ನಕಲಿ ವಿದ್ಯಾರ್ಹತೆ ಪ್ರಕರಣ: ಸಚಿವೆ ಸ್ಮೃತಿ ಇರಾನಿ ಖುಲಾಸೆ
ನವದೆಹಲಿ, ಅಕ್ಟೋಬರ್, 18: ಶೈಕ್ಷಣಿಕ ಅರ್ಹತೆಯ ಬಗ್ಗೆ ಚುನಾವಣಾ ಆಯೋಗಕ್ಕೆ ನಕಲಿ ದಾಖಲೆಗಳ ಮೂಲಕ ಸುಳ್ಳು ಮಾಹಿತಿ ಸಲ್ಲಿಸಿರುವ ಪ್ರಕರಣದಲ್ಲಿ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿಯವರನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಮಂಗಳವಾರ(ಅ.18) ಅರ್ಜಿ ವಿಚಾರಣೆ ನಡೆಸಿದ ನವದೆಹಲಿ ಪಟಿಯಾಲ ಹೌಸ್ ನ್ಯಾಯಲಾಯ ಪ್ರಕರಣದ ಅರ್ಜಿಯನ್ನು ವಜಾ ಮಾಡಿದೆ.
ಸಚಿವೆ ಸ್ಮೃತಿ ಅವರು ವಿದ್ಯಾರ್ಹತೆ ಪೂರ್ಣಗೊಳಿಸಿದ 11 ವರ್ಷದ ನಂತರ ಕೇಸ್ ದಾಖಲಿಸಲಾಗಿದೆ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಮೂಲ ಪ್ರಮಾಣ ಪತ್ರಗಳ ಲಭ್ಯತೆ ಇಲ್ಲದಿರುವುದರಿಂದ ಕೇಸ್ ವಜಾ ಮಾಡಿರುವುದಾಗಿ ನ್ಯಾಯಲಯ ತಿಳಿಸಿದೆ.
ಅಷ್ಟೇ ಅಲ್ಲದೇ ಅವರು ಕೇಂದ್ರ ಸಚಿವರಾಗಿದ್ದು, ಅವರ ಚಾರಿತ್ರ್ಯ ವಧೆ ಮಾಡುವ ಉದ್ದೇಶದಿಂದ ಕೇಸ್ ದಾಖಲಿಸಿದಂತೆ ಕಾಣುತ್ತಿದೆ, ಮತ್ತು ಅವರು ತಮ್ಮ ವಿದ್ಯಾರ್ಹತೆ ಪ್ರಮಾಣಪತ್ರಗಳನ್ನು ಸ್ಕ್ಯಾನ್ ಮಾಡಿ 2004ಮತ್ತು 2014ರ ಚುನಾವಣೆ ಸಂದರ್ಭದಲ್ಲಿ ಆಯೋಗಕ್ಕೆ ಸಲ್ಲಿಸಿದ್ದಾರೆ ಎಂದು ನ್ಯಾಯಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಚಿವ ಸ್ಮೃತಿ ಇರಾನಿ ಅವರು ದೆಹಲಿ ಚುನಾವಣಾ ಆಯೋಗಕ್ಕೆ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರು ಎಂದು ಬರಹಗಾರ ಅಹಮಿರ್ ಖಾನ್ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.