ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ, ಭಾನುವಾರದವರೆಗೆ ಶಾಲೆಗಳು ಬಂದ್
ನವದೆಹಲಿ, ನವೆಂಬರ್ 8: ರಾಷ್ಟ್ರ ರಾಜಧಾನಿಯ ಮಾಲಿನ್ಯ ಮತ್ತಷ್ಟು ಹದಗೆಟ್ಟಿದೆ. ಜನರಿಗೆ ಉಸಿರಾಟದ ಸಮಸ್ಯೆ ಮತ್ತು ಕಣ್ಣು ಉರಿ ಕಾಣಿಸಿಕೊಂಡಿದ್ದು ಮತ್ತಷ್ಟು ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇಂದು ದೆಹಲಿಯ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಹೀಗಿದ್ದೂ ವಾಯು ಮಾಲಿನ್ಯ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಶಾಲೆಗಳಿಗೆ ಭಾನುವಾರದವರೆಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

ಗ್ಯಾಸ್ ಚೇಂಬರ್
ದೆಹಲಿಯಲ್ಲಿ ಮಾರಣಾಂತಿಕ ಮಂಜು ಆವರಿಸಿದ್ದು ತೀರಾ ಕೆಳ ಮಟ್ಟದಲ್ಲಿ ನೆಲೆ ನಿಂತಿದೆ. ಈ ಹಿನ್ನಲೆಯಲ್ಲಿ ರಾಜಧಾನಿ ಗ್ಯಾಸ್ ಚೇಂಬರ್ ಆಗಿದೆ ಎಂದು ಮನೀಷ್ ಸಿಸೋಡಿಯಾ ಆತಂಕ ವ್ಯಕ್ತಪಡಿಸಿದ್ದಾರೆ. ಜತೆಗೆ ಸಮ ಬೆಸ ಯೋಜನೆ ಮತ್ತೆ ಜಾರಿಗೆ ತರುವ ಬಗ್ಗೆಯೂ ಚಿಂತಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಆರೋಗ್ಯ ಸಮಸ್ಯೆ
ವಾಯು ಮಾಲಿನ್ಯ ಸಮಸ್ಯೆ ಕಾಣಿಸಿಕೊಂಡ ನಂತರ ಬುಧವಾರ ಎರಡನೇ ದಿನವೂ ಜನರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಜನರಿಗೆ ಕಣ್ಣು ಉರಿ ಕಾಣಿಸಿಕೊಂಡಿದೆ ಜತೆಗೆ ಮೂಗು ಮತ್ತು ಗಂಟಲಿನಲ್ಲಿ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಮೇರೆ ಮೀರಿದ ಮಾಲಿನ್ಯ
ಗಾಳಿಯ ಗುಣಮಟ್ಟವನ್ನು ಅಳೆಯುವ ವಾಯು ಗುಣಮಟ್ಟದ ಸೂಚ್ಯಂಕ ಸದ್ಯ ದೆಹಲಿಯ ಸದ್ಯ 448ನ್ನು ಮುಟ್ಟಿದೆ. ಈ ಮಾಪಕದಲ್ಲಿ 100 ಕ್ಕಿಂತ ಹೆಚ್ಚು ಅಂಕಿ ತೋರಿಸಿದರೆ ಅದನ್ನು ಆರೋಗ್ಯಕ್ಕೆ ಹಾನಿಕರ ಎನ್ನಲಾಗುತ್ತದೆ. ಹೀಗಿರುವಾಗ ಸದ್ಯ ದೆಹಲಿಯ ವಾಯ ಮಾಲಿನ್ಯದ ಮಟ್ಟ 448ನ್ನು ತಲುಪಿದೆ.

ಸಾರ್ವಜನಿಕ ಆರೋಗ್ಯದ ತುರ್ತು ಪರಿಸ್ಥಿತಿ
ದಟ್ಟವಾದ ಕಂದು ಬಣ್ಣದ ಮಂಜು ದೆಹಲಿಯನ್ನು ಆವರಿಸಿಕೊಂಡಿದ್ದು ಉಡಿರಾಡುವುದೇ ದುಸ್ತರವಾಗಿದೆ. ಈ ಹಿನ್ನಲೆಯಲ್ಲಿ ಉನ್ನತ ವೈದ್ಯಕೀಯ ಸಂಸ್ಥೆ ಐಎಂಎ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಜತೆಗೆ ಸುಪ್ರಿಂ ಕೋರ್ಟ್ ನೇಮಿಸಿದ ಸಮಿತಿ ಪಾರ್ಕಿಂಗ್ ಶುಲ್ಕಗಳನ್ನು ನಾಲ್ಕು ಪಟ್ಟು ಏರಿಸಲು, ಮೆಟ್ರೋ ರೈಲಿನ ಪ್ರಯಾಣ ದರಗಳನ್ನು ಇಳಿಸಲು ಶಿಫಾರಸ್ಸು ಮಾಡಿದೆ.












Click it and Unblock the Notifications