ಮೋದಿ ಸರ್ಕಾರದ ಪತನಕ್ಕೆ ದಿನಗಣನೆ ಆರಂಭ : ಕೇಜ್ರಿವಾಲ್
ನವದೆಹಲಿ, ಡಿಸೆಂಬರ್ 11: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಪತನಕ್ಕೆ ದಿನಗಣನೆ ಆರಂಭಗೊಂಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ಐದು ರಾಜ್ಯಗಳ ಚುನಾವಣೆ ಫಲಿತಾಂಶವನ್ನು ವೀಕ್ಷಿಸಿದ ಬಳಿಕ ಕೇಜ್ರಿವಾಲ್ ಅವರು ಮಂಗಳವಾರ(ಡಿಸೆಂಬರ್ 11) ಸಂಜೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ
ಟ್ರೆಂಡ್ ಪ್ರಕಾರ, ಬಿಜೆಪಿ ಎರಡು ರಾಜ್ಯಗಳಲ್ಲಿ ಸೋಲಿನ ಭೀತಿಯಲ್ಲಿದೆ. ಎರಡು ರಾಜ್ಯಗಳಲ್ಲಿ ಗೆದ್ದಿಲ್ಲ. ಮತ್ತೊಂದು ರಾಜ್ಯವನ್ನು ಕಳೆದುಕೊಂಡಿದೆ ಎಂದು ಕೇಜ್ರಿವಾಲ್ ಹೇಳಿದರು.
ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸಮಗ್ರ ಫಲಿತಾಂಶ
ಕಾಂಗ್ರೆಸ್ ವಿರುದ್ಧ ನೇರ ಸ್ಪರ್ಧೆಯಲ್ಲಿದ್ದ ಬಿಜೆಪಿ ತನ್ನ ಆಡಳಿತರೂಢ ರಾಜಸ್ಥಾನವನ್ನು ಕಳೆದುಕೊಂಡಿದೆ. ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದೆ. ಮಧ್ಯಪ್ರದೇಶದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷಕ್ಕೆ ಸರಳ ಬಹುಮತ ಗಳಿಸುವುದು ಕಷ್ಟವಾಗಿದೆ. ಕಾಂಗ್ರೆಸ್ ಇಲ್ಲೂ ಕೂಡಾ ಅಧಿಕಾರಕ್ಕೆ ಬರಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.
ಬಿಜೆಪಿ ಜನಪ್ರಿಯತೆ ಕಳೆದುಕೊಂಡಿದೆ ಎಂದ ಮೋದಿ ಫ್ರೆಂಡ್ ರಜನಿ
ಡಿಸೆಂಬರ್ 10ರಂದು ಸಂಸತ್ತಿನ ಕಚೇರಿಯೊಂದರಲ್ಲಿ ನಡೆದ ಮೋದಿ ವಿರೋಧಿ ಬಣಗಳ ಸಭೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡಾ ಪಾಲ್ಗೊಂಡಿದ್ದರು. ಈ ಮೂಲಕ ಮಹಾಘಟಬಂಧನ್ ಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)