PACL 45000 ಕೋ ರೂ ಹಗರಣ ಬಯಲಿಗೆಳೆದ ಸಿಬಿಐ!
ನವದೆಹಲಿ, ಫೆ.28: ಅಬ್ಬಬ್ಬಾ! ಸಿಬಿಐ ತನಿಖಾ ಸಂಸ್ಥೆಯು ಬರೋಬ್ಬರಿ 45,000 ಕೋಟಿ ರೂ ಅಗಾಧ ಪ್ರಮಾಣದ ವಂಚನೆ ಜಾಲವನ್ನು ಬಯಲಿಗೆಳೆದಿದೆ. ಇದನ್ನು ಅರಗಿಸಿಕೊಳ್ಳುವುದಕ್ಕೆ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ. ಆದರೆ ಇದೇ ಜನಸಾಮಾನ್ಯರ ಹಣವನ್ನೇ 2 ಖದೀಮ ಕಂಪನಿಗಳು ಜೀರ್ಣಿಸಿಕೊಂಡಿರುವುದು.
ಭಾರಿ ಮೊತ್ತದ ಹಗರಣವು ಇದೀಗ ಸಿಬಿಐ ಕಣ್ಣಿಗೆ ಬಿದ್ದಿದ್ದು, ದೆಹಲಿ ನೆಲೆಯ PACL (Pearls) ಮತ್ತು PGF ಎಂಬ 2 ಕಂಪನಿಗಳು ಮಹಾ ದಗಾಕೋರ ಕಂಪನಿಗಳಾಗಿವೆ. ಸುಮಾರು 5 ಕೋಟಿ ಜನರಿಗೆ ಈ ಕಂಪನಿಗಳು ಸಾಂಗೋಪಾಂಗವಾಗಿ ಉಂಡೆನಾಮ ತಿಕ್ಕಿವೆ. ಇದೀಗ ಕಂಪನಿಗಳ ಕಾರ್ಯವಾಹಕ ನಿರ್ದೇಶಕರುಗಳಾದ ಸುಖದೇವ್ ಸಿಂಗ್ (Sukhdev Singh) ಹಾಗೂ ನಿರ್ಮಲಸಿಂಗ್ ಭಾಂಗೂ (Nirmal Singh Bhangoo) ಮತ್ತು ಆರು ಮಂದಿ ನಿರ್ದೇಶಕರು ಸಿಬಿಐ ಹಿಡಿತದಲ್ಲಿದ್ದಾರೆ.

ಇದರಲ್ಲಿ ಸಾರ್ವಜನಿಕರಿಂದ ಭಾರಿ ಮೊತ್ತದ ಹಣ ಸಂಗ್ರಹಿಸಿರುವ ಬಗ್ಗೆ ದಾಖಲೆ, ಪುರಾವೆಗಳು ಲಭ್ಯವಾಗಿವೆ. ಅಷ್ಟೇ ಅಲ್ಲದೆ, ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣವನ್ನು ಉದ್ದೇಶಿತ ಯೋಜನೆಗಳಿಗೆ ಬಳಸದೆ, ದುರ್ಬಳಕೆ ಮಾಡಿಕೊಂಡು ಬೇರೆಯದೇ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ಸಂಪೂರ್ಣವಾದ ದಾಖಲೆಗಳು ಲಭ್ಯವಾಗಿವೆ!
ಅಂದಹಾಗೆ ಇಂತಹ ಹಗರಣ ತನ್ನ ಗಮನಕ್ಕೆ ಬಂದಿತ್ತು, ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.
(ಪುಣ್ಯಕ್ಕೆ ಈ ಕಂಪನಿಯು ಕರ್ನಾಟಕಕ್ಕೆ ಕಾಲಿಟ್ಟಿಲ್ಲ. ಹಾಗಾಗಿ ಕನ್ನಡಿಗರು ಬಚಾವಾದಂತಿದೆ! - ನಮ್ಮ ಓದುಗುರು ಹೇಳುತ್ತಿರುವಂತೆ ಕರ್ನಾಟಕದಲ್ಲಿಯೂ ಈ ಕಂಪನಿಗಳು ಭರ್ಜರಿ ಉಂಡೆ ನಾಮ ತಿಕ್ಕಿವೆ. ಆದರೆ ಅತ್ಯಂತ ಖೇದದ ಸಂಗತಿಯೆಂದರೆ 'ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ' ಎಚ್ರಾ)
ಈ ಕಂಪನಿಗಳ ವಂಚಕರು ಭೂಮಿ ನೀಡುವುದಾಗಿ ಸಾರ್ವಜನಿಕರಿಗೆ ಮಂಕುಬೂದಿ ತೂರಿ ಸಾವಿರಾರು ಕೋಟಿ ಹಣ ಸುಲಿಗೆ ಮಾಡಿದ್ದಾರೆ. ಹಗರಣದ ಆಳಕ್ಕೆ ಇಳಿದಂತೆಲ್ಲ ನಿರೀಕ್ಷೆಗೆ ನಿಲುಕದ ಅಗಾಧ ಪ್ರಮಾಣದ ಹಗರಣಗಳು ಬಿಚ್ಚಿಕೊಳ್ಳುತ್ತಿವೆ. ಇದೊಂದು ಘೋರವಾದ ಪ್ರಕರಣ ಎಂದು ಸಿಬಿಐ ಹಿರಿಯ ಮಹಿಳಾ ಅಧಿಕಾರಿಯೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಮೊದಲ ಬಾರಿಗೆ 2002ರಲ್ಲಿ ಬೆಳಕಿಗೆ ಬಂದಿತ್ತು. ಆದರೆ 2003ರಲ್ಲಿ ರಾಜಸ್ಥಾನ ಹೈಕೋರ್ಟ್ ಅಂಥದ್ದೇನೂ ನಡೆದಿಲ್ಲ ಅಂದುಬಿಟ್ಟಿತು. ಆದರೆ ಪಟ್ಟುಬಿಡದ SEBI ಮತ್ತೆ ಹರ್ಯಾಣಾ ಕೋರ್ಟಿಗೆ ಅಲವತ್ತುಕೊಂಡಿತು. ಆದರೆ ಈ ಬಾರಿ ಹರ್ಯಾಣಾ (ಚಂಡೀಗಢ) ಕೋರ್ಟ್ ಖಡಕ್ ಆದೇಶ ನೀಡಿ, ತನಿಖೆಯನ್ನು ಸಿಬಿಐಗೆ ಒಪ್ಪಿಸಿತು. ಹಾಗಾಗಿ ಪ್ರಕರಣ ಇದೀಗ ಬಟಾಬಯಲಾಗಿದೆ. ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದಾ? ಅದು ಯಾವ ಕಾಲಕ್ಕೋ?












Click it and Unblock the Notifications