ವಲಯ ಘೋಷಣೆಯಲ್ಲಿ ಕೇಂದ್ರ ಗೊಂದಲ, ಸಂಕಷ್ಟಕ್ಕೆ ನೆರವಿಲ್ಲ; ಕಾಂಗ್ರೆಸ್ ಸಿಎಂಗಳ ಕಳವಳ
ದೆಹಲಿ, ಮೇ 6: ಕೊರೊನಾ ವೈರಸ್ ಸಂಬಂಧ ಕಾಂಗ್ರೆಸ್ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಸರ್ಕಾರದ ವಿಫಲತೆಯನ್ನು ಕಾಂಗ್ರೆಸ್ ರಾಜ್ಯಗಳು ಸೋನಿಯಾ ಮುಂದಿಟ್ಟಿವೆ.
ರಾಜ್ಯಗಳ ಕಷ್ಟಕ್ಕೆ ಕೇಂದ್ರ ಸರಿಯಾಗಿ ಸ್ಪಂದಿಸಿಲ್ಲ, ವಲಯಗಳ ವಿಂಗಡಣೆಯಲ್ಲೂ ಗೊಂದಲ ಸೃಷ್ಟಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಹುಲ್ ಗಾಂಧಿ ಭಾಗಿಯಾಗಿದ್ದ ಈ ಸಭೆಯಲ್ಲಿ 'ಮೇ 17ರ ನಂತರ ಏನು?' ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮತ್ತೆ ಮೂರು ವಾರ್ಡ್ ಕಂಟೈನ್ಮೆಂಟ್ ಜೋನ್
ಲಾಕ್ಡೌನ್ ಮುಂದುವರಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಾನದಂಡವೇನು? ಲಾಕ್ಡೌನ್ನಿಂದ ದೇಶವನ್ನು ಹೊರತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳೇನು ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಬೇಕಿದೆ ಎಂದು ಈ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದೆ ಓದಿ....
ವಲಯ ವಿಂಗಡಣೆ ವೇಳೆ ರಾಜ್ಯದ ಜೊತೆ ಚರ್ಚಿಸಿಲ್ಲ
ಮೂರನೇ ಹಂತದ ಲಾಕ್ಡೌನ್ ಘೋಷಣೆ ಮಾಡುವುದಕ್ಕೂ ಮುಂಚೆ ಕೇಂದ್ರ ಸರ್ಕಾರ, ಜಿಲ್ಲಾವಾರು ಲೆಕ್ಕದಲ್ಲಿ ರೆಡ್ ಜೋನ್, ಗ್ರೀನ್ ಜೋನ್, ಆರೆಂಜ್ ಜೋನ್ ಎಂದು ದೇಶವನ್ನು ವಿಂಗಡಣೆ ಮಾಡಿತ್ತು. ಆದರೆ, ಕೇಂದ್ರ ಬಿಡುಗಡೆ ಮಾಡಿದ ಪಟ್ಟಿ ಹಲವು ರಾಜ್ಯಗಳಿಗೆ ತೃಪ್ತಿ ತಂದಿರಲಿಲ್ಲ. ಇದೇ ವಿಚಾರವನ್ನು ಪಂಜಾಬ್ ಮುಖ್ಯಮಂತ್ರಿ ಹಾಗೂ ಪುದುಚೇರಿ ಮುಖ್ಯಮಂತ್ರಿ ಎಐಸಿಸಿ ಅಧ್ಯಕ್ಷರ ಮುಂದೆ ಹೇಳಿಕೊಂಡಿದ್ದಾರೆ. ''ವಲಯಗಳ ವಿಂಗಡಣೆ ಸಂದರ್ಭದಲ್ಲಿ ಕೇಂದ್ರ ನಮ್ಮ ಸರ್ಕಾರಗಳ ಜೊತೆ ಚರ್ಚಿಸಿಲ್ಲ. ಅವರಷ್ಟಿದಂತೆ ವಲಯ ವಿಭಜಿಸಿದ್ದಾರೆ' ಎಂದು ದೂರಿದ್ದಾರೆ.
ದೆಹಲಿಯಲ್ಲಿ ಕೂತು ವಲಯ ನಿರ್ಧರಿಸುತ್ತಿದ್ದಾರೆ
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ''ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬ ವಾಸ್ತವ ತಿಳಿಯದೆ ದೆಹಲಿಯಲ್ಲಿ ಕುಳಿತುಕೊಂಡು ವಲಯ ವಿಂಗಡಣೆ ಮಾಡುತ್ತಿದ್ದಾರೆ ಎಂಬುದು ಬಹಳ ಕಳವಳಕಾರಿ ಸಂಗತಿ'' ಎಂದು ಹೇಳಿದ್ದಾರೆ.
