"ಭಾರತದ 'ಹೃದಯ'ವನ್ನು ಕಾಪಾಡಿದ ಎಲ್ಲರಿಗೂ ಧನ್ಯವಾದ"
ನವದೆಹಲಿ, ಫೆಬ್ರವರಿ.11: ಭಾರತದ ಹೃದಯ ಭಾಗವನ್ನು ರಕ್ಷಿಸಿದ ದೇಶದ ಎಲ್ಲ ಪ್ರಜೆಗಳಿಗೂ ಧನ್ಯವಾದ ಎಂದು ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ. ಮಂಗಳವಾರ ನವದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಆಮ್ ಆದ್ಮಿ ಪಕ್ಷಕ್ಕೆ ಪಟ್ಟಕ್ಕೆ ಏರುವುದು ಬಹುತೇಕ ಪಕ್ಕಾ ಆಗಿದೆ.
ಮಧ್ಯಾಹ್ನ 2 ಗಂಟೆ ವೇಳೆಗೆ ಆಮ್ ಆದ್ಮಿ ಪಕ್ಷವು 15 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, 44 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ಜುಕೊಂಡಿದೆ. ಭಾರತೀಯ ಜನತಾ ಪಕ್ಷವು 1 ಕ್ಷೇತ್ರದಲ್ಲಷ್ಟೇ ಜಯ ಗಳಿಸಿದ್ದು, 10 ಕಡೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಒಟ್ಟಾರೆ ಫಲಿತಾಂಶವನ್ನು ಗಮನಿಸಿದಾಗ ಆಪ್ 59 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದ್ದು, 11 ಕ್ಷೇತ್ರಗಳಲ್ಲಿ ಕಮಲ ಕಮಾಲ್ ಮಾಡಲಿದೆ. ಇನ್ನು, ಕಾಂಗ್ರೆಸ್ 'ಕೈ' ದೆಹಲಿಯಲ್ಲಿ ಮತ್ತೊಮ್ಮೆ ಖಾಲಿ ಖಾಲಿಯಾಗಿದೆ.

ದೇಶದ ಹೃದಯ ರಕ್ಷಿಸಿದ ಮತದಾರರಿಗೆ ಧನ್ಯವಾದ
ಭಾರತದ ಹೃದಯ ಭಾಗದಲ್ಲಿ ಇರುವ ನವದೆಹಲಿಯನ್ನು ಮತದಾರರು ಭಾರತೀಯ ಜನತಾ ಪಕ್ಷದಿಂದ ರಕ್ಷಿಸಿದ್ದಾರೆ ಎಂದು ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಮೂರನೇ ಬಾರಿ ದೆಹಲಿಯಲ್ಲಿ ಗದ್ದುಗೆ ಏರಲು ಅಣಿಯಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭಾಷಣಯ ಕೋರಿದ್ದಾರೆ.

ಬಿಜೆಪಿಗೆ ಮಾತಿನ ಏಟು ಕೊಟ್ಟ ಮಮತಾ ಬ್ಯಾನರ್ಜಿ
ನವದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾದ ಬ್ಯಾನರ್ಜಿ ಶುಭಾಷಯ ತಿಳಿಸಿದ್ದಾರೆ. ಇಂದು ದೆಹಲಿಯ ಮತದಾರರು ಸಿಎಎ, ಎನ್ಆರ್ ಸಿ ಹಾಗೂ ಎನ್ ಪಿಆರ್ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಸಿಎಎ ವಿರೋಧಿ ಹೋರಾಟದ ನೆರಳಿನಲ್ಲೇ ಚುನಾವಣೆ
ದೆಹಲಿಯ ಒಂದು ಕಡೆಯಲ್ಲಿ ವಿಧಾನಸಭೆ ಪ್ರಚಾರ ನಡೆಯುತ್ತಿದ್ದರೆ, ಇನ್ನೊಂದು ಭಾಗದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಉಗ್ರ ಹೋರಾಟ ನಡೆಯುತ್ತಿತ್ತು. ಶಾಹಿನ್ ಬಾಗ್, ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ, ಜಾಮಿಯಾ ನಗರ ಹೀಗೆ ಹಲವೆಡೆಗಳಲ್ಲಿನ ಹೋರಾಟದ ನೆರಳಿನಲ್ಲೇ ನಡೆದ ಚುನಾವಣೆಯಲ್ಲಿ ಆಪ್ ಅಧಿಕಾರ ಗಿಟ್ಟಿಸಿಕೊಂಡಿದೆ.

ಬಿಜೆಪಿಗೆ 'ಗೋಲಿ' ಹೊಡೆದ ದೆಹಲಿಯ ಮತದಾರ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಹೋರಾಟ ನಡೆಯುತ್ತಿರುವ ಜನರೆಲ್ಲ ದೇಶ ವಿರೋಧಿಗಳು. ದೇಶದ್ರೋಹಿ ಕಾರ್ಯ ಮಾಡುತ್ತಿರುವ ಅಂಥವರನ್ನು ಗುಂಡಿಕ್ಕಿ ಕೊಲ್ಲಬೇಕು. ಈ ರೀತಿಯ ಹೇಳಿಕೆಗಳು ಬಿಜೆಪಿಯ ನಾಯಕರಿಂದ ಸಾಲು ಸಾಲಾಗಿ ಹರಿದು ಬಂದವು. ಮೊದಲಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಿದ ಮಾತುಗಳೇ ಬಿಜೆಪಿಗೆ ಮುಳುವಾಯಿತಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ.












Click it and Unblock the Notifications