ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆಯ ಹಾವು ಏಣಿ ಆಟ: ಮತ್ತೆ ತಡೆ
ನವದೆಹಲಿ, ಮಾರ್ಚ್ 2: ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಮತ್ತೆ ವಿಳಂಬವಾಗಿದೆ. ನಿರ್ಭಯಾ ಅತ್ಯಾಚಾರ ಆರೋಪಿಗಳಿಗೆ ನಾಳೆ ಗಲ್ಲು ಶಿಕ್ಷೆ ಇಲ್ಲ ಎಂದು ದೆಹಲಿಯ ಪಟಿಯಾಲಾಹೌಸ್ ಕೋರ್ಟ್ ಸೋಮವಾರ ಆದೇಶಿಸಿದೆ.
ಹಳೆಯ ಡೆತ್ ವಾರೆಂಟ್ ಜಾರಿ ಇಲ್ಲ, ಹೊಸ ಡೆತ್ ವಾರೆಂಟ್ ಬರುವವರೆಗೂ ಗಲ್ಲು ಶಿಕ್ಷೆ ಇಲ್ಲ ಎಂದು ಕೋರ್ಟ್ ಹೇಳಿದೆ.

Recommended Video

ಎಂಟು ವರ್ಷಗಳ ಹಿಂದಿನ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರು ವ್ಯಕ್ತಿಗಳ ಶಿಕ್ಷೆ ಕೊನೆಗೂ ನೆರವೇರುವ ಕಾಲಕೂಡಿ ಬಂದಿಲ್ಲ. ಗಲ್ಲು ಶಿಕ್ಷೆ ಮತ್ತೆ ವಿಳಂಬವಾಗಿದೆ.
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರಿಗಳನ್ನು ಆದಷ್ಟು ಬೇಗ ಗಲ್ಲಿಗೆ ಏರಿಸಬೇಕು ಎಂದು ದೇಶದೆಲ್ಲೆಡೆ ಜನ ವ್ಯಾಪಕವಾಗಿ ಒತ್ತಾಯಿಸಿದ್ದರು. ಹತ್ತಾರು ಪ್ರತಿಭಟನೆಗಳನ್ನೂ ನಡೆಸಲಾಗಿತ್ತು. ಆದರೆ, ಆರೋಪಿಗಳು ಪದೇ ಪದೇ ಕಾನೂನಿನ ಸಹಾಯ ಪಡೆದು ಶಿಕ್ಷೆಯಿಂದ ಮತ್ತೆ ಕೆಲವು ದಿನಗಳ ಕಾಲ ಬಚಾವ್ ಆಗಿದ್ದಾರೆ.
ನಿರ್ಭಯಾ ಪ್ರಕರಣ: ಪವನ್ ಗುಪ್ತಾ ಕ್ಷಮಾಧಾನ ಅರ್ಜಿ ವಜಾ
ದೆಹಲಿ ಪಟಿಯಾಲ ಕೋರ್ಟ್ ಸತತ ನಾಲ್ಕು ಬಾರಿ ಡೆತ್ ವಾರೆಂಟ್ ಹೊರಡಿಸಿದ್ದರೂ, ಅತ್ಯಾಚಾರಿಗಳ ಶಿಕ್ಷೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಸುಪ್ರೀಂ ಕೋರ್ಟ್ ಖಾಯಂಗೊಳಿಸಿದ್ದರೂ ಸಹ ಶಿಕ್ಷೆಯನ್ನು ನೆರವೇರಿಸಲು ಸಾಧ್ಯವಾಗಿರಲಿಲ್ಲ.
ಈ ಬಾರಿ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿ ವಜಾ ಗೊಳಿಸಿದ್ದರೂ, ಪಟಿಯಾಲ ಕೋರ್ಟ್ ತಡೆ ನೀಡಿದೆ. ಮುಂದಿನ ಹೊಸ ಡೆತ್ ವಾರೆಂಟ್ ಜಾರಿಯಾಗುವವರೆಗೂ ಗಲ್ಲು ಶಿಕ್ಷೆ ಇಲ್ಲ ಎಂದು ಹೇಳಿದೆ.
2012ರಲ್ಲಿ ಸಂಭವಿಸಿದ ಪ್ರಕರಣ ಇದಾಗಿದೆ. ಆ ವರ್ಷದ ಡಿಸೆಂಬರ್ 16ರ ರಾತ್ರಿಯಂದು ನಿರ್ಭಯಾ ಮೇಲೆ ಆರು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.
ಬಸ್ನೊಳಗೆ ಸೇರಿ ಬಹಳ ಕ್ರೂರ ರೀತಿಯಲ್ಲಿ ಅಪರಾಧ ಎಸಗಿದ್ದರು. ಅತ್ಯಾಚಾರದ ಬಳಿಕ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಎರಡು ವಾರಗಳ ನಂತರ ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ನಿರ್ಭಯಾ ಸಾವನ್ನಪ್ಪಿದ್ದರು.
ಈ ಆರು ಅಪರಾಧಿಗಳ ಪೈಕಿ ಒಬ್ಬ ಬಾಲಾಪರಾಧಿಯಾಗಿದ್ದು ಆತನಿಗೆ ಸಾಧಾರಣ ಶಿಕ್ಷೆ ನೀಡಿ ಬಿಡುಗಡೆಗೊಳಿಸಲಾಗಿದೆ. ಇನ್ನು ರಾಮ್ ಸಿಂಗ್ ಎಂಬ ಒಬ್ಬ ಅಪರಾಧಿ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾಗಿದ್ದ.












Click it and Unblock the Notifications