ಪದೇ ಪದೆ ಕ್ಯಾತೆ ತೆಗೀಬೇಡಿ: ತಮಿಳ್ನಾಡಿಗೆ ಛೀಮಾರಿ

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಮಂಗಳವಾರ ಪರಿಶೀಲಿಸಿದ ಸುಪ್ರೀಂಕೋರ್ಟ್, ತಮಿಳುನಾಡು ಸರ್ಕಾರವನ್ನು ಹೀಗೆ ತರಾಟೆಗೆ ತೆಗೆದುಕೊಂಡಿದೆ.
ಮೇಕೆದಾಟು ಜಲ ವಿದ್ಯುತ್ ಯೋಜನೆ ಸ್ಥಗಿತವಿಲ್ಲ
'ಪದೇ ಪದೆ ಕ್ಯಾತೆ ತೆಗೆದು, ಕಿತ್ತಾಡಬೇಡಿ. ಈಗಾಗಲೇ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಿರ್ವಹಣಾ ಮಂಡಳಿ ಬದಲಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಕಾವೇರಿ ನೀರು ಉಸ್ತುವಾರಿ ಸಮಿತಿ ರಚಿಸಿದೆ. ಹೀಗಿರುವಾಗ, ನಿರ್ವಹಣಾ ಮಂಡಳಿ ರಚನೆಗೆ ತರಾತುರಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ, ಆಯ್ತಾ?' ಎಂದು ನ್ಯಾಯಮೂರ್ತಿ ಆರ್ ಎಂ ಲೋಧಾ ನೇತೃತ್ವದ ನ್ಯಾಯಪೀಠ ತಮಿಳ್ನಾಡಿಗೆ ಖಾರವಾಗಿ ಹೇಳಿದೆ.
'ನಿಮ್ಮ ಪಾಲಿನ ನೀರನ್ನು ಕರ್ನಾಟಕ ಈಗಾಗಲೇ ಬಿಟ್ಟು ಕೊಟ್ಟಿದೆ. ಮತ್ತೇಕೆ ಇಷ್ಟೊಂದು ಕಾತುರ. ಒಂದು ವೇಳೆ ನಿಮ್ಮ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುವಂತಹ ಸಂದರ್ಭಗಳು ಸೃಷ್ಟಿಯಾದರೆ ನ್ಯಾಯಾಲಯಕ್ಕೆ ಬನ್ನಿ. ಪದೇ ಪದೆ ಈ ಕಿತ್ತಾಟ ಸರಿಯಲ್ಲ' ಎಂದು ಪೀಠವು ತಮಿಳುನಾಡು ಸರ್ಕಾರದ ವರ್ತನೆಯನ್ನು ತೀವ್ರವಾಗಿ ಖಂಡಿಸಿತು.
'ಮೇಕೆ ದಾಟು ವಿದ್ಯುತ್ ಯೋಜನೆ ತಡೆ ಕೋರಿದ್ದ ಅರ್ಜಿ ಪ್ರಸ್ತಾಪಿಸಿದ ಪೀಠವು ಯಾವುದೇ ಯೋಜನೆಗಳು ಒಂದೆರಡು ದಿನಗಳಲ್ಲಿ ಮುಗಿಯುವುದಿಲ್ಲ. ಅದಕ್ಕೆ ತಡೆ ಕೋರಲು ಈ ಆತುರ, ತರಾತುರಿ ಏಕೆ?' ಎಂದೂ ನ್ಯಾಐಪೀಠ ಪ್ರಶ್ನಿಸಿತು.
'ಮ್ಯಾಜಿಕ್ ಮಾಡಿ ಯಾವುದೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದಿಲ್ಲ. ಹಾಗಾಗಿ ಅರ್ಜಿಗಳನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ. ವಿದ್ಯುತ್ ಯೋಜನೆಗಳ ಕಾಮಗಾರಿಯೇ ಇನ್ನೂ ಆರಂಭವಾಗಿಲ್ಲ. ಆಗಲೇ ಅದಕ್ಕೆ ತಡೆ ಕೋರುವ ಅಗತ್ಯವೇನಿದೆ' ಎಂದೂ ನ್ಯಾಯಮೂರ್ತಿ ಲೋಧಾ ಅವರ ಪೀಠವು ತಮಿಳುನಾಡು ಸರಕಾರವನ್ನು ಪ್ರಶ್ನಿಸಿದೆ.












Click it and Unblock the Notifications