ದೆಹಲಿ ಗಲಭೆ: ತಾಹಿರ್ ಹುಸೇನ್ ವಿರುದ್ಧ ಇ.ಡಿ ಆರೋಪಪಟ್ಟಿ ಸಲ್ಲಿಕೆ
ನವದೆಹಲಿ, ಅಕ್ಟೋಬರ್ 17: ದೆಹಲಿಯ ಈಶಾನ್ಯ ಭಾಗದಲ್ಲಿ ಫೆಬ್ರವರಿಯಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಶನಿವಾರ ಆರೋಪಪಟ್ಟಿ ದಾಖಲಿಸಿದೆ.
ಈ ಆರೋಪಪಟ್ಟಿಯನ್ನು ಪರಿಗಣಿಸಿರುವ ನ್ಯಾಯಾಲಯ, ಅಕ್ಟೋಬರ್ 19ರಂದು ಹುಸೇನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ, 2002ರ ಸೆಕ್ಷನ್ ನಾಲ್ಕರ ಅಡಿ ಶಿಕ್ಷಾರ್ಹ ಸೆಕ್ಷನ್ 3 (ಮನಿ ಲಾಂಡರಿಂಗ್) ಸೆಕ್ಷನ್ 70 (ಕಂಪೆನಿಗಳ ಅಪರಾಧ) ಗಳನ್ನು ಹುಸೇನ್ ಮತ್ತು ಸಹ ಆರೋಪಿ ಅಮಿತ್ ಗುಪ್ತಾ ವಿರುದ್ಧ ದಾಖಲಿಸಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಹಾಗೂ ಇತರೆ ಗಲಭೆಗಳಿಗೆ ಕುಮ್ಮಕ್ಕು ನೀಡಲು ನಕಲಿ ಕಂಪೆನಿಗಳನ್ನು ಬಳಸಿಕೊಂಡು ಸುಮಾರು 1.10 ಕೋಟಿ ರೂ ಹಣವನ್ನು ಹುಸೇನ್ ಹಾಗೂ ಆತನೊಂದಿಗೆ ನಂಟು ಇರುವ ವ್ಯಕ್ತಿಗಳು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಎಂಬ ಆರೋಪದಡಿ ಇ.ಡಿ. ತನಿಖೆ ನಡೆಸುತ್ತಿತ್ತು.

ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ಫೆಬ್ರವರಿ 24ರಂದು ಘರ್ಷಣೆ ನಡೆದಿತ್ತು. ಘಟನೆಯಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದರೆ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಗಲಭೆಯಲ್ಲಿ ತಾಹಿರ್ ಹುಸೇನ್ ಪ್ರಮುಖ ಸಂಚು ರೂಪಿಸಿದ್ದು ವಿಡಿಯೋಗಳಲ್ಲಿ ದಾಖಲಾಗಿತ್ತು.












Click it and Unblock the Notifications