ಬೆಂಗಳೂರಿಗರಿಗೆ ಇನ್ನು ಕೊಳವೆಯಲ್ಲಿ ಗ್ಯಾಸ್ ಪೂರೈಕೆ!
ನವದೆಹಲಿ, ಡಿ. 4 : ಮಹಾರಾಷ್ಟ್ರದ ದಾಭೋಲ್ ಹಾಗೂ ಬೆಂಗಳೂರು ನಡುವಿನ ಸುಮಾರು 1 ಸಾವಿರ ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಕೊಳವೆ ಮಾರ್ಗ ಲೋಕಾರ್ಪಣೆಯಾಗಿದೆ. ನವದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಅನಿಲ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಮನೆಮನೆಗೂ ಕೊಳವೆಯಲ್ಲಿ ಗ್ಯಾಸ್ ಪೂರೈಕೆಯಾಗುವ ಕಾಲ ಹತ್ತಿರವಾಗಿದೆ.
ಪ್ರತಿದಿನ 16 ಲಕ್ಷ ಘನ ಅಡಿ ನೈಸರ್ಗಿಕ ಅನಿಲ ಹರಿಸುವ ಸಾಮರ್ಥ್ಯ ಹೊಂದಿರುವ ಸುಮಾರು 4,500 ಕೋಟಿ ರೂ. ಮೊತ್ತದ ದಾಬೋಲ್-ಬೆಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ ಯೋಜನೆಯನ್ನು 'ಭಾರತೀಯ ಅನಿಲ ಪ್ರಾಧಿಕಾರ' (ಜಿಎಐಎಲ್) 19 ತಿಂಗಳ ಹಿಂದೆ ಆರಂಭಿಸಿತ್ತು.

3 ಸಾವಿರ ಮೆಗಾ ವ್ಯಾಟ್ ಪ್ರಮಾಣದ ಪರಿಸರ ಸ್ನೇಹಿ ಇಂಧನ ಉತ್ಪಾದಿಸಿ ಕರ್ನಾಟಕದ 10 ಜಿಲ್ಲೆಗಳ ಮನೆಗಳಿಗೆ ಅಡುಗೆ ಅನಿಲ ಮತ್ತು ಕೈಗಾರಿಕೆಗಳಿಗೆ ಇಂಧನ ಪೂರೈಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಯೋಜನೆಯಿಂದ ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಗೃಹ ಮತ್ತು ಕೈಗಾರಿಕೆಗಳಿಗೆ ನಿರಂತರ ಇಂಧನ ಪೂರೈಕೆಯಾಗಲಿದೆ. (ಕೊಳವೆ ಮೂಲಕ ಬರಲಿದೆ ಅಡುಗೆ ಅನಿಲ)
ಮಹಾರಾಷ್ಟ್ರದ ದಾಭೋಲ್ನಿಂದ ಆರಂಭವಾಗುವ ಅನಿಲ ಕೊಳವೆ ಮಾರ್ಗ ಕರ್ನಾಟಕದ ಹತ್ತು ಜಿಲ್ಲೆಗಳು, 18 ರಾಷ್ಟ್ರೀಯ ಹೆದ್ದಾರಿ, 382 ಇತರ ರಸ್ತೆಗಳು, 20 ರೈಲ್ವೆ ಕ್ರಾಸಿಂಗ್ಗಳು, 11 ಕಡೆ ನದಿಗಳು ಮತ್ತು 276 ಕೆರೆಗಳ ಮೂಲಕ ರಾಮನಗರದ ಬಿಡದಿಗೆ ತಲುಪಲಿದೆ. ಎಲ್ ಪಿಜಿಗೆ ಹೋಲಿಸಿದರೆ ಅಗ್ಗದ ಬೆಲೆಯಲ್ಲಿ ನೈಸರ್ಗಿಕ ಅನಿಲ ಲಭ್ಯವಾಗುವುದರಿಂದ ಈ ಕೊಳವೆ ಮಾರ್ಗದಿಂದ ಕರ್ನಾಟಕಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ.












Click it and Unblock the Notifications