ವಲಸೆ ಕಾರ್ಮಿಕರ ಕಷ್ಟ; ದಿಟ್ಟ ಹೆಜ್ಜೆ ಇಟ್ಟ ಕಾಂಗ್ರೆಸ್ ಪಕ್ಷ
ನವದೆಹಲಿ, ಮೇ 10 : ದೆಹಲಿ ಕಾಂಗ್ರೆಸ್ ಘಟಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ವಲಸೆ ಕಾರ್ಮಿಕರ ಎರಡು ಪಟ್ಟಿಯನ್ನು ಕಳುಹಿಸಿದೆ. ಈ ಕಾರ್ಮಿಕರು ವಾಪಸ್ ಬರುವ ವೆಚ್ಚವನ್ನು ಪಕ್ಷ ಭರಿಸಲಿದೆ ಎಂದು ಹೇಳಿದೆ.
9,500 ವಲಸೆ ಕಾರ್ಮಿಕರ ಪಟ್ಟಿಯನ್ನು ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಸಲ್ಲಿಸಿದೆ. ಇವರು ರಾಜ್ಯಕ್ಕೆ ವಾಪಸ್ ಆಗಲು ಬಯಸಿದ್ದಾರೆ. ಇವರ ರೈಲು ಪ್ರಯಾಣದ ವೆಚ್ಚವನ್ನು ಪಕ್ಷ ನೀಡಲಿದೆ ಎಂದು ತಿಳಿಸಿದೆ.
ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ 2106 ವಲಸೆ ಕಾರ್ಮಿಕರ ಪಟ್ಟಿಯನ್ನು ಶನಿವಾರ ಸಲ್ಲಿಸಿದ್ದರು. 7,299 ಕಾರ್ಮಿಕರ ಪಟ್ಟಿಯನ್ನು ಭಾನುವಾರ ಸಲ್ಲಿಕೆ ಮಾಡಲಾಗಿದೆ. ಇವರು ಸಹಾಯಕ್ಕಾಗಿ ಪಕ್ಷಕ್ಕೆ ಮನವಿ ಮಾಡಿದ್ದಾರೆ ಎಂದು ತಿಳಿಸಲಾಗಿದೆ.

ವಲಸೆ ಕಾರ್ಮಿಕರು ದೆಹಲಿಗೆ ವಾಪಸ್ ಅಗಲು ಅಗತ್ಯ ವ್ಯವಸ್ಥೆಯನ್ನು ಮಾಡಬೇಕು ಎಂದು ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್ಗೆ ಮನವಿ ಮಾಡಿದ್ದಾರೆ. ವಲಸೆ ಕಾರ್ಮಿಕರ ರೈಲು ವೆಚ್ಚವನ್ನು ಭರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು.
ದೆಹಲಿ ಮುಖ್ಯಮಂತ್ರಿ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಾಂಗ್ರೆಸ್ ಪತ್ರ ಬರೆದಿದ್ದು ವಲಸೆ ಕಾರ್ಮಿಕರ ಕಷ್ಟದ ಬಗ್ಗೆ ವಿವರಣೆ ನೀಡಿದೆ. ಅವರ ಕಷ್ಟ ಬಗೆಹರಿಸಲು ವೆಚ್ಚವನ್ನು ಪಕ್ಷದ ವತಿಯಿಂದ ನೀಡಲಾಗುತ್ತದೆ ಎಂದು ವಿವರಿಸಿದೆ.
ದೆಹಲಿ ಸರ್ಕಾರ ಬಿಹಾರದಿಂದ 1,200 ವಲಸೆ ಕಾರ್ಮಿಕರು, ಮಧ್ಯಪ್ರದೇಶದಿಂದ 1000 ಕಾರ್ಮಿಕರನ್ನು ವಾಪಸ್ ಕರೆಸಿಕೊಂಡಿದೆ. ಎಲ್ಲರೂ ಈಗ ಕ್ವಾರಂಟೈನ್ನಲ್ಲಿದ್ದಾರೆ. ಈಗ 9,500 ಕಾರ್ಮಿಕರ ಪಟ್ಟಿಯನ್ನು ಕಾಂಗ್ರೆಸ್ ನೀಡಿದೆ.
ವಲಸೆ ಕಾರ್ಮಿಕರ ಸಂಚಾರಕ್ಕೆ ಭಾರತೀಯ ರೈಲ್ವೆ ಶ್ರಮಿಕ್ ವಿಶೇಷ ರೈಲನ್ನು ಓಡಿಸುತ್ತದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚವನ್ನು ಭರಿಸಬೇಕು. ದೇಶದ ವಿವಿಧ ರಾಜ್ಯಗಳಲ್ಲಿ ಇರುವ ವಲಸೆ ಕಾರ್ಮಿಕರನ್ನು ದೆಹಲಿ ಸರ್ಕಾರ ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ.
ವಲಸೆ ಕಾರ್ಮಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸರ್ಕಾರದ ವತಿಯಿಂದಲೇ ರೈಲು ಪ್ರಯಾಣದ ವೆಚ್ಚವನ್ನು ಭರಿಸುತ್ತೇವೆ ಎಂದು ದೆಹಲಿ ಸರ್ಕಾರ ಹೇಳಿದೆ.












Click it and Unblock the Notifications