Virat Kohli Record: ರನ್ ಮಷಿನ್ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ
RCB Virat Kohli Record: ಧರ್ಮಶಾಲಾದಲ್ಲಿ ಭಾನುವಾರ (ಮೇ 17) ನಡೆದ ಐಪಿಎಲ್ 2026ರ 61ನೇ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ಗೇ ಗ್ರ್ಯಾಂಡ್ ಎಂಟ್ರಿ ಕೊಟ್ಟಿತು. ಇನ್ನೂ ಇದೇ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಐತಿಹಾಸಿದ ದಾಖಲೆ ಮಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ ಪರ ಆರಂಭಿಕ ಆಟಗಾರನಾಗಿ 5,500 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಪಂದ್ಯಕ್ಕೂ ಮುನ್ನ ಈ ಮೈಲಿಗಲ್ಲು ತಲುಪಲು ಅವರಿಗೆ ಕೇವಲ 7 ರನ್ಗಳ ಅವಶ್ಯಕತೆಯಿತ್ತು. ಅಜ್ಮತುಲ್ಲಾ ಒಮರ್ಜಾಯ್ ಅವರ ಬೌಲಿಂಗ್ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಅವರು ಈ ದಾಖಲೆ ಬರೆದರು.

ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ
ಐಪಿಎಲ್ನಲ್ಲಿ ಒಟ್ಟಾರೆಯಾಗಿ ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಕೂಡ ಆರಂಭಿಕರಾಗಿ 5,500 ರನ್ ಗಳಿಸಿದ್ದಾರೆ. ಆದರೆ ಇವರಿಬ್ಬರೂ ವಿವಿಧ ತಂಡಗಳ ಪರ ಆಡಿ ಈ ಸಾಧನೆ ಮಾಡಿದ್ದಾರೆ. ಇನ್ನೂ ಭಾನುವಾರ ನಡದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ 58 ರನ್ ಗಳಿಸಿದ ಕೊಹ್ಲಿ ತಂಡ ಪ್ಲೇ-ಆಫ್ ಪ್ರವೇಶಿಸಲು ಪ್ರಮುಖ ಪಾತ್ರವಹಿಸಿದರು. ಕಿಂಗ್ ಕೊಹ್ಲಿ ಅವರ ಈ ಉತ್ತಮ ಪ್ರದರ್ಶನ ಆರ್ಸಿಬಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದೆ.
ನಾಯಕನಾಗಿ 100 ಪಂದ್ಯಗಳನ್ನ ಪೂರೈಸಿದ ಅಯ್ಯರ್
ಮತ್ತೊಂದೆಡೆ ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ 100 ಪಂದ್ಯಗಳನ್ನು ಪೂರೈಸಿದ ಅಪರೂಪದ ಸಾಧಕರ ಪಟ್ಟಿಗೆ ಶ್ರೇಯಸ್ ಅಯ್ಯರ್ ಸೇರ್ಪಡೆಯಾಗಿದ್ದಾರೆ. ಧರ್ಮಶಾಲಾದ ಪಿಚ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರನ್ ಬೆನ್ನಟ್ಟುವುದು ಸುಲಭ ಎಂಬ ಕಾರಣಕ್ಕೆ ಅವರು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆದರೆ ಇದು ಉಲ್ಟಾ ಹೊಡೆದಿದ್ದು, ಪಂಜಾಬ್ ಹೀನಾಯ ಸೋಲು ಕಂಡಿತು. ಕಳೆದ ಪಂದ್ಯಕ್ಕೆ ಹೋಲಿಸಿದರೆ ಪಂಜಾಬ್ ಕಿಂಗ್ಸ್ ತಂಡವು ತನ್ನ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಹರ್ಪ್ರೀತ್ ಬ್ರಾರ್ ಮತ್ತು ಲಾಕಿ ಫರ್ಗುಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.
