"ಕೃಷಿ ಕಾಯ್ದೆ ಕುರಿತು ಕೇಂದ್ರದ ಜೊತೆ ಸಂಧಾನಕ್ಕೆ OK, ಆದರೆ..?"
ನವದೆಹಲಿ, ಜನವರಿ.31: ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಯಾವುದೇ ರೀತಿ ಪೂರ್ವ ಷರತ್ತುಗಳನ್ನು ವಿಧಿಸದಿದ್ದಲ್ಲಿ ರೈತರು ಮತ್ತು ರೈತ ಸಂಘಟನೆಗಳು ಸಂಧಾನಿ ಮಾತುಕತೆಗೆ ಸಿದ್ಧ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ರೈತರ ಎದುರಿಗೆ ಗನ್ ಹಿಡಿದು ನಿಂತುಕೊಂಡು ಚರ್ಚೆ ಮಾಡೋಣ ಬನ್ನಿ ಎಂದರೆ ಅದು ಸಾಧ್ಯವಾಗದ ಮಾತು. ಗನ್ ಪಾಯಿಂಟ್ ನಲ್ಲಿ ನಿಂತು ಸಂಧಾನ ಮಾತುಕತೆ ನಡೆಸುವುದಕ್ಕೆ ಸಾಧ್ಯವಿಲ್ಲ.
ವಿವಾದಿತ ಕೃಷಿ ಕಾಯ್ದೆ ಮತ್ತು ರೈತರ ಹೋರಾಟದ ಹಾದಿಯ ಚಿತ್ರಣ
ರೈತರಿಗೆ ಮತ್ತು ರೈತ ಸಂಘಟನೆಗಳಿಗೆ ಮೊದಲೇ ಷರತ್ತು ವಿಧಿಸುವುದಕ್ಕೆ ಬಿಟ್ಟು ಕೇಂದ್ರ ಸರ್ಕಾರವು ಶಾಂತಿ ಮಾತುಕತೆಗೆ ಆಹ್ವಾನ ನೀಡಲಿ. ನಾವೂ ಕೂಡಾ ಶಾಂತಿಯುತ ಚರ್ಚೆಗೆ ಸಿದ್ಧರಿದ್ದೇವೆ ಎಂದು ರಾಕೇಶ್ ತಿಕೈಟ್ ಹೇಳಿದ್ದಾರೆ.
"ರೈತರ ಸಮಸ್ಯೆ ಬಗೆಹರಿಸುವುದಷ್ಟೇ ನಮಗೆ ಮುಖ್ಯ"
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಉದ್ದೇಶ ರೈತರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದೇ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ನಮಗೂ ಗೌರವವಿದೆ. ಅವರೇ ಬೇಕಿದ್ದಲ್ಲಿ ಶಾಂತಿ ಮಾತುಕತೆಗೆ ಆಹ್ವಾನ ನೀಡಲಿ. ರೈತರಲ್ಲಿರುವ ಗೊಂದಲಗಳಿಗೆ ಉತ್ತರ ನೀಡಿ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶಾಂತಿಯುತವಾಗಿ ಮಾತುಕತೆ ನಡೆಸಲಿ ಎಂದು ಬಿಕೆಯು ಮುಖ್ಯಸ್ಥ ರಾಕೇಶ್ ತಿಕೈಟ್ ಆಗ್ರಹಿಸಿದ್ದಾರೆ.
ಪ್ರಧಾನಿ ಮಾತಿಗೆ ಉತ್ತರಿಸಿದ ರೈತ ಮುಖಂಡ
ನವದೆಹಲಿಯಲ್ಲಿ 72ನೇ ಗಣರಾಜ್ಯೋತ್ಸವದ ದಿನವೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದ್ದು, ದೇಶವೇ ತಲೆ ತಗ್ಗಿಸುವಂತಾ ಘಟನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದಕ್ಕೆ ಉತ್ತರಿಸಿದ ಬಿಕೆಯು ಮುಖ್ಯಸ್ಥ ರಾಕೇಶ್ ತಿಕೈಟ್, ತ್ರಿವರ್ಣಧ್ವಜದ ಬಗ್ಗೆ ಎಲ್ಲರಿಗೂ ಗೌರವವಿದೆ. ಭಾರತದ ಧ್ವಜವು ಎಲ್ಲರಿಗೂ ಸೇರಿದ್ದಾಗಿದೆ. ಧ್ವಜವನ್ನು ಅವಮಾನಿಸಿದವರು ಯಾರೇ ಆಗಿದ್ದರೂ, ಅಂಥವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಿ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸಭೆ
ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟ ಮತ್ತು ದೆಹಲಿಯಲ್ಲಿ ನಡೆದ ಹಿಂಸಾಚಾರದ ಕುರಿತು ನಡೆದ ಎಲ್ಲ ರೀತಿ ಬೆಳವಣಿಗೆಗಳ ಕುರಿತು ಚರ್ಚಿಸುವುದಕ್ಕೆ ಫೆಬ್ರವರಿ.02ರ ಮಂಗಳವಾರ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸರ್ವಪಕ್ಷ ಸಭೆ ಕರೆದಿದ್ದಾರೆ. ಪಂಜಾಬ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಸಿಂಘು ಗಡಿಯಲ್ಲಿನ ಪರಿಸ್ಥಿತಿ ಮತ್ತು ಈ ಹಿಂದೆ ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ರೈತರ ಹೋರಾಟ ಮತ್ತು ಕೃಷಿ ಕಾಯ್ದೆಗಳ ಮಾಹಿತಿ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ನವೆಂಬರ್.26ರಿಂದಲೂ ಕೇಂದ್ರ ಸರ್ಕಾರದ ಹೊಸ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಇದರ ಮಧ್ಯೆ ಗಣರಾಜ್ಯೋತ್ಸವದ ದಿನ ದೆಹಲಿಯಲ್ಲಿ ರೈತರ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ತ್ರಿವರ್ಣ ಧ್ವಜದ ಎದುರಿಗೆ ನಿಶಾನ್ ಸಾಹೇಬ್ ಧ್ವಜವನ್ನು ಹಾರಿಸಿದ್ದರು.