ನಿರ್ಭಯಾ ಪ್ರಕರಣ: ಆರೋಪಿಗಳಿಗೆ ಗಲ್ಲೋ ಜೀವಾವಧಿಯೋ ಇಂದು ತೀರ್ಪು
ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ಶುಕ್ರವಾರ ಮಹತ್ಚದ ತೀರ್ಪು ಹೊರಬೀಳಲಿದೆ. ಆರೋಪಗಳಿಗೆ ಮರಣದಂಡನೆ ಖಾತ್ರಿಯಾಗುತ್ತದಾ ಎಂಬುದನ್ನು ಕಾದುನೋಡಬೇಕಿದೆ
ನವದೆಹಲಿ, ಮೇ 5: ದೆಹಲಿಯಲ್ಲಿ ನಾಲ್ಕು ವರ್ಷದ ಹಿಂದೆ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯೇ ಅಥವಾ ಜೀವಾವಧಿ ಶಿಕ್ಷೆಯೇ ಎಂಬುದನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಮೇ 5) ತೀರ್ಪು ನೀಡಲಿದೆ. ವಿಚಾರಣೆ ಕೋರ್ಟ್ 2013ರಲ್ಲಿ ಗಲ್ಲುಶಿಕ್ಷೆ ನೀಡುವಂತೆ ಆದೇಶ ನೀಡಿತ್ತು. ಅದರ ಮರು ವರ್ಷ ಹೈಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿದಿತ್ತು.
ಆರೋಪಿಗಳಾದ ಅಕ್ಷಯ್ ಠಾಕೂರ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಮುಕೇಶ್ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್ 16, 2012ರಂದು ನಡೆದಿದ್ದ ಅತ್ಯಾಚಾರದಲ್ಲಿ ಆರೋಪಿಯಾಗಿದ್ದ ರಾಮ್ ಸಿಂಗ್ 2013ರಲ್ಲಿ ತಿಹಾರ್ ಜೈಲಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಕಳೆದ ಆಗಸ್ಟ್ ನಲ್ಲಿ ವಿನಯ್ ಶರ್ಮಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ.[ನಿರ್ಭಯಾ ದೌರ್ಜನ್ಯಕ್ಕೆ 4 ವರ್ಷ, ಎಲ್ಲಿದೆಯೋ ನ್ಯಾಯ?]
ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಇನ್ನೊಬ್ಬ ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಕಳೆದ ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದಾನೆ. ಬಾಲಾಪರಾಧಿ ಕಾಯ್ದೆ ಅಡಿ ಆತ ಬಿಡುಗಡೆಯಾಗಿದ್ದ. ಸದ್ಯ ಕಾನೂನಿಗೆ ತಿದ್ದುಪಡಿ ತಂದಿದ್ದು, ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಪರಿಗಣಿಸಲಾಗುತ್ತದೆ.[ದೆಹಲಿಯಲ್ಲಿ ಇಬ್ಬರು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ]
ನ್ಯಾ ದೀಪಕ್ ಮಿಶ್ರಾ, ನ್ಯಾ ಆರ್ ಭಾನುಮತಿ ಅವರನ್ನು ಒಳಗೊಂಡ ಪೀಠವು ಶುಕ್ರವಾರ ತೀರ್ಪು ನೀಡಲಿದ್ದು, ಇಬ್ಬರೂ ಆರೋಪಿಗಳ ಅರ್ಜಿ ತಿರಸ್ಕರಿಸಿದರೆ, ಅಲ್ಲಿಗೆ ಕೋರ್ಟ್ ಗೆ ಇನ್ಯಾವುದೇ ಮನವಿ ಸಲ್ಲಿಸಲು ಸಾಧ್ಯವಾಗಲ್ಲ. ನೇಣು ಶಿಕ್ಷೆ ತೀರ್ಪು ಅಂತಿಮವಾಗುತ್ತದೆ. ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದು. ಕೋರ್ಟ್ ಗೆ ಪರಿಶೀಲನಾ ಅರ್ಜಿ ಸಲ್ಲಿಸಬಹುದು. ಆದರೆ ಕೋರ್ಟ್ ಅಂತೂ ಮನಸು ಬದಲಿಸುವ ಸಾಧ್ಯತೆ ಇಲ್ಲ.[ನಿರ್ಭಯಾ ಕೇಸಿನ ಅತ್ಯಾಚಾರಿ ವಿನಯ್ ಆತ್ಮಹತ್ಯೆಗೆ ಯತ್ನ]
ಆದರೆ, ಆರೋಪಿಗಳಿಗೆ ತಕ್ಷಣವೇ ಗಲ್ಲು ಶಿಕ್ಷೆ ಕೂಡ ಜಾರಿಯಾಗಲ್ಲ. ಏಕೆಂದರೆ ದರೋಡೆ ಪ್ರಕರಣವೊಂದರಲ್ಲಿ 2015ರಲ್ಲಿ ಈ ಆರೋಪಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆಯಾಗಿದೆ. ಆದ್ದರಿಂದ ಮೊದಲಿಗೆ ಆ ಶಿಕ್ಷೆ ಅನುಭವಿಸಿದ ನಂತರವಷ್ಟೇ ಗಲ್ಲು ಶಿಕ್ಷೆ ಆಗುತ್ತದೆ.[ನಿರ್ಭಯಾ ಬಾಲಾಪರಾಧಿ ಬಿಡುಗಡೆ ಖಂಡಿಸಿ ಮೈಸೂರಲ್ಲಿ ಸಹಿ ಚಳವಳಿ]