗೆ ತೆರಳುತ್ತೇವೆ. ಜಂತರ್ ಮಂತರ್ ನಲ್ಲಿ ಕಿಸಾನ್ ಸಂಸದ್ ನಡೆಸಿ ಸಂಸತ್ತಿನ ಕಲಾಪವನ್ನು ಗಮನಿಸುತ್ತಿರುತ್ತೇವೆ ಎಂದು ತಿಳಿಸಿದ್ದಾರೆ.
ಜಂತರ್ ಮಂತರ್ ಮುಂದೆ ಷರತ್ತು ಮೇಲೆ ಪ್ರತಿಭಟನೆ ನಡೆಸಲು ರೈತರಿಗೆ ಅನುಮತಿ ನೀಡಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚದ 200 ಸದಸ್ಯರಿಗೆ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ 6 ಮಂದಿಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದ್ದು, ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕಾವು ಕಡಿಮೆಯಾಗುತ್ತಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಆದರೆ, ಅದು ನಿಜವಲ್ಲ, ಸುಗ್ಗಿ ಕಾಲದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಲಿಲ್ಲ ಅಷ್ಟೇ ಎಂದು ಜೈ ಕಿಸಾನ್ ಸಂಘಟನೆಯ ಯುವ ಮುಖಂಡ ದೀಪಕ್ ಲಾಂಬ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುವ ಸಂಸತ್ ಅಧಿವೇಶನದಲ್ಲಿ ಬಿಜೆಪಿ ಹಾಗೂ ಬಿಜೆಪಿಯೇತರ ಸಂಸದರು ರೈತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಹಾಗೂ ಬಿಜೆಪಿಯೇತರ ಎಲ್ಲಾ ಸಂಸದರಿಗೂ ವಿಪ್ ರವಾನಿಸಲಾಗಿದೆ. ಅಧಿವೇಶನ ನಡೆಯುವ ಅಷ್ಟೂ ದಿನಗಳು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು, ಚರ್ಚಿಸದಿದ್ದರೆ ಪ್ರರ್ಶನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications