ಸೂಪರ್ಫಾಸ್ಟ್ ಅಲ್ಲ, ಸೂಪರ್ ಸ್ಲೋ ರೈಲು; ಹೊಸ ಬೆಂಗಳೂರು-ಮುಂಬೈ ರೈಲಿಗೆ ಪ್ರಯಾಣಿಕರ ಟೀಕೆ
ಬೆಂಗಳೂರು: ಮಹಾರಾಷ್ಟ್ರ-ಕರ್ನಾಟಕ ಸಂಪರ್ಕಿಸುವ ಪ್ರಮುಖ ಮುಂಬೈ-ಬೆಂಗಳೂರು ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (Bengaluru-Mumbai Superfast Express Train) ರೈಲಿಗೆ ಬೆಂಗಳೂರಿನ ಬಳಿಕ ಹುಬ್ಬಳ್ಳಿಯಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹಸಿರು ನಿಶಾನೆ ತೋರಿಸಿದ್ದಾರೆ. ಈ ರೈಲಿನಿಂದ ಜನರಿಗೆ ಅನುಕೂಲ ಆಗಲಿದೆ ಎಂದು ಹೇಳಲಾಯಿತಾದರೂ ಸಾರ್ವಜನಿಕರಿಂದಲೇ ಆಕ್ಷೇಪ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ರೈಲುಗಳ ನಿಲುಗಡೆ, ವೇಗ ಸೇರಿ ಕೆಲವು ವಿಷಯಗಳನ್ನು ಪ್ರಸ್ತಾಪಿಸಿ ಪ್ರಯಾಣಿಕರು ಬೇಸರ ಹೊರ ಹಾಕಿದ್ದಾರೆ. ಇದು 'ಸೂಪರ್ ಸ್ಲೋ ರೈಲು' ಎಂದೆಲ್ಲ ಟೀಕಿಸಿದ್ದಾರೆ.
ವರ್ಷಗಳ ಬಳಿಕ ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ನೇರ ರೈಲು ಸೇವೆ ಆರಂಭವಾಗಿದೆ. ಈ ರೈಲು ಬೆಂಗಳೂರಿನ ಎಸ್ಎಂವಿಟಿಯಿಂದ ಹೊರಡುತ್ತದೆ, ಆದರೆ ನಗರವನ್ನು ಪ್ರವೇಶಿಸುವುದಿಲ್ಲ. ರಾಜ್ಯದಲ್ಲಿ ನಿಲುಗಡೆ ಕಡಿಮೆ ಇವೆ. ಮಹಾರಾಷ್ಟ್ರದಲ್ಲಿ ಹೆಚ್ಚಿವೆ. ಅಲ್ಲದೇ 1200 ಕಿಲೋ ಮೀಟರ್ ಮಾರ್ಗ ಕ್ರಮಿಸಲು ಬರೋಬ್ಬರಿ 22-24 ಗಂಟೆ ಸಮಯ ಹಿಡಿಯುತ್ತದೆ. ಪ್ರಹ್ಲಾದ್ ಜೋಶಿಯವರ ಪೋಸ್ಟ್ಗೆ ಅನೇಕ ಕಾಮೆಂಟ್ಗಳನ್ನು ಮಾಡಿ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಾಸ್ತವ ಅಂಶಗಳ ಮೇಲೆ ಬೆಳಕು ಚೆಲ್ಲಿಸಿದ್ದಾರೆ.

ಹುಬ್ಬಳ್ಳಿ ಮುಖಾಂತರ ಸಂಪರ್ಕದ ಹೊಸ ಕ್ರಾಂತಿ!
ಎಕ್ಸ್ ಪೋಸ್ಟ್ ಮಾಡಿರುವ ಪ್ರಹ್ಲಾದ್ ಜೋಶಿಯವರು, ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿಯ ಮೂಲಕ ಹೊಸ ದ್ವಿಸಪ್ತಾಹಿಕ ಎಕ್ಸ್ಪ್ರೆಸ್ ರೈಲು ಪ್ರಾರಂಭವಾಗಿದೆ. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಮುಂಬೈ ನಡುವೆ ಹುಬ್ಬಳ್ಳಿ ಮುಖಾಂತರ ಸಂಚರಿಸುವ ನೂತನ ವಿಶೇಷ ರೈಲಿಗೆ (06557) ಹಸಿರು ನಿಶಾನೆ ತೋರಿಸಲಾಗಿದೆ ಎಂದರು.
ಬೆಂಗಳೂರಿನಿಂದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ವಾಣಿಜ್ಯ ನಗರಿ ಮುಂಬೈಗೆ ಸಂಚರಿಸಲಿದೆ. ಇಲಾಖೆ ಅನುಮೋದನೆ ಬಳಿಕ ಇದೀಗ ಸಂಚಾರ ಆರಂಬವಾಗಿದೆ.
ಈ ಹೊಸ ರೈಲು ಮಾರ್ಗದಲ್ಲಿ ರೈಲುಗಳ (16553/16554) ನಿಯಮಿತ ಸೇವೆ ಮೇ 23 ರಿಂದ ಬೆಂಗಳೂರಿನಿಂದ (ರಾತ್ರಿ 8.35) ಮತ್ತು ಮೇ 24 ರಿಂದ ಮುಂಬೈನಿಂದ (ರಾತ್ರಿ 11.15) ಪ್ರಾರಂಭವಾಗಲಿದೆ. ಪ್ರತಿ ಶನಿವಾರ ಮತ್ತು ಮಂಗಳವಾರ ಬೆಂಗಳೂರಿನಿಂದ ಪ್ರತಿ ಭಾನುವಾರ ಮತ್ತು ಬುಧವಾರ ಮುಂಬೈನಿಂದ ರೈಲು ಸಂಚರಿಸಲಿದೆ. ಈ ಹೊಸ ರೈಲು ಸೇವೆಯು ನಮ್ಮ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ದಾವಣಗೆರೆ ಭಾಗದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕಾಗಿ ಮುಂಬೈ ಹಾಗೂ ಪುಣೆಗೆ ಪ್ರಯಾಣಿಸುವವರಿಗೆ ವರದಾನವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ಪ್ರವೇಶಿಸದ ಮುಂಬೈ ರೈಲು
ಎಸ್ಎಂವಿಟಿ ರೈಲು ನಿಲ್ದಾಣದಿಂದ ಹೊರಡುವಾಗ ಮತ್ತು ಮರಳಿ ಬರುವ ಈ ರೈಲು ನಗರವನ್ನು ಪ್ರವೇಶಿಸುವುದೇ ಇಲ್ಲ. ಟರ್ಮಿನಲ್ನಿಂದ ಬಾಣಸವಾಡಿ, ಹೆಬ್ಬಾಳ ಮೂಲಕ ಲೊಟ್ಟೆಗೊಳ್ಳಹಳ್ಳಿ, ಯಶವಂತಪುರ ಮುಖೇನ ಹೊರಗಿಂತ ಹೊರಗೇ ತುಮಕೂರಿನತ್ತ ಹೋಗಿಬಿಡುತ್ತದೆ. ಬೇರೆ ಸ್ಥಳದಿಂದ ಎಸ್ಎಂವಿಟಿಗೆ ಬರಲು ಎಲ್ಲರಿಗೂ ಆಗುವುದಿಲ್ಲ. ನಗರದ ಒಳಗಿನಿಂದ (ಕೆಎಸ್ಆರ್ ಬೆಂಗಳೂರು) ಈ ರೈಲು ಸಂಚರಿಸಿದ್ದರೆ ಹೆಚ್ಚಿನ ಅನುಕೂಲ ಆಗುತ್ತಿತ್ತು ಎಂದು ಕೆಲವರು ಒತ್ತಾಯಿಸಿದ್ದಾರೆ.
ಈ ನಿಲ್ದಾಣಗಳಲ್ಲಿ ನಿಲುಗಡೆ ನೀಡಲು ಆಗ್ರಹ
ಈ ರೈಲಿಗೆ ಮಹಾರಾಷ್ಟ್ರದಲ್ಲಿ 10 ನಿಲುಗಡೆ ನೀಡಲಾಗಿದೆ, ಕರ್ನಾಟಕದಲ್ಲಿ 6 ನಿಲ್ದಾಣಗಳಲ್ಲಿ ಮಾತ್ರವೇ ನಿಲುಗಡೆ ನೀಡಲಾಗುತ್ತದೆ. ಹಾವೇರಿಯಲ್ಲಿ ನಿಲುಗಡೆ ಏಕಿಲ್ಲ. ಉತ್ತರ ಕರ್ನಾಟಕದ ಎಲ್ಲ ಭಾಗದವರಿಗೆ ಅನುಕೂಲವಾಗಬೇಕಾದರೆ ಅಗತ್ಯ ನಿಲುಗಡೆ ನೀಡಬೇಕು ಎಂದಿದ್ದಾರೆ. ಅಲ್ಲದೇ ಬೆಳಗಾವಿ ಮಾರ್ಗವಾಗಿ ಸಾಗುವ ಈ ರೈಲಿಗೆ ಗೋಕಾಕ್, ರಾಯಬಾಗ್ನಲ್ಲಿ ನಿಲುಗಡೆ ನೀಡುವಂತೆ ಕೂಗು ಕೇಳಿ ಬಂದಿದೆ.
