ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ, ಲಾಕಪ್ ಡೆತ್ ಪ್ರಕರಣಗಳಿಗೆ ಬ್ರೇಕ್: ಕರ್ನಾಟಕದಲ್ಲಿ ಖಡಕ್ ನಿಯಮ ಜಾರಿ
ಬೆಂಗಳೂರು: ಪೊಲೀಸ್ ಕಸ್ಟಡಿಯಲ್ಲಿ ನಡೆಯುವ ದೌರ್ಜನ್ಯ ಹಾಗೂ ಸಾವುಗಳ ತನಿಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ತನಿಖಾ ಹಂತದ ಲೋಪದೋಷಗಳನ್ನು ತಡೆಗಟ್ಟಲು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ ಡಾ. ಎಂ.ಎ.ಸಲೀಂ ಅವರು ರಾಜ್ಯಾದ್ಯಂತ ಕಟ್ಟುನಿಟ್ಟಾದ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಸ್ಥಳೀಯ ತನಿಖಾಧಿಕಾರಿಗಳ ನಡುವಿನ ಅಸಮರ್ಪಕ ತನಿಖಾ ವಿಧಾನ, ಎಫ್ಐಆರ್ (FIR) ದಾಖಲಿಸಲು ಉಂಟಾಗುವ ವಿಳಂಬ, ಸರಿಯಾಗಿ ದಾಖಲಿಸದ ಮಹಜರುಗಳು ಹಾಗೂ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಆಗುತ್ತಿರುವ ವೈಫಲ್ಯಗಳ ಬಗ್ಗೆ ಪೊಲೀಸ್ ಮುಖ್ಯಸ್ಥರು ತೀವ್ರ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ನಿರ್ದೇಶನ ಹೊರಬಿದ್ದಿದೆ. ಅಪರಾಧ ತನಿಖಾ ಇಲಾಖೆ (CID) ಈ ಪ್ರಕರಣಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವಷ್ಟರಲ್ಲಿ ಪ್ರಮುಖ ಸಾಕ್ಷ್ಯಗಳು ನಾಶವಾಗಿರುತ್ತವೆ. ಇದು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಡಾ. ಸಲೀಂ ಕಳವಳ ವ್ಯಕ್ತಪಡಿಸಿದ್ದಾರೆ.

ತಕ್ಷಣವೇ ಎಫ್ಐಆರ್ ದಾಖಲು ಕಡ್ಡಾಯ
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 196ರ ಅಡಿಯಲ್ಲಿ ಕಸ್ಟಡಿಯಲ್ಲಿ ಹಿಂಸೆ ಅಥವಾ ಸಾವು ಸಂಭವಿಸಿದಾಗ ಠಾಣಾಧಿಕಾರಿಗಳು ತಕ್ಷಣವೇ ಎಫ್ಐಆರ್ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ದೂರು ಬಂದ ತಕ್ಷಣ ಅಥವಾ ಪೊಲೀಸ್ ಇಲಾಖೆಯೇ ಸ್ವಯಂಪ್ರೇರಿತವಾಗಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಎಫ್ಐಆರ್ ಪ್ರತಿಗಳನ್ನು ಯಾವುದೇ ವಿಳಂಬವಿಲ್ಲದೆ ಹಿರಿಯ ಅಧಿಕಾರಿಗಳಿಗೆ ರವಾನಿಸಬೇಕು ಎಂದು ಸೂಚಿಸಿದ್ದಾರೆ.
ತನಿಖೆಯ ಆರಂಭದಿಂದಲೇ ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳಲು, ಸಿಐಡಿ ಅಧಿಕೃತವಾಗಿ ತನಿಖೆ ವಹಿಸಿಕೊಳ್ಳುವವರೆಗೆ BNSS ಸೆಕ್ಷನ್ 175(1)ರ ಅಡಿಯಲ್ಲಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DySP) ಅಥವಾ ಅದಕ್ಕಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಯನ್ನು ತನಿಖೆಯ ಉಸ್ತುವಾರಿಗೆ ನೇಮಿಸಲು ಯುನಿಟ್ ಹೆಡ್ಗಳಿಗೆ ಅಧಿಕಾರ ನೀಡಲಾಗಿದೆ.
