ಮಿತಿಮೀರಿದ ಮಾಲಿನ್ಯ, ದೆಹಲಿಯಲ್ಲಿ ಪ್ರಾಥಮಿಕ ಶಾಲೆಗಳಿಗೆ ಬುಧವಾರ ರಜೆ
ನವದೆಹಲಿ, ನವೆಂಬರ್ 7: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಮಿತಿಮೀರಿದೆ. ಈ ಹಿನ್ನಲೆಯಲ್ಲಿ 'ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ' ಘೋಷಿಸಲಾಗಿದೆ.
ವಾತಾವರಣದಲ್ಲಿ ಗಾಢ ಹೊಗೆ ತುಂಬಿಕೊಂಡಿರುವುದರಿಂದ ಎಲ್ಲಾ ಸರಕಾರಿ ಮತ್ತು ಪ್ರಾಥಮಿಕ ಶಾಲೆಗಳಿಗೆ ನಾಳೆ ಅಂದರೆ ಬುಧವಾರ ರಜೆ ಘೋಷಿಸಲಾಗಿದೆ. ಇದಲ್ಲದೆ 5 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಪ್ರಾರ್ಥನೆ ಸೇರಿದಂತೆ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

ಒಂದೊಮ್ಮೆ ಅಗತ್ಯವಾದಲ್ಲಿ ಶಾಲೆಗಳ ರೆಜೆಯನ್ನು ವಿಸ್ತರಣೆ ಮಾಡಲಾಗುವುದು ಎಂದೂ ಸಿಸೋಡಿಯಾ ಹೇಳಿದ್ದಾರೆ. ಇದಲ್ಲದೆ ದೆಹಲಿಯ ಜನರಿಗೆ ಬೆಳಗ್ಗಿನ ಮತ್ತು ಸಂಜೆಯ ವಾಕಿಂಗ್ ಮಾಡದಂತೆಯೂ ಸರಕಾರ ಸಲಹೆ ನೀಡಿದೆ.
ಇದಲ್ಲದೆ ಸುಪ್ರಿಂ ಕೋರ್ಟ್ ನೇಮಿಸಿರು ಸಮಿತಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ದೆಹಲಿ ಸರಕಾರಕ್ಕೆ ಸೂಚನೆ ನೀಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಪಾರ್ಕಿಂಗ್ ಶುಲ್ಕಗಳನ್ನು ನಾಲ್ಕು ಪಟ್ಟು ಹೆಚ್ಚು ಮಾಡಲು ಸಲಹೆ ನೀಡಲಾಗಿದೆ. ಇದರಿಂದ ಸಾರ್ವಜನಿಕ ಸಾರಿಗೆಗ ಜನರು ಮೊರೆ ಹೋಗಬಹುದು ಎಂದುಕೊಳ್ಳಲಾಗಿದೆ. ಇದಲ್ಲದೆ ಕನಿಷ್ಠ 10 ಗಂಟೆಗಳ ಕಾಲ ದೆಹಲಿ ಮೆಟ್ರೋದ ದರಗಳನ್ನೂ ಕಡಿಮೆ ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ.
ಗಾಳಿಯ ಮಾಲಿನ್ಯವನ್ನು ಅಳೆಯುವ ಮಾಪನದಲ್ಲಿ 500 ಅತೀ ಹೆಚ್ಚಿನ ಮಟ್ಟವಾಗಿದ್ದು ಈಗಾಗಲೇ ದೆಹಲಿಯ ಗಾಳಿಯ ಗುಣಮಟ್ಟ 451ರ ಗೆರೆ ತಲುಪಿದೆ. ಹೀಗಾಗಿ 'ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ' ಘೋಷಿಸಲಾಗಿದೆ.












Click it and Unblock the Notifications