ಹೆಸರಿಗೆ ತಕ್ಕಂತೆ ರೈಲು ಓಡಲಿ 'ಸೂಪರ್ ಸ್ಲೋ ರೈಲು'
ಈ ರೈಲನ್ನು ನೀವು ಸೂಪರ್ ಫಾಸ್ಟ್ ರೈಲು ಎನ್ನುತ್ತೀರಿ. ಆದರೆ ಇದು 1200 ಕಿಲೋ ಮೀಟರ್ ಸಂಚರಿಸಲಿದೆ. ಇದರ ವೇಗ ಹೆಚ್ಚಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನೋಬ್ಬರು 'ಇದಕ್ಕೆ ಸಂಪರ್ಕ ಕ್ರಾಂತಿ ಅಂತ ಹೆಸರಿಡಬೇಡಿ ಸರ್..ಇದು 'ಭಾರತದ ಸೂಪರ್ ಸ್ಲೋ ರೈಲು' ಮತ್ತು ಇದನ್ನು ಭಾರತದ 'ಮೊದಲ ಬುಲೆಟ್ ಪ್ಯಾಸೆಂಜರ್ ರೈಲು' ಅಂತ ಹೆಸರಿಸಬೇಕು' ಎಂದು ಹೇಳಿದ್ದಾರೆ.
ಕೇಂದ್ರ ಸಚಿವರು ಹೇಳಿ ಹೋದರು, ನೀರು ಸೋರಿಕೆ ನಿಲ್ಲಲಿಲ್ಲ!
ಹೊಸ ರೈಲು ಸಂಚಾರಕ್ಕೆ ಖುಷಿ ಇದೆ, ಆದರೆ ಮೊದಲ ದಿನವೇ ರೈಲಿನ ಶೌಚಾಲಯ ಮುಚ್ಚಿದೆ. ಬೋಗಿಯೋಗೆ ಎ1 ಸೋಫಾದಲ್ಲಿ ಸೋರಿಕೆಯಾಗಿದ್ದು ಕಂಡು ಬಂದಿದೆ. ನೀವು ನಮ್ಮ ಕೋಚ್ಗೆ ಭೇಟಿ ನೀಡಿದಾಗ ನಾವು ಸೋರಿಕೆಯ ಬಗ್ಗೆ ನಿಮ್ಮ ಗಮನಕ್ಕೆ ತಂದಿದ್ದೇವೆ, ನೀವು ರೈಲ್ ಮಾಡಾಡ್ಗೆ ಕರೆ ಮಾಡಲು ಹೇಳಿ ಹೊರಟುಹೋದಿರಿ ಮತ್ತು ನಮಗೆ ಅವರಿಂದ ಸಹಾಯ ಸಿಗಲಿಲ್ಲ ಎಂದು ಅದೇ ರೈಲಿನ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೈಲಿನ ವೇಗದ ಕುರಿತು ಹೆಚ್ಚಿನ ಚರ್ಚೆಗಳು ಶುರುವಾಗಿವೆ.
ಹುಬ್ಬಳ್ಳಿ ಮುಖಾಂತರ ಸಂಪರ್ಕದ ಹೊಸ ಕ್ರಾಂತಿ!
— Pralhad Joshi (@JoshiPralhad) May 17, 2026
ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿಯ ಮೂಲಕ ಹೊಸ ದ್ವಿಸಪ್ತಾಹಿಕ ಎಕ್ಸ್ಪ್ರೆಸ್ ರೈಲು ಪ್ರಾರಂಭ.
ಇಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್, ಮುಂಬೈ ನಡುವೆ… pic.twitter.com/NddQEBPea4














Click it and Unblock the Notifications