ಸಾವು ಸಂಭವಿಸದ ಕಸ್ಟಡಿಯಲ್ ಹಿಂಸೆ ಪ್ರಕರಣಗಳ ತನಿಖಾ ನಿಯಮಗಳು
ಸ್ಥಳೀಯ ಪೊಲೀಸರು BNSS ಸೆಕ್ಷನ್ 103 ಮತ್ತು 185ರ ಅಡಿಯಲ್ಲಿ ಸ್ಥಳದ ಪಂಚನಾಮೆ ನಡೆಸಬೇಕು.
ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು ಮತ್ತು ಸಂತ್ರಸ್ತರ ಹೇಳಿಕೆಗಳನ್ನು ಆಡಿಯೋ-ವಿಡಿಯೋ ರೂಪದಲ್ಲಿ ರೆಕಾರ್ಡ್ ಮಾಡಬೇಕು.
ಸಿಐಡಿ ಅಧಿಕಾರಿಗಳು ತನಿಖೆ ವಹಿಸಿಕೊಂಡ ನಂತರ, ಸಾಕ್ಷಿಗಳನ್ನು ಮರು-ವಿಚಾರಣೆ ನಡೆಸಬೇಕು, ದಾಖಲೆಗಳನ್ನು ಪರಿಶೀಲಿಸಬೇಕು.
ಚಾರ್ಜ್ಶೀಟ್ ಸಲ್ಲಿಸುವ ಮುನ್ನ BNSSನ ಸೆಕ್ಷನ್ 218 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 170ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಅಗತ್ಯವಿರುವ ಪೂರ್ವಾನುಮತಿಯನ್ನು ಪಡೆಯಬೇಕು.
ಕಸ್ಟಡಿಯಲ್ಲಿ ಸಾವು ಸಂಭವಿಸಿದ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಪಾಲಿಸಬೇಕಾದ ನಿಯಮಗಳು
BNSS ಸೆಕ್ಷನ್ 196ರ ಅಡಿಯಲ್ಲಿ ತಕ್ಷಣವೇ ಮ್ಯಾಜಿಸ್ಟ್ರೇಟ್ ತನಿಖೆಗೆ ಮನವಿ ಸಲ್ಲಿಸಬೇಕು.
ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಅನ್ವಯ ಮರಣೋತ್ತರ ಪರೀಕ್ಷೆಯ ಸಂಪೂರ್ಣ ವಿಡಿಯೋಗ್ರಫಿ ಮಾಡಿಸಬೇಕು.
ವಿಧಿವಿಜ್ಞಾನ (Forensic) ತಜ್ಞರನ್ನು ತಕ್ಷಣವೇ ಘಟನಾ ಸ್ಥಳಕ್ಕೆ ಕರೆಸಬೇಕು.
ಜೈವಿಕ ಮತ್ತು ಭೌತಿಕ ಮಾದರಿಗಳನ್ನು (Samples) ಎರಡು ದಿನಗಳ ಒಳಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ತಲುಪಿಸಬೇಕು.
ಸಿಐಡಿ ತಂಡಗಳು ಆರೋಪಿ ಅಧಿಕಾರಿಗಳು ಅಥವಾ ಸಾಕ್ಷಿಗಳೊಂದಿಗೆ ಘಟನಾ ಸ್ಥಳವನ್ನು ಮರುಸೃಷ್ಟಿಸಬೇಕು. ಅಲ್ಲದೆ, ಎಫ್ಎಸ್ಎಲ್ ಮತ್ತು ಲೋಕೋಪಯೋಗಿ ಇಲಾಖೆ (PWD) ತಜ್ಞರ ನೆರವಿನೊಂದಿಗೆ ಘಟನಾ ಸ್ಥಳದ ವಿವರವಾದ ನಕ್ಷೆಯನ್ನು ಸಿದ್ಧಪಡಿಸಬೇಕು.
ರಾಜ್ಯದ ಪೊಲೀಸ್ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಸಾರ್ವಜನಿಕ ನಂಬಿಕೆಯನ್ನು ಬಲಪಡಿಸಲು, ಸ್ವತಂತ್ರ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಖಾತರಿಪಡಿಸಲು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಡಿಜಿ ಮತ್ತು ಐಜಿಪಿ ಸಲೀಂ ತಿಳಿಸಿದ್ದಾರೆ.













Click it and Unblock the Notifications