ಐಟಿ ದಾಳಿಯನ್ನು ಯಾವ ಚುನಾವಣೆಗೂ ತಾಳೆ ಮಾಡಬೇಡಿ: ಅರುಣ್ ಜೇಟ್ಲಿ
ನವದೆಹಲಿ, ಆಗಸ್ಟ್ 2: "ಐಟಿ ಅಧಿಕಾರಿಗಳು ಯಾವುದೇ ರೆಸಾರ್ಟ್ ಮೇಲೆ ದಾಳಿ ನಡೆಸಿಲ್ಲ. ಯಾರ ಮೇಲೆ ದಾಳಿ ನಡೆಸಬೇಕಿತ್ತೋ ಆ ವ್ಯಕ್ತಿ ರೆಸಾರ್ಟಿನಲ್ಲಿದ್ದಿದ್ದರಿಂದ ಐಟಿ ಅಧಿಕಾರಿಗಳಲು ಅಲ್ಲಿಗೇ ತೆರಳಬೇಕಾಯಿತು ಅಷ್ಟೆ. ಐಟಿ ಅಧಿಕಾರಿಗಳು ಅವರನ್ನು ಅವರ ಮನೆಗೇ ಕರೆತಂದು ವಿಚಾರಣೆ ನಡೆಸುವುದರಲ್ಲಿದ್ದರು. ಆ ಸಮಯದಲ್ಲಿ ಸಚಿವರು ಕೆಲವು ದಾಖಲೆಗಳನ್ನು ಹರಿಯುವುದಕ್ಕೆ ಪ್ರಯತ್ನಿಸಿದರು. ಈ ದಾಳಿಗೂ ಯಾವುದೇ ಚುನಾವಣೆಗೂ ಸಂಬಂಧವಿಲ್ಲ, ದಯವಿಟ್ಟು ಅವುಗಳಿಗೆ ತಾಳೆ ಮಾಡಬೇಡಿ" ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಲೋಕಸಭೆಯಲ್ಲೂ ಇಂದು(ಆಗಸ್ಟ್ 2) ಕರ್ನಾಟಕ ರಾಜ್ಯ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ನಿವಾಸಗಳ ಮೇಲಿನ ಐಟಿ ದಾಳಿ ಪ್ರತಿಧ್ವನಿಸಿತು.

ಡಿ ಕೆ ಶಿವಕುಮಾರ್ ಅವರ ನಿವಾಸ, ಅವರಿದ್ದ ರೆಸಾರ್ಟ್ ಗಳ ಮೇಲೆ ಐಟಿ ರೇಡ್ ನಡೆದಿರುವ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಅರುಣ್ ಜೇಟ್ಲಿ ಉತ್ತರಿಸಿದರು.
'ರಾಜ್ಯ ಸಭೆಯಲ್ಲಿ ಗೆಲ್ಲುವುದಕ್ಕಾಗಿ ಬಿಜೆಪಿಯೇ ಐಟಿ ರೇಡ್ ಮಾಡಿಸಿದೆ' ಎಂದು ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ಕಿಡಿಕಾರಿದ್ದರು
ಡಿಕೆ ಶಿವಕುಮಾರ್ ಅವರು ತಂಗಿದ್ದ ಕೋಣೆಯ ಮೇಲೆಯೂ ದಾಳಿ ನಡೆಸಲಾಗಿದೆ. ಇಂಥ ಅಕ್ರಮ ಕೆಲಸವನ್ನು ಮಾಡಿದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಬರುವುದು ಹೇಗೆ ಎಂದು ಖರ್ಗೆ ಪ್ರಶ್ನಿಸಿದ್ದರು. ಯಾರಾದರೂ ಭ್ರಷ್ಟಾಚಾರದಲ್ಲಿ ತೊಡಗಿದರೆ ಅವರವಿರುದ್ಧ ಕ್ರಮ ಕೈಗೊಳ್ಳುವುದರ ಬಗ್ಗೆ ನನ್ನ ಅಭ್ಯಂತರವಿಲ್ಲ. ನಾನೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರೂ ಕ್ರಮಕೈಗೊಳ್ಳಿ. ಆದರೆ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ನಿಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬೇಡಿ ಎಂದು ಖರ್ಗೆ ಹೇಳಿದ್ದರು..












Click it and Unblock the Notifications