''ಪ್ರತಿಭಟನಾ ನಿರತ ರೈತರನ್ನು ಉಗ್ರರಂತೆ ಕಾಣುತ್ತಿದೆ ಸರ್ಕಾರ''
ನವದೆಹಲಿ, ನ.29: ಕೇಂದ್ರ ಸರ್ಕಾರದ ಹೊರ ತಂದಿರುವ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾ ನಿರತ ರೈತರನ್ನು ಉಗ್ರರಂತೆ ಕಾಣಲಾಗುತ್ತಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಟೀಕಿಸಿದ್ದಾರೆ.
ದೆಹಲಿಯನ್ನು ಪ್ರವೇಶಿಸಲು ಪಕ್ಕದ ರಾಜ್ಯದ ರೈತರಿಗೆ ಅನುಮತಿ ನೀಡುತ್ತಿಲ್ಲ. ರೈತರನ್ನು ಈ ದೇಶಕ್ಕೆ ಸೇರಿದ ಪ್ರಜೆಗಳಂತೆ ಸರ್ಕಾರ ಕಾಣುತ್ತಿಲ್ಲ. ರೈತರನ್ನು ಉಗ್ರರಂತೆ ಉಪಚರಿಸಲಾಗುತ್ತಿದೆ. ಹೆಚ್ಚಿನ ಸಿಖ್ ಸಮುದಾಯದ ರೈತಾಪಿ ವರ್ಗದವರು ನೆರೆದಿದ್ದು, ಪಂಜಾಬ್ ಹಾಗೂ ಹರ್ಯಾಣದ ರಾಜ್ಯದವರಿದ್ದಾರೆ. ಇವರನ್ನು ಖಾಲಿಸ್ತಾನಿಗಳು ಎಂದು ದೂರುತ್ತಿರುವುದು ಖಂಡನೀಯ.ರೈತರಿಗೆ ಸರ್ಕಾರ ಮಾಡುತ್ತಿರುವ ಅವಮಾನ ಎಂದು ಸಂಜಯ್ ರಾವತ್ ಹೇಳಿದರು.
ಎಪಿಎಂಸಿ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ, ಕೃಷಿ ಬೆಲೆ ನೀತಿ, ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿ ಮೂಲಕ ಸರ್ಕಾರಗಳು ಗ್ರಾಮೀಣ ಜನರನ್ನು ಒಕ್ಕಲೆಬ್ಬಿಸುತ್ತಿವೆ. ಈ ಮೂಲಕ ಕಾರ್ಪೊರೇಟ್, ಎಂಎನ್ಸಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿವೆ ಎಂದು ದೇಶದೆಲ್ಲೆಡೆಯಿಂದ ರೈತ ಸಂಘಟನೆಗಳು ಆರೋಪಿಸಿವೆ.

ರೈತರ ಪ್ರತಿಭಟನೆ ತಡೆಯಲು ಪೊಲೀಸರು ನಡೆಸಿದ ಪ್ರಯತ್ನಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ರೈತರ ಪ್ರತಿಭಟನೆಗೆ ರಾಜಕೀಯ ಪಕ್ಷಗಳಾದ ಎನ್ಸಿಪಿ, ಡಿಎಂಕೆ, ಸಿಪಿಎಂ, ಸಿಪಿಐ, ಆರ್ಜೆಡಿ, ಎಐಎಫ್ಬಿ ಮತ್ತು ಆರ್ಎಸ್ಪಿ ಬೆಂಬಲ ಸೂಚಿಸಿವೆ.












Click it and Unblock the Notifications