ಮಹಿಳಾ ಕಾಲೇಜಿಗೆ ನುಗ್ಗಿದ ಮತ್ತೇರಿದವರು ಮಾಡಿದರು ಅನಾಚಾರ
ನವದೆಹಲಿ, ಫೆಬ್ರವರಿ 10: ರಾಷ್ಟ್ರ ರಾಜಧಾನಿ ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ.
ದೆಹಲಿಯ ಗಾರ್ಗಿ ಮಹಿಳಾ ಕಾಲೇಜಿಗೆ ನುಗ್ಗಿದ ದೊಡ್ಡ ಪಾನಮತ್ತ ಗುಂಪೊಂದು ಭಾರಿ ಅನಾಚಾರಗಳನ್ನು ಎಸಗಿದೆ. ಕಾಲೇಜು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದೆ.
ಕಳೆದ ವಾರ ಗಾರ್ಗಿ ಕಾಲೇಜಿನಲ್ಲಿ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಯುವತಿಯರೆಲ್ಲ ಸಂತಸದಿಂದ, ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಸುಮಾರು 50 ಮಂದಿಯಿದ್ದ ದೊಡ್ಡ ಗುಂಪೊಂದು ಗೇಟ್ ಮುರಿದು, ಕಾಂಪೌಂಡ್ ಗೋಡೆಗಳನ್ನು ಹಾರಿ ಒಳಕ್ಕೆ ನುಗ್ಗಿದೆ.
ಬಹುತೇಕರು ಪಾನಮತ್ತರಾಗಿದ್ದರು ಮತ್ತು ಕಾಲೇಜಿನ ಒಳಗೆ ಬಂದಾಗಲೂ ಕೈಯಲ್ಲಿ ಬಾಟಲಿ ಹಿಡಿದು ಕುಡಿಯುತ್ತಾ, ಸಿಗರೇಟು ಸೇದುತ್ತಿದ್ದರು. ಈ ಗುಂಪಿನಲ್ಲಿ ಬಹುತೇಕರು ಮಧ್ಯ ವಯಸ್ಸಿನವರಾಗಿದ್ದರು ಎಂದು ವಿದ್ಯಾರ್ಥಿನಿಯರು ಮಾಧ್ಯಮಗಳಿಗೆ ಹೇಳಿದ್ದಾರೆ.

ಹುಡುಗಿಯರ ಮುಂದೆಯೇ ಹಸ್ತ ಮೈಥುನ
ಕಾಲೇಜು ಒಳಗೆ ಬಂದ ಪಾನಮತ್ತ ಮಂದಿ ಹುಡುಗಿಯರನ್ನು ರೇಗಿಸುವುದು, ಮೈ-ಕೈ ಮುಟ್ಟುವುದು ಮಾಡಿದೆ. ಅಷ್ಟೇ ಅಲ್ಲದೆ, ಹುಡುಗಿಯರ ಮುಂದೆ ಹಸ್ತ ಮೈಥುನ ಮಾಡಿಕೊಂಡು ಅಸಹ್ಯ ಮೆರೆದಿದ್ದಾರೆ.

ಮತ್ತೆ ಕೈಕಟ್ಟಿ ಕೂತ ಪೊಲೀಸರು
ವಾರ್ಷಿಕೋತ್ಸವದ ಪ್ರಯುಕ್ತ ಕಾಲೇಜಿನ ಗೇಟಿನ ಬಳಿಯೇ ದೆಹಲಿಯ ರ್ಯಾಪಿಡ್ ಫೋರ್ಸ್ ಭದ್ರತೆ ನಿಯೋಜಿಸಲಾಗಿತ್ತಾದರೂ ದೆಹಲಿ ಪೊಲೀಸರು ಮಾಮೂಲಿನಂತೆ ಏನೂ ಮಾಡದೆ ಸುಮ್ಮನೆ ನಿಂತಿದ್ದಾರೆ.

