ಭಯೋತ್ಪಾದನೆ ವಿರುದ್ಧ ಸೌದಿ ಮತ್ತು ಭಾರತದ ಹೋರಾಟ : ಪ್ರಿನ್ಸ್ ಸಲ್ಮಾನ್
Recommended Video

ನವದೆಹಲಿ, ಫೆಬ್ರವರಿ 20 : ಉಗ್ರವಾದ ಮತ್ತು ಭಯೋತ್ಪಾದನೆ ಹೆಚ್ಚುತ್ತಿರುವ ಬಗ್ಗೆ ಭಾರತ ಮತ್ತು ಸೌದಿ ಅರೇಬಿಯಾ ಎರಡೂ ರಾಷ್ಟ್ರಗಳಿಗೆ ಕಾಳಜಿಯಿದೆ. ಭಯೋತ್ಪಾದನೆ ನಿಗ್ರಹದಲ್ಲಿ ಭಾರತದೊಡನೆ ಸಹಕರಿಸಲು ಸೌದಿ ಅರೇಬಿಯಾ ಯಾವತ್ತೂ ಸಿದ್ಧವಿದೆ ಎಂದು ಎರಡು ದಿನಗಳ ಭಾರತ ಪ್ರವಾಸಕ್ಕೆ ಬಂದಿರುವ ಸೌದಿ ಅರೇಬಿಯಾದ ಪ್ರಿನ್ಸ್ ಸಲ್ಮಾನ್ ಅವರು ಹೇಳಿದ್ದಾರೆ.
ನಮ್ಮ ಸ್ನೇಹಿತ ರಾಷ್ಟ್ರವಾದ ಭಾರತದ ಜೊತೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ಗುಪ್ತಚರ ಮಾಹಿತಿ ಹಂಚಿಕೊಳ್ಳಲು ಕೂಡ ಸೌದಿ ಅರೇಬಿಯಾ ಸಿದ್ಧವಿದೆ. ನಮ್ಮ ಮುಂದಿನ ಪೀಳಿಗೆಯ ಭವ್ಯ ಭವಿಷ್ಯತ್ತಿಗಾಗಿ ನಾವು ಸಹಕರಿಸಲು ಸಿದ್ಧರಿದ್ದೇವೆ ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಭಾರತಕ್ಕೆ ಆಗಮಿಸಿರುವ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಭಾರತದೊಡನೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದರು.

ಸೌದಿ ಅರೇಬಿಯಾ ರಾಷ್ಟ್ರ ಭಾರತದ ಅತ್ಯಂತ ಮೌಲ್ಯಯುತ ಭಾಗೀದಾರ ರಾಷ್ಟ್ರವಾಗಿದ್ದು, ನಮ್ಮ ಬಂಧಗಳು ಬಲವಾಗಿವೆ. ಭಾರತದ ಮೂಲಭೂತ ಸೌಕರ್ಯಗಳಲ್ಲಿ ಸೌದಿ ಅರೇಬಿಯಾ ಹೂಡಿಕೆ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪುಲ್ವಾಮಾದಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿ ಇಡೀ ವಿಶ್ವದಲ್ಲಿ ಆವರಿಸಿಕೊಂಡಿರುವ ಆತಂಕವಾದದ ಸಂಕೇತವಾಗಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಅವಶ್ಯಕತೆ ಇದೆ ಎಂಬ ಸಂಗತಿಯನ್ನು ನಾನು ಸಮರ್ಥಿಸುತ್ತೇನೆ ಎಂದು ಮೋದಿ ಒತ್ತಿ ಹೇಳಿದರು.
ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನರೆಡ ಆತ್ಮಾಹುತಿ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40ಕ್ಕೂ ಹೆಚ್ಚು ಜವಾನರು ಹುತಾತ್ಮರಾದರು. ಈ ದಾಳಿಯ ಹೊಣೆಯನ್ನು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಈ ಸಂಘಟನೆಯ ನೆಲೆ ಇರುವುದು ಪಾಕಿಸ್ತಾನದಲ್ಲಿ. ಆದರೆ, ಈ ದಾಳಿಗೂ ನನಗೂ ಸಂಬಂಧವಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ, ಪಾಕಿಸ್ತಾನದಲ್ಲೂ ಹೂಡಿಕೆ ಮಾಡಿರುವ ಸೌದಿ ಅರೇಬಿಯಾ ಭಾರತಕ್ಕೆ ಬಂದಿರುವುದು ವಿವಾದಕ್ಕೆ ಕಾರಣವಾಗಿದೆ.












Click it and Unblock the Notifications