8 ವರ್ಷದ ಹಿಂದಿನ ಭಯಾನಕ ಮರ್ಡರ್ ಮಿಸ್ಟ್ರಿ, ಪತ್ನಿಯೇ ಕೊಲೆಗಾರ್ತಿ!
ನವದೆಹಲಿ, ಅಕ್ಟೋಬರ್ 08: ಎಂಟು ವರ್ಷಗಳ ಹಿಂದೆ ವ್ಯಕ್ತಿಯನ್ನು ಕೊಂದು, ಆತನ ದೇಹದ ಭಾಗಗಳನ್ನು ರಸ್ತೆಯಲ್ಲೆಲ್ಲ ಬಿಸಾಡಿದ್ದ ಭಯಾನಕ ಮರ್ಡರ್ ಮಿಸ್ಟ್ರಿಯನ್ನು ಭೇದಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
2011 ರಲ್ಲಿ ರವಿ ಎಂಬ ವ್ಯಕ್ತಿಯನ್ನು ಕೊಂದು, ಅವನ ದೇಹವನ್ನು ಸುಟ್ಟು, ನಂತರ ದೇಹದ ಭಾಗಗಳನ್ನು ಕತ್ತರಿಸಿ ರಸ್ತೆಯ ಬೇರೆ ಬೇರೆ ಭಾಗಗಳಲ್ಲಿ ಬಿಸಾಡಲಾಗಿತ್ತು.
ಸಾಕ್ಷ್ಯಗಳು ಸಿಗಬಾರದೆಂಬ ಕಾರಣಕ್ಕೆ ಈ ರೀತಿ ಮಾಡಿದ್ದರಿಂದ ಪೊಲೀಸರಿಗೂ ಮೃತದೇಹದ ಪೋಸ್ಟ್ ಮಾರ್ಟಮ್ ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಕೊಲೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯೇ ಲಭ್ಯವಾಗಿರಲಿಲ್ಲ.

ಆದರೆ ಪೊಲೀಸರಿಗೆ ರವಿ ಪತ್ನಿ ಶಕುಂತಲಾ ಮತ್ತು ಆಕೆಯ ಸ್ನೇಹಿತ ಕಮಲ್ ಮೇಲೆ ಬಲವಾದ ಅನುಮಾನವಿತ್ತು. ಆದರೆ ಯಾವುದೇ ಸಾಕ್ಷ್ಯಗಳಿಲ್ಲದೆ ಪೊಲೀಸರು ಅವರನ್ನು ಅಪರಾಧಿಗಳು ಎಂದು ಸಾಬೀತುಪಡಿಸಲಾಗದೆ ಸುಮ್ಮನಿದ್ದರು.
ರವಿ ಸಾವಿನ ಕೆಲವೇ ದಿನಗಳ ನಂತರ ಶಕುಂತಲಾ ಯಾವುದೇ ರೀತಿಯಲ್ಲಿಯೂ ದುಃಖಪಡದೆ ಇದ್ದಿದ್ದು, ಮತ್ತು ಶಕುಂತಲಾ ಕಮಲ್ ಇಬ್ಬರೂ ಒಟ್ಟಿಗೇ ಓಡಾಡುತ್ತಿದ್ದುದರಿಂದ ಪೊಲೀಸರಿಗೆ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು. ಆದರೆ ಇಬ್ಬರು ಆರೋಪಿಗಳೂ ಎಲ್ಲಯೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ.
ಕೊನೆಗೆ 2017 ರಲ್ಲಿ ಕೊಟ್ಟಕೊನೆಯ ಪ್ರಯತ್ನ ಎಂಬಂತೆ ಆರೋಪಿ ಕಮಲ್ ಮತ್ತು ರವಿ ಕೊಲೆಯಾಗುವ ಸಂದರ್ಭದಲ್ಲಿ ಕಾರನ್ನು ಡ್ರೈವ್ ಮಾಡುತ್ತಿದ್ದ ಡ್ರೈವರ್ ಇಬ್ಬರನನ್ನೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕಮಲ್ ತಾವೇ ಈ ಕೊಲೆ ಮಾಡಿದ್ದು ಎಂಬುದನ್ನು ಒಪ್ಪಿಕೊಂಡಿದ್ದರು.
2011 ರಲ್ಲಿ 70,000 ರೂ.ಗಳನ್ನು ನೀಡಿ ಒಬ್ಬ ಡ್ರೈವರ್ ಎಂಬುವವರನ್ನು ನೇಮಿಸಿಕೊಂಡು, ಆತನಿಗೆ ಸಂಚಿನ ಬಗ್ಗೆ ತಿಳಿಸಲಾಗಿತ್ತು. ತನ್ನ ತಂಗಿಯ ಮನೆಗೆ ತೆರಳಬೇಕೆಂದು ಸುಳ್ಳು ಹೇಳಿ ರವಿಯನ್ನು ಕರೆದುಕೊಂಡು ಶಕುಂತಲಾ ಕಾರಿನಲ್ಲಿ ಹೊರಟಿದ್ದರು. ಹಾದಿ ನಡುವೆ ಕಮಲ್ ಕಾರಿಗೆ ಹತ್ತಿಕೊಂಡಿದ್ದ. ಸಂಚಿನ ಬಗ್ಗೆ ತಿಳಿದಿದ್ದ ಡ್ರೈವರ್ ನಿರ್ಜನ ಪ್ರದೇಶಕ್ಕೆ ಕಾರನ್ನು ತೆಗೆದುಕೊಂಡು ಹೋಗಿದ್ದ. ಅಲ್ಲಿ ರವಿಯನ್ನು ಕೊಂದು, ಆತನ ಶವವನ್ನು ಸುಡಲಾಗಿತ್ತು. ನಂತರ ದೇಹವನ್ನು ತುಂಡದುಗಳಾಗಿ ಕತ್ತರಿಸಿ ರಸ್ತೆಯಲ್ಲಿ ಎಸೆಯಲಾಗಿತ್ತು. ಪೊಲೀಸರಿಗೆ ರಸ್ತೆಯಲ್ಲಿ ಒಟ್ಟು 25 ತುಂಡುಗಳು ಸಿಕ್ಕಿದ್ದವು.
ಇದೀಗ ಡ್ರೈವರ್ ಮತ್ತು ಕಮಲ್ ನನ್ನು ಬಂಧಿಸಲಾಗಿದ್ದು, ಗರ್ಭಿಣಿಯಾಗಿರುವ ಶಕುಂತಲಾ ತಲೆಮರೆಸಿಕೊಂದಿದ್ದಾರೆ.












Click it and Unblock the Notifications