ರಜತ್ ಪಾಟಿದಾರ್ ಅವರ ಅನುಪಸ್ಥಿತಿಯಲ್ಲಿ ಆರ್ಸಿಬಿ ತಂಡವನ್ನು ಜಿತೇಶ್ ಶರ್ಮಾ ಅವರು ಮುನ್ನಡೆಸಿದರು. ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದ್ದು, ನಾಯಕ ರಜತ್ ಪಾಟಿದಾರ್ ಮತ್ತು ಜೇಕಬ್ ಡಫಿ ಅವರ ಬದಲಿಗೆ ಸುಯಶ್ ಶರ್ಮಾ ಮತ್ತು ರೊಮಾರಿಯೋ ಶೆಫರ್ಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಜಿತೇಶ್ ಶರ್ಮಾ ಹೇಳಿದ್ದೇನು?
ಟಾಸ್ ಸೋತ ಬಳಿಕ ಮಾತನಾಡಿದ ಆರ್ಸಿಬಿ ತಂಡದ ಹಂಗಾಮಿ ನಾಯಕ ಜಿತೇಶ್ ಶರ್ಮಾ ಅವರು ನೀಡಿದ ಹೇಳಿಕೆ ಇದೀಗ ವೈರಲ್ ಆಗಿದೆ. "ನಾವೂ ಕೂಡ ಮೊದಲು ಬೌಲಿಂಗ್ ಮಾಡಲು ಬಯಸಿದ್ದೆವು. ಆದರೆ ಪಿಚ್ ಚೆನ್ನಾಗಿ ಕಾಣಿಸುತ್ತಿದೆ ಮತ್ತು 40 ಓವರ್ಗಳವರೆಗೂ ಉತ್ತಮವಾಗಿ ಇರಲಿದೆ. ರಜತ್ ಪಾಟಿದಾರ್ ಅದ್ಭುತವಾಗಿ ಆಡುತ್ತಿದ್ದು, ಅವರು ಹೈದರಾಬಾದ್ನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ," ಎಂದು ಹೇಳಿದರು.
"ನಾವು ಈಗ ಟೂರ್ನಿಯ ನಿರ್ಣಾಯಕ ಹಂತದಲ್ಲಿದ್ದೇವೆ. ವೈಯಕ್ತಿಕವಾಗಿ ಮತ್ತು ಒಂದು ತಂಡವಾಗಿ ಆಟಗಾರರು ಪ್ರದರ್ಶನ ನೀಡುತ್ತಿರುವ ರೀತಿಯ ಬಗ್ಗೆ ನನಗೆ ತುಂಬಾ ಖುಷಿಯಿದೆ. ತಂಡವು ಸದ್ಯ ಉತ್ತಮ ಲಯದಲ್ಲಿರುವುದು ನಮಗೆ ತೃಪ್ತಿ ತಂದಿದೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಒಂದು ಜಯ ಸಾಧಿಸಿದರೆ ನಮ್ಮ ಪ್ಲೇ-ಆಫ್ ಸ್ಥಾನ ಖಚಿತವಾಗುತ್ತದೆ. ಆದ್ದರಿಂದ ಇದು ನಮಗೆ ಅತ್ಯಂತ ಪ್ರಮುಖ ಪಂದ್ಯ. ಈ ಹಂತದಲ್ಲಿ ಪ್ರತಿ ಪಂದ್ಯವೂ ಮುಖ್ಯವೇ. ಈ ಒಂದು ಗೆಲುವು ಕೇವಲ ನಮಗೆ ಮಾತ್ರವಲ್ಲದೆ ಇತರ ಹಲವು ತಂಡಗಳಿಗೂ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ತರಬಹುದು," ಎಂದು ಹೇಳಿದರು. ಆದರೆ ಇದೀಗ ಆರ್ಸಿಬಿ ಭರ್ಜರಿ ಗೆಲುವು ಸಾಧಿಸಿ ನೇರವಾಗಿ ಪ್ಲೇ-ಆಪ್ ಪ್ರವೇಶ ಮಾಡಿದೆ.












Click it and Unblock the Notifications