ಕಂಟ್ರೋಲ್ ರೂಂ ಗೆ ಕರೆ ಮಾಡಿದರೂ ಪ್ರತಿಕ್ರಿಯೆ ಇಲ್ಲ
ವಿಚಿತ್ರವೆಂದರೆ, ಯುವತಿಯರು ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದರೂ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಕೂಡಲೇ ಕೆಲವು ಯುವತಿಯರು ಕಾಲೇಜು ಬಿಟ್ಟು ಹೊರ ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ ಅಲ್ಲೂ ಕೆಲವರು ಯುವತಿಯರನ್ನು ಹಿಂಬಾಲಿಸಿಕೊಂಡು ಹೋಗಿ ಕಿರುಕುಳ ನೀಡಿದ್ದಾರೆ.

ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾದ ಪ್ರಾಂಶುಪಾಲೆ ಹೇಳಿಕೆ
ಘಟನೆ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದರೆ, ಘಟನೆ ಬಗ್ಗೆ ಯಾವುದೇ ಕ್ರಮ ಜರುಗಿಸಲು ಸಾಧ್ಯವಿಲ್ಲವೆಂದು ಪ್ರಾಂಶುಪಾಲರೇ ಹೇಳಿದ್ದಾರೆ. 'ನಿಮಗೆ ಹಿಂಸೆ ಆಗುತ್ತದೆ ಎಂದಾದರೆ ಕಾಲೇಜಿಗೆ ಬರಬೇಡಿ' ಎಂದು ಪ್ರಾಂಶುಪಾಲೆ ವಿದ್ಯಾರ್ಥಿನಿಯರಿಗೆ ಹೇಳಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿನಿಯರ ಪ್ರತಿಭಟನೆ
ಆಡಳಿತ ಮಂಡಳಿ ವಿರುದ್ಧ ಹಾಗೂ ಲೈಂಗಿಕ ಕಿರುಕುಳ ಘಟನೆ ಖಂಡಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಗಾರ್ಗಿ ಕಾಲೇಜಿಗೆ ಇಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಆಯೋಗದ ವತಿಯಿಂದ ದೆಹಲಿ ಪೊಲೀಸರಿಗೆ ನೊಟೀಸ್ ಸಹ ಕಳುಹಿಸಿದ್ದಾರೆ. ಲೋಕಸಭೆಯಲ್ಲೂ ಸಹ ವಿಷಯ ಇಂದು ಚರ್ಚೆ ಆಗಿದೆ.

ನಾಲ್ಕು ದಿನವಾದರೂ ಇನ್ನೂ ಯಾರನ್ನೂ ಬಂಧಿಸಿಲ್ಲ
ದೆಹಲಿ ಪೊಲೀಸರು ಘಟನೆ ಬಗ್ಗೆ ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದೇವೆ ಎಂದಿದ್ದಾರೆ. ಕಾಲೇಜಿನ ಸಿಸಿಟಿವಿ ದೃಶ್ಯಾವಳಿಗಳನ್ನು ಕೊಂಡೊಯ್ದು ತನಿಖೆ ಮಾಡಲಾರಂಭಿಸಿದ್ದಾರೆ. ಘಟನೆ ನಡೆದು ನಾಲ್ಕು ದಿನವಾದರೂ ಇನ್ನೂ ಯಾವ ಬಂಧನವೂ ಆಗಿಲ್ಲ.

ಘಟನೆಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ
ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರು ಘಟನೆಯನ್ನು ಕಠು ಶಬ್ದಗಳಲ್ಲಿ ಖಂಡಿಸಿದ್ದಾರೆ. ಯಾರೋ ಯೋಜನೆ ರೂಪಿಸಿ ಕಾಲೇಜಿನ ಒಳಕ್ಕೆ ಗುಂಪನ್ನು ನುಗ್ಗಿಸಿದ್ದಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಲಾಗಿದೆ.












Click it and Unblock the Notifications