ಕೊರೊನಾ ಸೋಂಕು ತಡೆಗೆ ರಾಷ್ಟ್ರೀಯ ನೀತಿ ರೂಪಿಸಿ: ಸೋನಿಯಾ ಒತ್ತಾಯ
ನವದೆಹಲಿ, ಮೇ 1: ಕೊರೊನಾ ಸೋಂಕು ತಡೆಗೆ ದೇಶದಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒತ್ತಾಯಿಸಿದ್ದಾರೆ.
ದೇಶದ ಎಲ್ಲಾ ನಾಗರಿಕರಿಗೂ ಕೋವಿಡ್-19 ಲಸಿಕೆಯನ್ನು ಉಚಿತವಾಗಿ ನೀಡಬೇಕು, ಲಸಿಕೆಯನ್ನು ವೇಗವಾಗಿ ನೀಡಲು ಉತ್ಪಾದನೆಯನ್ನು ವೃದ್ಧಿಸಲು ಕಡ್ಡಾಯ ಪರವಾನಗಿಯನ್ನು ಉತ್ಪಾದಕ ಕಂಪೆನಿಗಳಿಗೆ ಸರ್ಕಾರ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ವಿಡಿಯೊ ಸಂದೇಶದಲ್ಲಿ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ, ಕೆಲಸಗಳನ್ನು ನಿರ್ವಹಿಸುವ ಸಮಯವಿದು ಎಂದು ಹೇಳಿದ್ದಾರೆ.

ದೇಶದಲ್ಲಿನ ಕೋವಿಡ್ ಬಿಕ್ಕಟ್ಟು ಎದುರಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಲು ಮತ್ತು ಅದರ ಬಗ್ಗೆ ರಾಜಕೀಯ ಒಮ್ಮತವನ್ನು ತರಲು ಕೇಂದ್ರ ಸರ್ಕಾರವನ್ನು ಕೋರುತ್ತೇನೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಕೋವಿಡ್ ಔಷಧಿಗಳು ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟವಾಗುವುದನ್ನು ತಡೆಯಲು ತಪಾಸಣೆಯನ್ನು ಹೆಚ್ಚಿಸಬೇಕು, ಈ ಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರದ ಜೊತೆಗೆ ನಿಲ್ಲುತ್ತಿದ್ದು ಭಾರತೀಯರೆಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದಿದ್ದಾರೆ.
ಬಿಕ್ಕಟ್ಟಿನ ಸನ್ನಿವೇಶನದಲ್ಲಿ ಕೇಂದ್ರ ಸರ್ಕಾರ ಪ್ರತಿ ಬಡವರ ಕುಟುಂಬಗಳಿಗೆ ತಲಾ 6 ಸಾವಿರ ರೂಪಾಯಿ ನೀಡಬೇಕು, ಇಲ್ಲದಿದ್ದರೆ ಬಡವರಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ ಎಂದಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಕಳೆದ ಒಂದು ದಿನದಲ್ಲಿ 4,01,993, ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 3523 ಮಂದಿ ಸಾವನ್ನಪ್ಪಿದ್ದು, 2,99,988 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಒಟ್ಟು 1,91,64,969 ಪ್ರಕರಣಗಳಿವೆ, 32,68,710 ಸಕ್ರಿಯ ಪ್ರಕರಣಗಳಿವೆ, ಇದುವರೆಗೆ 2,11,853 ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಿಂದ ಒಟ್ಟು 1,56,84,406 ಮಂದಿ ಬಿಡುಗಡೆಗೊಂಡಿದ್ದಾರೆ.












Click it and Unblock the Notifications