ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರನ್ನೇ ಹೊತ್ತೊಯ್ದ ಕಳ್ಳರು
ದೆಹಲಿ, ಅಕ್ಟೋಬರ್ 12: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಮುಖ್ಯಮಂತ್ರಿ ಕಚೇರಿ ಪಕ್ಕದಿಂದಲೇ ಕಾರನ್ನು ಕಳ್ಳತನ ಮಾಡಲಾಗಿದೆ.
ಅರವಿಂದ್ ಕೇಜ್ರಿವಾಲ್ ರ ದೆಹಲಿ ರಿಜಿಸ್ಟ್ರೇಷನ್ ಸಂಖ್ಯೆ DL9 G9769 ಕಾರನ್ನು ಕಳ್ಳತನ ಮಾಡಲಾಗಿದೆ. ನೀಲಿ ಬಣ್ಣದ ಮಾರುತಿ ಸುಝುಕಿ ವ್ಯಾಗನ್-ಆರ್ ಕಾರನ್ನು ದೆಹಲಿ ಮುಖ್ಯಮಂತ್ರಿಯಾದ ಬಳಿಕವೂ ಕೇಜ್ರಿವಾಲ್ ಓಡಾಟಕ್ಕೆ ಬಳಸುತ್ತಿದ್ದರು.
ಈ ಕಾರನ್ನು ಕೇಜ್ರಿವಾಲ್ ಅವರಿಗೆ ಅವರ ವಿದೇಶಿ ಗೆಳೆಯರೊಬ್ಬರು ಕೊಡುಗೆಯಾಗಿ ನೀಡಿದ್ದರು. ಪ್ರತಿಭಟನೆ ಮೊದಲಾದ ಸಂದರ್ಭದಲ್ಲೆಲ್ಲಾ ಕೇಜ್ರಿವಾಲ್ ಈ ಕಾರನ್ನೇ ಬಳಸುತ್ತಿದ್ದರು. ಹೀಗಾಗಿ ಈ ಕಾರಿಗೆ 'ವಿಐಪಿ ಮೊಬೈಲ್' ಎಂಬ ಹೆಸರು ಬಂದಿತ್ತು.
ವಿಐಪಿ ಸಂಸ್ಕೃತಿ ವಿರುದ್ಧ ಮಾತನಾಡುತ್ತಿದ್ದ ಅವರು ತಮ್ಮ ವ್ಯಾಗನ್-ಆರ್ ಕಾರಿನಲ್ಲೇ ಓಡಾಡುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಅವರ ನೂರಾರು ಫೋಟೋಗಳು ಕಾರಿನ ಜತೆಗಿವೆ.
ಇದೀಗ ಈ ಕಾರನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಈ ಕುರಿತು ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಪ್ರಕರಣ ದಾಖಲಾಗಿದೆ. ಪೊಲೀಸರು ಕಾರನ್ನು ಹುಡುಕಾಡುತ್ತಿದ್ದಾರೆ.