ದೆಹಲಿ ಎನ್ಸಿಆರ್ನಲ್ಲಿ ಶಾಲೆ-ಕಾಲೇಜು ಬಂದ್, ಶೇ.50ರಷ್ಟು ಸಿಬ್ಬಂದಿಗೆ WFH, ಕಾಮಗಾರಿಗಳಿಗೆ ಫುಲ್ ಸ್ಟಾಪ್!
ನವದೆಹಲಿ, ನವೆಂಬರ್ 17: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳನ್ನು ಮುಂದಿನ ಆದೇಶದವರೆಗೂ ಮುಚ್ಚುವಂತೆ ಕೇಂದ್ರ ವಾಯು ಗುಣಮಟ್ಟ ನಿರ್ವಹಣಾ ಸಮಿತಿ(CAQM) ನಿರ್ದೇಶನ ನೀಡಿದೆ. ದೀಪಾವಳಿ ನಂತರ ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಆವರಿಸಿದ ದಟ್ಟ ಹೊಗೆ ನಿಯಂತ್ರಿಸುವುದಕ್ಕೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಸಮಿತಿಯು ಹಲವು ಸೂಚನೆಗಳನ್ನು ನೀಡಿದೆ.
ದೆಹಲಿಯಲ್ಲಿ ಶಿಕ್ಷಣ ಸಂಸ್ಥೆಗಳು ಕೊವಿಡ್-19 ಸಮಯದಲ್ಲಿ ಕಾರ್ಯ ನಿರ್ವಹಿಸಿದಂತೆ ಆನ್ ಲೈನ್ ಮೂಲಕ ತರಗತಿಗಳನ್ನು ಮುಂದುವರಿಸಲು ಸಲಹೆ ನೀಡಲಾಗಿದೆ. ಒಟ್ಟು 9 ಪುಟಗಳ ಆದೇಶದಲ್ಲಿ NCR ರಾಜ್ಯಗಳಾದ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಶೇ.50ರಷ್ಟು ಸಿಬ್ಬಂದಿಗೆ ನವೆಂಬರ್ 21ರವರೆಗೂ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅನುಮತಿ ನೀಡುವುದು ಸೂಕ್ತ ಎಂದು CAQM ಸಲಹೆ ನೀಡಿದೆ.
ವಾರಾಂತ್ಯದ ಲಾಕ್ಡೌನ್ಗೆ ಸಿದ್ಧ, ನ್ಯಾಯಾಲಯದ ಅನುಮತಿ ಮುಖ್ಯ- ದೆಹಲಿ ಸರ್ಕಾರ
ದೆಹಲಿ ಎನ್ಸಿಆರ್ನಲ್ಲಿರುವ ಖಾಸಗಿ ಸಂಸ್ಥೆಗಳು ಕೂಡಾ ಕನಿಷ್ಠ ಶೇಕಡಾ 50ರಷ್ಟು ಸಿಬ್ಬಂದಿಯನ್ನು ಮನೆಯಿಂದಲೇ ಕೆಲಸ ಮಾಡಲು "ಪ್ರೋತ್ಸಾಹಿಸಬೇಕು" ಎಂದು CAQM (ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಸಮಿತಿ) ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ದೆಹಲಿಯಲ್ಲಿ ಎಚ್ಚರ ತಪ್ಪಿದರೆ ಭಾರಿ ದಂಡ ವಿಧಿಸುವ ಎಚ್ಚರಿಕೆ
ಮನೆಯಿಂದಲೇ ಸಿಬ್ಬಂದಿ ಕೆಲಸ ಮಾಡುವುದು, ಶಾಲಾ-ಕಾಲೇಜುಗಳಿಗೆ ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸುವುದರ ಹೊರತಾಗಿ, ನಿರ್ಮಾಣ ಸಾಮಗ್ರಿಗಳನ್ನು ಅಥವಾ ಎನ್ಸಿಆರ್ನಲ್ಲಿ ರಸ್ತೆಗಳಲ್ಲಿ ತ್ಯಾಜ್ಯವನ್ನು ಸೇರಿಸಲು ಜವಾಬ್ದಾರರಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಭಾರೀ ದಂಡವನ್ನು ವಿಧಿಸಲಾಗುವುದು. ಎನ್ಸಿಆರ್ನಲ್ಲಿ ರಸ್ತೆ ಗುಡಿಸುವ ಯಂತ್ರಗಳ ಲಭ್ಯತೆಯನ್ನು ಹೆಚ್ಚಿಸಬೇಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೆಹಲಿಯಲ್ಲಿ ಈ ಸೇವೆಗಳಿಗೆ ಮಾತ್ರ ಅನುಮತಿ
