ಕಾರ್ತಿ ಚಿದಂಬರಂ ವಿರುದ್ಧ ಹೊಸ ದೋಷಾರೋಪ ಸಾಧ್ಯತೆ
ನವದೆಹಲಿ, ಜೂನ್ 13: ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪಿ. ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹೊಸದಾಗಿ ದೋಷಾರೋಪ ಪಟ್ಟಿ ಸಲ್ಲಿಸುವ ನಿರೀಕ್ಷೆಯಿದೆ.
ದೋಷಾರೋಪವನ್ನು ಮೊದಲೇ ಸಲ್ಲಿಸಬೇಕಿತ್ತು. ಆದರೆ, ಜಾರಿ ನಿರ್ದೇಶನಾಲಯದ ಕೆಲವು ಅಧಿಕಾರಿಗಳು ಪಿ. ಚಿದಂಬರಂ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಪ್ರಕ್ರಿಯೆ ತಡವಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ದೋಷಾರೋಪ ಪಟ್ಟಿಯನ್ನು ಈ ಮೊದಲೇ ಸಲ್ಲಿಸಬೇಕಿತ್ತು. ಕೇಂದ್ರ ತನಿಖಾ ದಳದ ಕೆಲವು ಅಧಿಕಾರಿಗಳು ಚಿದಂಬರಂ ಅವರಿಗೆ ಸಹಾಯ ಮಾಡುತ್ತಿದ್ದಾರೆ.

ಕೆಲವು ಸಚಿವರೂ ಕೂಡ ಅವರಿಗೆ ನೆರವಾಗುತ್ತಿದ್ದರು. ಆದರೆ, ಪ್ರಧಾನಿ ಮೋದಿ ಅದಕ್ಕೆಲ್ಲ ಕಡಿವಾಣ ಹಾಕಿದ್ದಾರೆ. ತನಿಖೆಯಲ್ಲಿ ಯಾರ ಹಸ್ತಕ್ಷೇಪವನ್ನೂ ಉತ್ತೇಜಿಸದಂತೆ ಹಾಗೂ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಸಿಬಿಐ ಮತ್ತು ಇಡಿಗೆ ಸೂಚಿಸಲಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.
ಕಾರ್ತಿ ವಿರುದ್ಧ ಚಾರ್ಜ್ಷೀಟ್ ಹಾಕಿದ ಬಳಿಕ ಮತ್ತೊಂದು ಚಾರ್ಜ್ಷೀಟ್ಅನ್ನು ಚಿದಂಬರಂ ಅವರ ಮೇಲೆ ಹಾಕಲಾಗುತ್ತದೆ. ಚಿದಂಬರಂ ಅವರು ಮತ್ತೆ ಇಡಿ ಎದುರು ಹಾಜರಾಗಬೇಕಾಗಲಿದೆ. ಅವರು ಸುಳ್ಳನ್ನು ಹೇಳುವುದನ್ನು ಮುಂದುವರಿಸಿದ್ದಾರೆ. ಆದರೆ, ಸಿಕ್ಕಿಬೀಳುತ್ತಾರೆ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರನ್ನು ಫೆ. 28ರಂದು ಇಂಗ್ಲೆಂಡ್ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಗಿತ್ತು. ಸದ್ಯ, ಕಾರ್ತಿ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.
ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ 2007ರಲ್ಲಿ ಐಎನ್ಎಕ್ಸ್ ಮೀಡಿಯಾಕ್ಕೆ ವಿದೇಶದಿಂದ 305 ಕೋಟಿ ದೇಣಿಗೆ ಪಡೆದುಕೊಳ್ಳಲು ಎಫ್ಐಪಿಬಿ ಅನುಮೋದನೆ ಕೊಡಿಸಲು ಕಂಪೆನಿಯಿಂದ ಹಣ ಪಡೆದ ಆರೋಪವನ್ನು ಕಾರ್ತಿ ಎದುರಿಸುತ್ತಿದ್ದಾರೆ.












Click it and Unblock the Notifications