ಅಭಿನಂದನ್ ವರ್ಧಮಾನ ಡಿಬ್ರೀಫಿಂಗ್ ಮುಕ್ತಾಯ
ನವದೆಹಲಿ, ಮಾರ್ಚ್ 14: ಇತ್ತೀಚೆಗೆ ಪಾಕ್ ಸೇನೆ ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ಪಾಕಿಸ್ತಾನಿ ಸೈನಿಕರಿಗೆ ಸೆರೆ ಸಿಕ್ಕಿ, ನಂತರ ಜಾಗತಿಕ ಒತ್ತಡದಿಂದಾಗಿ ಬಿಡುಗಡೆಗೊಂಡ ಅಭಿನಂದನ್ ವರ್ಧಮಾನ್ ಅವರ ಡಿಬ್ರೀಫಿಂಗ್ ಪ್ರಕ್ರಿಯೆ ಮುಕ್ತಾಯವಾಗಿದೆ ಎಂದು ಭಾರತೀಯ ವಾಯುಸೇನೆ ಮೂಲಗಳು ಹೇಳಿವೆ.
ಪಾಕಿಸ್ತಾನಿ ಸೇನೆಗೆ ಸೆರೆ ಸಿಕ್ಕುವ ಮೊದಲ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಸವಿವರ ಮಾಹಿತಿಯನ್ನು ಡೀಬ್ರಿಫಿಂಗ್ ನಲ್ಲಿ ನೀಡಲಾಗಿದೆ. ಹೀಗೆ ಎದುರಾಳಿ ಸೈನಿಕರಿಗೆ ಸೆರೆಸಿಕ್ಕ ಸೈನಿಕರು, ಸ್ವದೇಶಕ್ಕೆ ವಾಪಸ್ಸಾದ ಮೇಲೆ ಡಿಬ್ರೀಫಿಂಗ್ ಗೆ ಒಳಗಾಗಬೇಕಾಗುತ್ತದೆ.
ಅಭಿನಂದನ್ ಅವರ ಡಿಬ್ರೀಫಿಂಗ್ ಮುಕ್ತಾಯವಾಗಿದ್ದು, ಅವರು ಇನ್ನೂ ಕೆಲವು ದಿನಗಳ ಕಾಲ ಸಿಕ್ ಲೀವ್ ಪಡೆದು ಕೆಲಸದಿಂದ ದೂರವುಳಿಯಲಿದ್ದಾರೆ. ಅವರಿಗೆ ಕೆಲದಿನಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಆರ್ಮಿ ರೀಸರ್ಚ್ ಅಂಡ್ ರೆಫರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು. ಅವರನ್ನು ಕೂಡಲೇ ಬಿಟ್ಟುಬಿಡುವಂತೆ ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ ಕಾರಣ ಪಾಕಿಸ್ತಾನ ಅವರನ್ನು ಬಿಡುಗಡೆ ಮಾಡಲು ಒಪ್ಪಿತ್ತು. ಆದರೆ ಅದಕ್ಕೆ 'ಶಾಂತಿಯ ಸಂಕೇತ' ಎಂಬೆಲ್ಲ ಕಾರಣ ನೀಡಿತ್ತು. ಆದರೆ ಅಭಿನಂದನ್ ಬಿಡುಗಡೆ ಪಾಕಿಸ್ತಾನ ನೀಡಿದ ಭಿಕ್ಷೆಯಾಗಲೀ, ಅನುಕಂಪದ ನಡೆಯಾಗಲೀ ಅಲ್ಲ. ಇದು ಭಾರತದ ರಾಜತಾಂತ್ರಿಕ ಗೆಲುವು ಎಂದು ಭಾರತ ಹೇಳಿತ್ತು.
ನಂತರ ಮಾರ್ಚ್ 1 ರಂದು ರಾತ್ರಿ 9:30 ಕ್ಕೆ ಅಭಿನಂದನ್ ಅವರನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸಿತ್ತು.












Click it and Unblock the Notifications