* ರೈಲ್ವೆ ಸೇವೆಗಳು, ರೈಲ್ವೆ ನಿಲ್ದಾಣಗಳು, ಮೆಟ್ರೋ ಕಾರ್ಯಾಚರಣೆ, ವಿಮಾನ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್ಗಳು, ಹಾಗೆಯೇ ರಾಷ್ಟ್ರೀಯ ಭದ್ರತೆ ಅಥವಾ ರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳು ಮತ್ತು ಯೋಜನೆಗಳಿಗೆ ವಿನಾಯಿತಿ ನೀಡಲಾಗಿದೆ. ಇವುಗಳನ್ನು ಹೊರತುಪಡಿಸಿ ದೆಹಲಿ NCR ನಾದ್ಯಂತ ನಿರ್ಮಾಣ ಚಟುವಟಿಕೆಗಳು ಮತ್ತು ತೆರವು ಕಾರ್ಯಾಚರಣೆಗಳನ್ನು ನವೆಂಬರ್ 21 ರವರೆಗೆ ಸ್ಥಗಿತಗೊಳಿಸಲಾಗಿದೆ.
* ಮುಖ್ಯವಾಗಿ, ದೆಹಲಿ NCR ನಲ್ಲಿರುವ 11 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಐದು ಮಾತ್ರ ಕಾರ್ಯನಿರ್ವಹಿಸುತ್ತವೆ.
* ರಾಷ್ಟ್ರೀಯ ರಾಜಧಾನಿಗೆ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್ಗಳನ್ನು ಹೊರತುಪಡಿಸಿ ಎನ್ಸಿಆರ್ ರಾಜ್ಯಗಳು ಮತ್ತು ದೆಹಲಿಗೆ ಟ್ರಕ್ಗಳ ಪ್ರವೇಶವನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.
* 15 ವರ್ಷ ಹಳೆಯದಾದ ಪೆಟ್ರೋಲ್ ವಾಹನ ಮತ್ತು 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ದೆಹಲಿಯಲ್ಲಿ ಅನುಮತಿಸಲಾಗುವುದಿಲ್ಲ. ಮಾನ್ಯವಾದ ಹೊರಸೂಸುವಿಕೆ ನಿಯಂತ್ರಣ ಪ್ರಮಾಣಪತ್ರ ಇಲ್ಲದೆ ವಾಹನಗಳ ಚಾಲಕರನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
* ವಾಯು ಗುಣಮಟ್ಟದ ಬಿಕ್ಕಟ್ಟಿಗೆ ತುರ್ತು ಯೋಜನೆ ಮತ್ತು ಪ್ರತಿಕ್ರಿಯೆಯ ಕೊರತೆಯ ಬಗ್ಗೆ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ನ ಖಡಕ್ ಪ್ರಶ್ನೆಗಳನ್ನು ಹಾಕಿದ ಬೆನ್ನಲ್ಲೇ (CAQM) ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಸಮಿತಿಯು ಈ ಆದೇಶವನ್ನು ಹೊರಡಿಸಿದೆ.
ಮಂಗಳವಾರ ಲಾಕ್ಡೌನ್ ಸಲಹೆ ನೀಡಿದ್ದ ಸುಪ್ರೀಂಕೋರ್ಟ್
ಮಂಗಳವಾರ ಸರ್ವೋಚ್ಛ ನ್ಯಾಯಾಲಯದ ಆದೇಶದ ಬೆನ್ನಲ್ಲೇ ದೆಹಲಿ ಸರ್ಕಾರ ನಡೆಸಿದ ತುರ್ತು ಸಭೆಯಲ್ಲಿ ವಾರಾಂತ್ಯದ ಲಾಕ್ಡೌನ್ ಮತ್ತು ವರ್ಕ್ ಫ್ರಮ್ ಹೋಮ್ ಅನ್ನು ಒಂದು ವಾರದವರೆಗೆ ವಿಸ್ತರಿಸುವುದಕ್ಕೆ ಸೂಚಿಸಲಾಗಿತ್ತು. ದೆಹಲಿ ಸರ್ಕಾರವು ನಗರದಲ್ಲಿ ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಶಿಫಾರಸು ಮಾಡಿತ್ತು.
