ಪದ್ಮ ಪ್ರಶಸ್ತಿಗೆ ವೈದ್ಯರ ಹೆಸರು ಶಿಫಾರಸು ಮಾಡಲಿದೆ ದೆಹಲಿ ಸರ್ಕಾರ
ನವದೆಹಲಿ, ಜುಲೈ 27: ಭಾರತ ಸರ್ಕಾರದ ವತಿಯಿಂದ ನೀಡಲಾಗುವ ಪದ್ಮ ಪ್ರಶಸ್ತಿಗಳಿಗಾಗಿ ಈ ಬಾರಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಹೆಸರನ್ನು ಶಿಫಾರಸು ಮಾಡಲು ನಿರ್ಧರಿಸಿರುವುದಾಗಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್, "ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಜನರ ಸೇವೆಯಲ್ಲಿ ತೊಡಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಿದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಹೆಸರನ್ನು ಈ ಬಾರಿ ದೆಹಲಿ ಸರ್ಕಾರ ಪದ್ಮ ಪ್ರಶಸ್ತಿಗಾಗಿ ಸೂಚಿಸಲು ನಿರ್ಧರಿಸಿದೆ. ಅವರಿಗೆ ಈ ಮೂಲಕ ಧನ್ಯವಾದ ಹೇಳಲು ಬಯಸುತ್ತೇವೆ. ಅವರಿಗೆ ಈ ರೀತಿಯಲ್ಲಿ ಗೌರವ ಸಮರ್ಪಿಸುತ್ತೇವೆ" ಎಂದು ಹೇಳಿದ್ದಾರೆ.
"ಜನರೇ ಅವರ ಹೆಸರುಗಳನ್ನು ಸೂಚಿಸಬಹುದು. ಕೊರೊನಾ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯರ ಅಥವಾ ಆರೋಗ್ಯ ಕಾರ್ಯಕರ್ತರ ಹೆಸರುಗಳನ್ನು ಮಿಂಚಂಚೆ ಮೂಲಕ ಆಗಸ್ಟ್ 15ರ ಒಳಗೆ ಕಳುಹಿಸಿಕೊಡಬಹುದು" ಎಂದು ತಿಳಿಸಿದ್ದಾರೆ. ಈ ಹೆಸರುಗಳು ಪರಿಶೀಲನೆಗೆ ಸಮಿತಿ ರಚಿಸಿರುವುದಾಗಿ ತಿಳಿಸಿದ್ದಾರೆ.

ಪದ್ಮವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿಗಳಿಗೆ ಹೆಸರು ನೋಂದಣಿ ಹಾಗೂ ಶೀಫಾರಸನ್ನು ಸೆಪ್ಟೆಂಬರ್ 15ರವರೆಗೂ ಮಾಡಲು ಅವಕಾಶವಿದೆ ಎಂದರು.
ಕೊರೊನಾ ಬಿಕ್ಕಟ್ಟಿನ ಸಂದರ್ಭ ವೈದ್ಯಕೀಯ ಸಿಬ್ಬಂದಿ ಸೇವೆ ಮರೆಯಲಾರದಂಥದ್ದು. ಹೀಗಾಗಿ ಈ ಬಾರಿ ವೈದ್ಯರ ಹೆಸರನ್ನು ಸೂಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಈಚೆಗೆ ಪ್ರಧಾನಿ ಮೋದಿ, ಪದ್ಮ ಪ್ರಶಸ್ತಿಗಳಿಗೆ ಹೆಸರುಗಳನ್ನು ನಾಮನಿರ್ದೇಶನ ಮಾಡುವಂತೆ ತಿಳಿಸಿದ್ದರು. ಈ ಬೆನ್ನಲ್ಲೇ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.












Click it and Unblock the Notifications