ಕೆಂಪುಕೋಟೆಯಲ್ಲಿ ಸಿಲುಕಿದ್ದ 300 ಕಲಾವಿದರನ್ನು ರಕ್ಷಿಸಿದ ಪೊಲೀಸರು
ನವದೆಹಲಿ, ಜನವರಿ.26: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸಿದ ಟ್ರ್ಯಾಕ್ಟರ್ ಜಾಥಾ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಕೆಂಪುಕೋಟೆಗೆ ಪ್ರತಿಭಟನಾಕಾರರು ನುಗ್ಗಿದ ವೇಳೆ ಸಾಕಷ್ಟು ಆತಂಕ ಮನೆ ಮಾಡಿತ್ತು.
72ನೇ ಗಣರಾಜ್ಯೋತ್ಸವ ದಿನದ ಹಿನ್ನೆಲೆ ಸಾಂಸ್ಕೃತಿ ಕಾರ್ಯಕ್ರಮಗಳಿಗಾಗಿ ದೆಹಲಿಗೆ ತೆರಳಿದ 300ಕ್ಕೂ ಹೆಚ್ಚು ಕಲಾವಿದರು ಕೆಂಪುಕೋಟೆಯಲ್ಲಿ ಸಿಲುಕಿಕೊಂಡಿದ್ದರು. ತೀವ್ರ ಆತಂಕದಲ್ಲಿದ್ದ ಕಲಾವಿದರನ್ನು ದೆಹಲಿ ಪೊಲೀಸರು ರಕ್ಷಿಸಿದ್ದಾರೆ.
ಕೆಂಪುಕೋಟೆಯಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚು ಕಲಾವಿದರಲ್ಲಿ ಮಕ್ಕಳು ಮತ್ತು ಮಹಿಳೆಯರೂ ಕೂಡಾ ಸೇರಿದ್ದರು. ಎಲ್ಲರನ್ನೂ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದ್ದು, ಆಹಾರವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ಡಿಸಿಪಿ ಅಂಟೋ ಅಲ್ಫಾನ್ಸ್ ತಿಳಿಸಿದ್ದಾರೆ.

ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು:
ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯಿಂದ ಮಂಗಳವಾರ ನವದೆಹಲಿ ಅಕ್ಷರಶಃ ರಣರಂಗವಾಯಿತು. ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಬಿಗಿ ಭದ್ರತೆ ನಡುವೆ ಕೆಂಪುಕೋಟೆಗೆ ಪ್ರತಿಭಟನಾನಿರತ ರೈತರು ನುಗ್ಗಿದರು. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮೇಲೆಯೇ ಪ್ರತಿಭಟನಾಕಾರರು ದಾಳಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

18 ಆರಕ್ಷಕರು ಆಸ್ಪತ್ರೆಗೆ ದಾಖಲು:
ಭಾರತದ 72ನೇ ಗಣರಾಜ್ಯೋತ್ಸವ ದಿನದಂದೇ ರಾಷ್ಟ್ರ ರಾಜಧಾನಿ ರಣರಂಗವಾಯಿತು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರ ಆಕ್ರೋಶದ ಕಿಚ್ಚಿಗೆ ನವದೆಹಲಿ ಹೊತ್ತಿ ಉರಿಯಿತು. ರೈತರು ಮತ್ತು ಪೊಲೀಸರ ನಡುವಿನ ಸಂಘರ್ಷದಲ್ಲಿ 18 ಮಂದಿ ಆರಕ್ಷಕರು ಗಾಯಗೊಂಡಿದ್ದು, ದೆಹಲಿಯ ಲೋಕನಾಥ ಜಯಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications