ದೆಹಲಿಯಲ್ಲಿ 2 ತಿಂಗಳು ಉಚಿತ ಪಡಿತರ ಘೋಷಿಸಿದ ಸರ್ಕಾರ
ನವದೆಹಲಿ, ಮೇ 04: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಗೆ ರಾಷ್ಟ್ರ ರಾಜಧಾನಿ ಜನರು ತತ್ತರಿಸಿ ಹೋಗಿದ್ದಾರೆ. ನವದೆಹಲಿಯಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಮನಗಂಡಿರುವ ರಾಜ್ಯ ಸರ್ಕಾರ 72 ಲಕ್ಷ ಜನರಿಗೆ ಉಚಿತವಾಗಿ ಪಡಿತರ ನೀಡುವುದಾಗಿ ಘೋಷಿಸಿದೆ.
ನವದೆಹಲಿಯಲ್ಲಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ 72 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಪಡಿತರವನ್ನು ವಿತರಿಸಲಾಗುವುದು. ಇದರ ಜೊತೆಗೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5000 ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ತಿಳಿಸಿದೆ.
ಉಚಿತ ಪಡಿತರ ಹಾಗೂ ಸಹಾಯಧನವನ್ನು ಮುಂದಿನ ಎರಡು ತಿಂಗಳವರೆಗೂ ನೀಡಲಾಗುತ್ತದೆ. ಇದರ ಅರ್ಥ ರಾಷ್ಟ್ರ ರಾಜಧಾನಿಯಲ್ಲಿ ಲಾಕ್ಡೌನ್ ಮುಂದುವರಿಸಲಾಗುತ್ತದೆ ಎಂದು ಅರ್ಥವಲ್ಲ ಅಂತಾ ಸಿಎಂ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾವೈರಸ್ ಸೋಂಕಿನ ನಿಯಂತ್ರಣ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆ ವೇಗ ಕಡಿಮೆಯಾಗಿದೆ. ನವದೆಹಲಿಯಲ್ಲಿ ಬಹುಶಃ ಕೊವಿಡ್-19 ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂಬಂತೆ ಗೋಚರಿಸುತ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿಗೊಳಿಸುವ ಅಗತ್ಯ ಇರುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕೊವಿಡ್-19 ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಘೋಷಿಸಿರುವ ಲಾಕ್ಡೌನ್ ಆದೇಶವು ಮೇ 10ರವರೆಗೂ ಜಾರಿಯಲ್ಲಿರಲಿದೆ. ಕಳೆದ ವರ್ಷ ಲಾಕ್ಡೌನ್ ಜಾರಿಗೊಳಿಸಿದ ಸಂದರ್ಭದಲ್ಲೂ 1.56 ಲಕ್ಷ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ 5000 ರೂಪಾಯಿ ಸಹಾಯ ಧನವನ್ನು ಘೋಷಿಸಲಾಗಿತ್ತು.












Click it and Unblock the Notifications