ಇದು ನಮ್ಮ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ: ದೆಹಲಿ ಹೈಕೋರ್ಟ್
ನವದೆಹಲಿ, ಏಪ್ರಿಲ್ 15: ಈಶಾನ್ಯ ದೆಹಲಿಯಲ್ಲಿ 2020ರ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದ ವೇಳೆ ಜನರತ್ತ 3-4 ಸುತ್ತು ಗುಂಡು ಹಾರಿಸಿದ್ದಲ್ಲದೆ, ಹೆಡ್ ಕಾನ್ಸ್ಟೆಬಲ್ ಒಬ್ಬರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದ ಆರೋಪಿ ಶಾರುಖ್ ಪಠಾಣ್ಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
'ಅರ್ಜಿದಾರರ ಪಾತ್ರವು ಗಲಭೆಕೋರರ ಗುಂಪಿನಲ್ಲಿ ಪಾಲ್ಗೊಳ್ಳುವುದಕ್ಕೆ ಸೀಮಿತವಾಗಿಲ್ಲ. ಆದರೆ ಬೃಹತ್ ಗುಂಪಿನತ್ತ ತೆರಳಿ, ಕೈಯಲ್ಲಿ ಪಿಸ್ತೂಲು ಹಿಡಿದು ಗುಂಡು ಹಾರಿಸುವುದು ಗಂಭೀರವಾಗಿದೆ. ಈ ಕೋರ್ಟ್ ಮುಂದೆ ಪ್ರದರ್ಶಿಸಿದ ವಿಡಿಯೋ ದೃಶ್ಯ ಮತ್ತು ಚಿತ್ರಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಅಲುಗಾಡಿಸಿದೆ. ಅರ್ಜಿದಾರರು ಕಾನೂನು ಮತ್ತು ಸುವ್ಯವಸ್ಥೆಯನ್ನು ಹೇಗೆ ತಮ್ಮ ಕೈಗೆತ್ತಿಕೊಳ್ಳಲು ಸಾಧ್ಯ?' ಎಂದು ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್, ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಗುಂಡುಗಳನ್ನು ಹಾರಿಸುವಾಗ ಆತನಿಗೆ ಪೊಲೀಸ್ ಅಧಿಕಾರಿ ಅಥವಾ ಬೇರೆ ಯಾವುದೇ ವ್ಯಕ್ತಿಯನ್ನು ಕೊಲ್ಲುವ ಉದ್ದೇಶ ಇರಬಹುದು ಅಥವಾ ಇಲ್ಲದಿರಬಹುದು, ಆದರೆ ಆ ಜಾಗದಲ್ಲಿರುವ ಯಾವುದೇ ವ್ಯಕ್ತಿಗೆ ಅದು ಹಾನಿ ಮಾಡುತ್ತದೆ ಎಂಬ ಪರಿಜ್ಞಾನ ಇರಲಿಲ್ಲ ಎನ್ನುವುದನ್ನು ನಂಬಲು ಕಷ್ಟವಾಗುತ್ತದೆ ಎಂದು ಕೋರ್ಟ್ ಹೇಳಿತು.

ದೂರುದಾರರ ಹೇಳಿಕೆಯನ್ನು ಸಿಆರ್ಪಿಸಿ ಸೆಕ್ಷನ್ 161ರ ಅಡಿಯಲ್ಲಿ ದಾಖಲಿಸಲಾಗಿದೆ. ದೂರುದಾರನ ಮೇಲೆ ಗುಂಡು ಹಾರಿಸಲು ತಾನು ಉದ್ದೇಶಿಸಿರಲಿಲ್ಲ ಎಂದು ಅರ್ಜಿದಾರ ಹೇಳಿಕೊಂಡಿದ್ದಾರೆ. ಇದನ್ನು ವಿಚಾರಣೆ ವೇಳೆ ಪರಿಶೀಲಿಸಬೇಕು ಎಂದು ಕೋರ್ಟ್ ತಿಳಿಸಿತು.
ಪಠಾಣ್ನನ್ನು ಕಳೆದ ವರ್ಷ ಮಾರ್ಚ್ 3ರಂದು ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಆತನನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಪಠಾಣ್ ಪರ ವಕೀಲರು ವಾದಿಸಿದ್ದಾರೆ.












Click it and Unblock the Notifications