ದೀಪಾವಳಿ ನಂತರದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ
ಗುರ್ಗಾಂವ್, ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಏಳು ದಿನಗಳಿಂದ ಕಲುಷಿತ ಗಾಳಿಯಿಂದಾಗಿ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ. ಕಳೆದ ನವೆಂಬರ್ 4ರ ದೀಪಾವಳಿ ಹಬ್ಬದ ನಂತರದಲ್ಲಿ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿದ್ದು ಮಾರಣಾಂತಿಕ ಹಂತಕ್ಕೆ ತಲುಪಿದೆ. ಏಕೆಂದರೆ ದೀಪಾವಳಿಯ ಮೊದಲು ಮತ್ತು ನಂತರದ ಸಮಯದಲ್ಲಿ ದೆಹಲಿ, ಹರಿಯಾಣ ಹಾಗೂ ಉತ್ತರ ಪ್ರದೇಶಗಳಲ್ಲಿ ಸಾರ್ವಜನಿಕರು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಸಾವಿರಾರು ಪಟಾಕಿಗಳನ್ನು ಸಿಡಿಸಿದ್ದರು. ಇದು ಗಾಳಿಯ ಗುಣಮಟ್ಟದ ಮಟ್ಟವನ್ನು ಅಪಾಯಕಾರಿ ಹಂತಕ್ಕೆ ತೆಗೆದುಕೊಂಡು ಹೋಗಿದೆ.
ದೆಹಲಿಯಲ್ಲಿ ಗಾಳಿ ಗುಣಮಟ್ಟ ಅತ್ಯಂತ ಕಳಪೆ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಾರ, ಮಂಗಳವಾರ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು ತೀವ್ರ ವಲಯದಲ್ಲಿ 403 ಆಗಿದೆ. ಸೋಮವಾರ ಇದೇ ಗಾಳಿಯ ಗುಣಮಟ್ಟ ಸೂಚ್ಯಂಕವು 353 ಆಗಿದೆ. ಮಧ್ಯರಾತ್ರಿ 12.27 ಕ್ಕೆ ದೆಹಲಿಯಲ್ಲಿ ಒಟ್ಟಾರೆ AQI 397 ಆಗಿತ್ತು, ಇದು 'ತೀವ್ರ' ವರ್ಗದ ಗಡಿಯಾಗಿದೆ; 400 ಕ್ಕಿಂತ ಹೆಚ್ಚಿನ ಓದುವಿಕೆಗಳನ್ನು 'ತೀವ್ರ' ಅಥವಾ 'ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.
ನವೆಂಬರ್ 18 ರವರೆಗೆ ಗಾಳಿ ವೇಗವು ಶಾಂತವಾಗಿರಲಿದ್ದು, ತಾಪಮಾನವು ತುಂಬಾ ಕಡಿಮೆಯಾಗಬಹುದು. ಇದರಿಂದ ಮಾಲಿನ್ಯವು ಸುಲಭವಾಗಿ ಹರಡಲು ಕಷ್ಟವಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅಪಾಯಕಾರಿ ಹಂತಕ್ಕೆ ತಲುಪಿದೆ ಎಂಬುದು ಈಗಾಗಲೇ ಗೊತ್ತಾಗಿದೆ. ಹಾಗಿದ್ದರೆ ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ. ದೆಹಲಿಯಲ್ಲಿ ಪ್ರಸ್ತುತ ವಾಯುಮಾಲಿನ್ಯದ ಪ್ರಮಾಣ ಅತಿ ಅಪಾಯಕಾರಿ ಮಟ್ಟದಿಂದ ಅತಿ ಕಳಪೆ ಮಟ್ಟಕ್ಕೆ ತಲುಪಿದೆ.
Recommended Video