ಹೊಸದಾಗಿ 85 ಬಿಎಸ್ಎಫ್ ಯೋಧರಿಗೆ ವಕ್ಕರಿಸಿದ ಕೊರೊನಾ
ರಾಜ್ಯಗಳಿಂದ ವರದಿ ಕೇಳಿಲ್ಲ ಏಕೆ?
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪುಚುದೇರಿ ಸಿಎಂ ನಾರಾಯಣ ಸ್ವಾಮಿ ಮಾತನಾಡಿ ''ರಾಜ್ಯಗಳನ್ನು ಸಂಪರ್ಕಿಸದೆ ಕೇಂದ್ರ ಸರ್ಕಾರ ವಲಯಗಳನ್ನು ಗುರುತಿಸುತ್ತಿದೆ. ಇದೊಂದು ರೀತಿ ಗೊಂದಲದ ಪರಿಸ್ಥಿತಿ. ದೆಹಲಿ ಕುಳಿತುಕೊಂಡು ಅಧಿಕಾರ ಮಾಡುವವರು ರಾಜ್ಯಗಳ ಬಗ್ಗೆ ಹೇಳಲು ಸಾಧ್ಯವಿಲ್ಲ. ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನು ಸಂಪರ್ಕಿಸುತ್ತಿಲ್ಲ ಏಕೆ'' ಎಂದು ಪ್ರಶ್ನಿಸಿದ್ದಾರೆ.
ರಾಜ್ಯವನ್ನು ನಿರ್ಲಕ್ಷಿಸಲಾಗುತ್ತಿದೆ
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮಾತನಾಡಿ ''ಅಗತ್ಯ ಸಂದರ್ಭದಲ್ಲಿ ಆರ್ಥಿಕ ನೆರವು ನೀಡದೆ ಹೋದರೆ ಕೊರೊನಾ ವೈರಸ್ ಸಮಸ್ಯೆಯಿಂದ ರಾಜ್ಯಗಳು ಹೇಗೆ ಹೊರಗೆ ಬರಲು ಸಾಧ್ಯ? ನಾವು 10 ಸಾವಿರ ಕೋಟಿ ಪ್ಯಾಕೇಜ್ಗಾಗಿ ಪಿಎಂ ಬಳಿ ಮನವಿ ಮಾಡಿದ್ದೇವೆ. ಆದರೆ, ಈವರೆಗೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ'' ಎಂದು ಸೋನಿಯಾ ಮುಂದೆ ಹೇಳಿಕೊಂಡಿದ್ದಾರೆ.
ಕರ್ನಾಟಕ ವಿಚಾರದಲ್ಲೂ ಆಗಿದ್ದು ಇದೇ
ಕಾಂಗ್ರೆಸ್ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳ ಆರೋಪ ಪಟ್ಟಿ ನೋಡುತ್ತಿದ್ದರೆ, ವಲಯ ವಿಂಗಡಣೆ ವೇಳೆ ಕೇಂದ್ರ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸದೆ ಪಟ್ಟಿ ಬಿಡುಗಡೆ ಮಾಡಿದೆ ಎನ್ನುವುದು ಕರ್ನಾಟಕ ವಿಚಾರದಲ್ಲೂ ಸಾಬೀತಾಗಿದೆ. ಕೇಂದ್ರ ಪಟ್ಟಿ ಬಿಡುಗಡೆ ಮಾಡುವ ಮುನ್ನ ರಾಜ್ಯ ವಲಯ ವಿಂಗಡಣೆ ಮಾಡಿತ್ತು. ರೆಡ್ಜೋನ್ನಲ್ಲಿ ಆರು ಜಿಲ್ಲೆಗಳನ್ನು ಸೇರಿಸಿತ್ತು. ಆಮೇಲೆ ಕೇಂದ್ರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೇವಲ ಮೂರು ಜಿಲ್ಲೆಗಳು ಮಾತ್ರ ಇತ್ತು. ರಾಜ್ಯ ಮತ್ತು ಕೇಂದ್ರದ ಪಟ್ಟಿಗೆ ಒಮ್ಮತ ಇರಲಿಲ್ಲ.