ಸ್ಪರ್ಧಿಸಿದ್ದ 70 ಸ್ಥಾನಗಳಲ್ಲಿ 67 ರಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್
ನವದೆಹಲಿ, ಫೆಬ್ರವರಿ 11: ರಾಷ್ಟ್ರ ರಾಜಧಾನಿಯ ಗದ್ದುಗೆಯನ್ನು ಒಂದು ದಶಕದ ಮೇಲೆ ಐದು ವರ್ಷ ಸತತವಾಗಿ ರಾಜನಂತೆ ಆಳಿದ್ದ ಕಾಂಗ್ರೆಸ್ ಕೇವಲ ಐದು ಚಿಲ್ಲರೆ ವರ್ಷಕ್ಕೆ ನಾಮಾವಶೇಷವೇ ಇಲ್ಲದಂತಾಗಿದೆ.
ಇಂದು ಹೊರಬಿದ್ದಿರುವ ದೆಹಲಿ ವಿಧಾನಸಭೆ ಫಲಿತಾಂಶದಲ್ಲಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲುವುದಿರಲಿ. ಮುನ್ನಡೆ ಸಹ ಸಾಧಿಸಲಿಲ್ಲ.
ಎಲ್ಲಾ ಎಪ್ಪತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 67 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದೆ. ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರವೇ ಸ್ವಲ್ಪ ಮಟ್ಟಿಗಿನ ಮತ ಪಡೆದುಕೊಂಡಿದೆ.

ಅಭ್ಯರ್ಥಿಗಳು ಹತ್ತು ಸಾವಿರ ರೂಪಾಯಿ ಹಣವನ್ನು ಚುನಾವಣಾ ಆಯೋಗಕ್ಕೆ ಠೇವಣಿ ಇಟ್ಟಿರುತ್ತಾರೆ. ಒಂದು ವೇಳೆ ಅಭ್ಯರ್ಥಿಗೆ ಕ್ಷೇತ್ರದ ಒಟ್ಟು ಮತದ 10% ಮತ ಗಳಿಸದೇ ಇದ್ದರೆ ಠೇವಣಿ ಕಳೆದುಕೊಳ್ಳುತ್ತಾರೆ. ಹೀಗೆ ಒಟ್ಟು ಮತದ 10% ಭಾಗ ಮತವನ್ನೂ ಸಹ ಪಡೆದುಕೊಳ್ಳಲು ಕಾಂಗ್ರೆಸ್ನ 67 ಅಭ್ಯರ್ಥಿಗಳು ವಿಫಲರಾಗಿದ್ದಾರೆ.
ಹದಿನೈದು ವರ್ಷ ಸತತವಾಗಿ ದೆಹಲಿ ಗದ್ದುಗೆಯನ್ನು ಆಳಿದ್ದ ಕಾಂಗ್ರೆಸ್, ಆಗಿನ ತನ್ನ ಸಾಧನೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿತ್ತು. ಆದರೆ ಅದು ಸ್ವಲ್ಪವೂ ಕಾಂಗ್ರೆಸ್ ನ ಕೈ ಹಿಡಿಯಲಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದರಾದರೂ ಅದು ಫಲ ನೀಡಿಲ್ಲ.
ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಕ್ಕೇ ಇಲ್ಲದಂತಾಗಿದೆ. ದೆಹಲಿ ಚುನಾವಣೆ ಆರಂಭದಿಂದಲೂ ಬಿಜೆಪಿ ಮತ್ತು ಎಎಪಿ ನಡುವಿನ ಸ್ಪರ್ಧೆಯಾಗಿಯೇ ಗುರುತಿಸಿಕೊಂಡಿತು. ಪ್ರಚಾರ ಸಮಯದಲ್ಲೂ ಕಾಂಗ್ರೆಸ್ ಅಲ್ಪ ಉತ್ಸಾಹವನ್ನೂ ತೋರಿಸಲಿಲ್ಲ. ಅದಕ್ಕೆ ತಕ್ಕಂತಹಾ ಫಲಿತಾಂಶವೇ ಈಗ ಬಂದಿದೆ.












Click it and Unblock the Notifications