ವಕೀಲರಿಂದ ಪೊಲೀಸ್ ಪೇದೆ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ನವದೆಹಲಿ, ನವೆಂಬರ್ 5: ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ವಕೀಲರು ನಡೆಸಿದ ಹಲ್ಲೆ ಖಂಡಿಸಿ ದೆಹಲಿ ಪೊಲೀಸರು ಪ್ರತಿಭಟನೆ ಆರಂಭಿಸಿದ್ದಾರೆ.
ಎಲ್ಲರಿಗೂ ರಕ್ಷಣೆ ಒದಗಿಸುವ ಪೊಲೀಸರಿಗೇ ಈಗ ಭದ್ರತೆ ಇಲ್ಲದಂತಾಗಿದೆ. ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ವಕೀಲರು ಸಾರ್ವಜನಿಕವಾಗಿ ಥಳಿಸಿದ್ದಾರೆ. ನಮಗೆ ಭದ್ರತೆ ನೀಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಆರೋಪ, ಮುಷ್ಕರ: ಕರವೇ, ವೈದ್ಯರ ನಡುವೆ ಏನಿದು ಕಿತ್ತಾಟ?
ಶನಿವಾರ ಮಧ್ಯಾಹ್ನ ನ್ಯಾಯಲಯದ ಆವರಣದಲ್ಲಿ ಪಾರ್ಕಿಂಗ್ ವಿಚಾರವಾಗಿ ಪೊಲೀಸ್ ಮತ್ತು ವಕೀಲರ ನಡುವೆ ಉಂಟಾಗಿದ್ದ ಘರ್ಷಣೆಯಲ್ಲಿ ಪೊಲೀಸರ ಗುಂಡೇಟಿಗೆ ಓರ್ವ ವಕೀಲ ತೀವ್ರ ಗಾಯಕ್ಕೆ ತುತ್ತಾಗಿದ್ದರು.
ಹೀಗಾಗಿ ಸೋಮವಾರ ಪೊಲೀಸರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ವಕೀಲರು ಈ ವೇಳೆ ರಕ್ಷಣಾ ಕೆಲಸದಲ್ಲಿ ನಿರತನಾಗಿದ್ದ ಓರ್ವ ಪೊಲೀಸ್ ಪೇದೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.
ಪೊಲೀಸ್ ಸಮವಸ್ತ್ರ ಧರಿಸದೆ ಸಾಮಾನ್ಯ ಉಡುಪು ಧರಿಸಿ ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪ್ರತಿ ಭಟನೆ ನಡೆಸುತ್ತಿದ್ದಾರೆ. ಮೊದಲ ಬಾರಿ ಪೊಲೀಸರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲರನ್ನೂ ಅಪಾಯದಿಂದ ದೂರವಿರಿಸಿ ನಾವು ಎಷ್ಟು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ ಎನ್ನುವ ಯಾವ ಅರಿವು ಸಾರ್ವಜನಿಕರಿಗಿಲ್ಲ ಎಂದು ಪೊಲೀಸರು ತಮ್ಮ ನೋವನ್ನು ಹೊರಹಾಕಿದ್ದಾರೆ.
ಸಂರಕ್ಷಕರನ್ನು ರಕ್ಷಿಸಿ, ನಾವು ಪಂಚಿಂಗ್ ಬ್ಯಾಗ್ಗಳಲ್ಲ, ಭದ್ರತೆ ನೀಡುವವರಿಗೆ ಭದ್ರತೆ ನೀಡಿ, ಪೊಲೀಸ್ ಆಯುಕ್ತರೇ ನಮ್ಮೆದುರು ಬನ್ನಿ ನಮ್ಮ ಕಷ್ಟ ಆಲಿಸಿ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು ಒತ್ತಾಯಿಸುತ್ತಿದ್ದಾರೆ.
ದೆಹಲಿಯಲ್ಲಿ ನಿತ್ಯ ಗಿಜಿಗುಡುತ್ತಿರುವ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಣ್ಣು ಹಾಯಿಸಿದಷ್ಟು ದೂರದಲ್ಲಿ ಪೊಲೀಸರು ಕಾಣಿಸುತ್ತಿದ್ದಾರೆ. ನಗರದ ಟಿಸ್ ಹಜಾರಿ ಕೋರ್ಟ್ ಕಾಂಪ್ಲೆಸ್ ಮುಂಭಾಗ ಪೊಲೀಸ್ ಪೇದೆಗೆ ವಕೀಲರು ಥಳಿಸಿದ್ದರು.
ಶನಿವಾರ ನಡೆದ ಘರ್ಷಣೆಯಲ್ಲಿ 20 ಪೊಲೀಸರಿಗೆ ಗಾಯಗಳಾಗಿತ್ತು. ಎಂಟು ಮಂದಿ ವಕೀಲರಿಗೂ ಗಾಯಗಳಾಗಿತ್ತು. 20ಕ್ಕೂ ಹೆಚ್ಚು ವಾಹನಗಳು ಜಖಂ ಆಗಿದ್ದವು.