ಆಮ್ ಆದ್ಮಿ ಕೇಜ್ರಿವಾಲಾ ಹೊಸ ನಾಟಕ, ಗಂಡಾಂತರ
ನವದೆಹಲಿ, ಫೆ. 10: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾ ಅವರು ತಮ್ಮಮಹತ್ವಾಕಾಂಕ್ಷಿ ಜನ ಲೋಕಪಾಲ್ ವಿಧೇಯಕವನ್ನು ದಿಲ್ಲಿ ಮಟ್ಟಿಗೆ ಜಾರಿಗೊಳಿಸಲು ಉತ್ಸುಕತೆ ತೋರಿರುವಾಗ ರಾಜ್ಯಪಾಲರು ಮತ್ತು ಕೇಂದ್ರ ಸರಕಾರ ಇಲ್ಲಸಲ್ಲದ ನೆಪ ಹೇಳಿ ವಿಧೇಯಕ ಅಂಗೀಕಾರಕ್ಕೆ ಕಂಟಕವಾಗಿದ್ದಾರೆ ಎಂದು ಆರೋಪಿಸಿ, ರಾಜೀನಾಮೆ ನೀಡುವ ಮಾತನ್ನಾಡಿದ್ದಾರೆ.
ಆದರೆ ತಾಜಾ ಬೆಳವಣಿಗೆಯೊಂದರಲ್ಲಿ ಕೇಜ್ರಿವಾಲಾರ ಆ ಕ್ರಮಕ್ಕೂ ಮುನ್ನ ಅವರ ಸರಕಾರ ತಂತಾನೇ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ. ತಂತಿ ನಡಿಗೆಯಲ್ಲಿ ಸರಕಾರ ರಚನೆಯ ಸರ್ಕಸ್ ಮಾಡಿರುವ ಆಮ್ ಆದ್ಮಿ ಪಕ್ಷವು ಬಹುಮತದ ಕೊರತೆಯನ್ನು ಎದುರಿಸುವ ಲಕ್ಷಣಗಳಿವೆ.

ಪಕ್ಷೇತರ ಶಾಸಕ ರಾಮಬೀರ್ ಶೋಕಿನ್ ಅವರು ತಾವು ಆಮ್ ಆದ್ಮಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ತಮ್ಮ ಹಿತಾಸಕ್ತಿ ಕಾಯುತ್ತಿಲ್ಲ. ತಮ್ಮ ಕ್ಷೇತ್ರದ ಬೇಕು ಬೇಡಗಳತ್ತ ಆಮ್ ಆದ್ಮಿ ಸರಕಾರ ಗಮನ ಹರಿಸುತ್ತಿಲ್ಲ. ಸಿಎಂ ಕೇಜ್ರಿವಾಲಾ ನನ್ನ ಫೋನಿಗೂ ಸಿಗುತ್ತಿಲ್ಲ ಎಂದು ಪಕ್ಷೇತರ ಶಾಸಕ ರಾಮಬೀರ್ ಅಸಮಾಧಾನದ ಗೂಡಾಗಿದ್ದಾರೆ.
ಇದರಿಂದ, 70 ಸದಸ್ಯರ ದಿಲ್ಲಿ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 36 ಶಾಸಕರ ಬೆಂಬಲದ ಅಗತ್ಯವಿದೆ. ಆದರೆ ಶಾಸಕ ರಾಮಬೀರ್, ಬೆಂಬಲ ವಾಪಸ್ ತೆಗೆದುಕೊಂಡರೆ ಅಲ್ಪಮತಕ್ಕೆ ಕುಸಿಯುತ್ತದೆ. ಜತೆಗೆ ಮತ್ತೊಬ್ಬ ಶಾಸಕ ಬಿನ್ನಿ, ಆಮ್ ಆದ್ಮಿಗೆ ನೀಡಿರುವ ಬೆಂಬಲ ವಾಪಸ್ ಪಡೆಯಲು ರಾಮಬೀರ್ ಬೆನ್ನಿಗೇ ಇದ್ದಾರೆ.
ಕಾಂಗ್ರೆಸ್ಸಿನ 8 ಶಾಸಕರು, ಜೆಡಿಯು ಪಕ್ಷದ ಸೋಯಿಬ್ ಇಕ್ಬಾಲ್ ಮತ್ತು ಪಕ್ಷೇತರ ಶಾಸಕ ರಾಮಬೀರ್ ಶೋಕಿನ್ ಸೇರಿಕೊಂಡು 27 ಸದಸ್ಯರ ಆಮ್ ಆದ್ಮಿ ಸರಕಾರಕ್ಕೆ ಆಸರೆಯಾಗಿದ್ದಾರೆ.
ದಿಲ್ಲಿಯಲ್ಲಿ ''ಅಲ್ಪಸಂಖ್ಯಾತ'' ಸರಕಾರ ರಚಿಸಿರುವ ಕೇಜ್ರಿವಾಲಾ ಅವರು ಜನ ಲೋಕಪಾಲ್ ವಿಧೇಯಕ ಜಾರಿ ವಿಷಯವನ್ನು ಮುಂದಿಟ್ಟಿಕೊಂಡು ಕೇಂದ್ರ ಸರಕಾರ ತಮಗೆ ತೊಡಕುಂಟು ಮಾಡುತ್ತಿದೆ. ಹಾಗಾಗಿ ಹಂಗಿನ ಸರಕಾರದ ಹಂಗು ಬೇಡ. ಸರಕಾರ ವಿಸರ್ಜಿಸಿ, ಅಗತ್ಯಬಿದ್ದರೆ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications