ಕೊರೊನಾ ಸೋಂಕಿತ ದೇಶಗಳಿಂದ ಭಾರತೀಯರ ರಕ್ಷಣೆಯೇ ಕೇಂದ್ರದ ಲಕ್ಷ್ಯ
ನವದೆಹಲಿ, ಮಾರ್ಚ್ 11: ಇಟಲಿ, ಇರಾನ್ ಸೇರಿದಂತೆ ಕೊರೊನಾ ಪೀಡಿತ ದೇಶಗಳಲ್ಲಿ ಸಿಲುಕಿದ್ದ ಒಟ್ಟು 948 ಜನರನ್ನು ಭಾರತಕ್ಕೆ ಕರೆತಂದಿರುವ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್.ಜಯ್ ಶಂಕರ್ ಮಾಹಿತಿ ನೀಡಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ''ಕೊರೊನಾ ಪೀಡಿತ ದೇಶಗಳಿಂದ ಇಲ್ಲಿಯವರೆಗೂ 948 ಮಂದಿಯನ್ನ ಭಾರತಕ್ಕೆ ಕರೆತರಲಾಗಿದೆ. ಅದರಲ್ಲಿ 900 ಮಂದಿ ಭಾರತೀಯರು. ಉಳಿದ 48 ಮಂದಿ ಮಾಲ್ದೀವ್ಸ್, ಮಯನ್ಮಾರ್, ಬಾಂಗ್ಲಾದೇಶ, ಚೀನಾ, ಯುಎಸ್ಎ, ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ ಮತ್ತು ಪೆರು ಮುಂತಾದ ದೇಶದ ಪ್ರಜೆಗಳು'' ಎಂದು ವಿದೇಶಾಂಗ ಸಚಿವ ಎಸ್.ಜಯ್ ಶಂಕರ್ ಹೇಳಿದ್ದಾರೆ.
ಕೊರೊನಾ + ಹೈ ಬಿಪಿ = ಸಾವು : ಇದು ಚೀನಿ ವೈದ್ಯರೇ ಹೇಳಿದ ಮಾತು!
''ಇಟಲಿ ಮತ್ತು ಇರಾನ್ ನಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ನಾವು ಕಾಳಜಿ ವಹಿಸಲೇಬೇಕಿದೆ. ಇದೇ ಗುರುವಾರ ನಮ್ಮ ವೈದ್ಯಕೀಯ ತಂಡ ಇಟಲಿಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿನ ಭಾರತೀಯರ ತಪಾಸಣೆ ಮಾಡಲಿದೆ. ಅವಶ್ಯಕ ವೈದ್ಯಕೀಯ ತಪಾಸಣೆ ಬಳಿಕ ಅಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲಿದೆ'' ಎಂದು ಎಸ್.ಜಯ್ ಶಂಕರ್ ತಿಳಿಸಿದ್ದಾರೆ.
ಅಷ್ಟಕ್ಕೂ, ಇರಾನ್ ನ ವಿವಿಧ ಪ್ರದೇಶಗಳಲ್ಲಿ 1100 ಮಂದಿ ಯಾತ್ರಿಕರೂ ಸೇರಿದಂತೆ 6000 ಭಾರತೀಯರಿದ್ದಾರೆ. ಸುಮಾರು 300 ವಿದ್ಯಾರ್ಥಿಗಳು ಮತ್ತು 1000 ಮೀನುಗಾರರು ಇಟಲಿಯಲ್ಲಿ ಬಹುಕಾಲದಿಂದ ನೆಲೆಸಿದ್ದಾರೆ. ಆದ್ರೆ, ಸದ್ಯಕ್ಕೆ ಪ್ರವಾಸಕ್ಕೆ ಅಂತ ತೆರಳಿದ್ದ ಯಾತ್ರಿಕರನ್ನು ಮತ್ತು ವಿದ್ಯಾರ್ಥಿಗಳನ್ನು ಮಾತ್ರ ಭಾರತಕ್ಕೆ ವಾಪಸ್ ಕರೆತರಲು ಸರ್ಕಾರ ಚಿಂತಿಸಿದೆ.
ಈಗಾಗಲೇ ಇರಾನ್ ನಿಂದ ವಾಪಸ್ ಬಂದಿರುವ 58 ಯಾತ್ರಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಿಗೂ ಕೊರೊನಾ ಸೋಂಕು ತಗುಲಿಲ್ಲ ಎಂದು ಎಸ್.ಜಯ್ ಶಂಕರ್ ಸ್ಪಷ್ಟ ಪಡಿಸಿದ್ದಾರೆ.
ಬೆಂಗಳೂರಿನ ಟೆಕ್ಕಿ ಮಗಳಿಗೆ ಕೊರೊನಾ: ಶಾಲೆಯ 1700 ಸಹಪಾಠಿಗಳಿಗೆ ತಪಾಸಣೆ!
ಅಂದ್ಹಾಗೆ, ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60ಕ್ಕೆ ಏರಿದೆ. ಕರ್ನಾಟಕದಲ್ಲಿ ಈವರೆಗೆ ನಾಲ್ಕು ಮಂದಿಗೆ ಮಾತ್ರ ಕೊರೊನಾ ಸೋಂಕು ತಗುಲಿದೆ.