ಅಯ್ಯರ್ಗೆ ಕಾಂಗ್ರೆಸ್ ನಾಯಕರಿಂದಲೇ ಚಾಟಿ ಏಟು
ನವದೆಹಲಿ, ಜ. 18 : ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು 'ಚಹಾ ಮಾರುವವ' ಎಂದು ಜರಿದಿದ್ದ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಅವರ ವಿರುದ್ಧ ಕಾಂಗ್ರೆಸ್ ನಾಯಕರೇ ಹರಿಹಾಯ್ದಿದ್ದಾರೆ. ವೈಯಕ್ತಿಕ ದಾಳಿಯನ್ನು, ಕೀಳುಮಟ್ಟದ ಟೀಕೆಯನ್ನು ಕಾಂಗ್ರೆಸ್ ಎಂದೂ ಅನುಮೋದಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಅಜಯ್ ಮೇಕನ್ ಅವರು ಅಯ್ಯರ್ ಅವರನ್ನು ಶನಿವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬುಧವಾರ ನಡೆದ ಎಐಸಿಸಿ ಸಭೆಯಲ್ಲಿ ಮಣಿ ಶಂಕರ್ ಅಯ್ಯರ್ ಅವರು, "21ನೇ ಶತಮಾನದಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿ ಎಂದೂ ಆಗುವುದಿಲ್ಲ. ಆದರೆ ಅವರು ಚಹಾ ಮಾರುವವರಿದ್ದರೆ ಅವರಿಗೆ ನಾವು ಸ್ಥಳ ಕಲ್ಪಿಸಿಕೊಡುತ್ತೇವೆ" ಎಂದು ವ್ಯಂಗ್ಯವಾಗಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲ ಕೂಡ ಕಟುವಾಗಿ ಟೀಕಿಸಿದ್ದರು.
ನರೇಂದ್ರ ಮೋದಿ ಅವರು ತಾವು ಬಾಲ್ಯದಿಂದ ಸಂಘರ್ಷಕರ ಹಾದಿಯಲ್ಲಿ ಸಾಗಿಬಂದ ಹಿನ್ನೆಲೆಯನ್ನು ಪ್ರಸ್ತಾಪಿಸುತ್ತ, ನೆಹರೂ-ಗಾಂಧಿ ಮನೆತನವನ್ನು ತಮ್ಮ ಭಾಷಣದಲ್ಲಿ ಜರಿದಿದ್ದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಅವರು ನಿಂದನಾತ್ಮಕ ಮತ್ತು ಹಾಸ್ಯಾಸ್ಪದ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. [ಚಹಾ ಮಾರೋಕೆ ಲಾಯಕ್ಕು]

ನರೇಂದ್ರ ಮೋದಿ ಅವರು, "ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರಿಗೆ ಬಡತನವೇನು ಎಂಬುದೇ ಗೊತ್ತಿಲ್ಲ, ಆದರೆ ನನಗೆ ಗೊತ್ತು. ನಾನು ಬಡತನದಲ್ಲಿ ಬಾಲ್ಯ ಕಳೆದಿದ್ದೇನೆ. ರೈಲು ನಿಲ್ದಾಣದಲ್ಲಿ, ಓಡುತ್ತಿರುವ ರೈಲುಗಳಲ್ಲಿ ಚಹಾ ಮಾರಿದ್ದೇನೆ. ರೈಲಿನಲ್ಲಿ ಚಹಾ ಮಾರುವವನಿಗೆ ರೈಲುಗಳ ಬಗ್ಗೆ ಮಂತ್ರಿಗಿಂತ ಚೆನ್ನಾಗಿ ಗೊತ್ತು" ಎಂದು ಮಾರ್ಮಿಕವಾಗಿ ನುಡಿದಿದ್ದರು.
ಆರು ವರ್ಷದವರಿದ್ದಾಗ ನರೇಂದ್ರ ಮೋದಿಯವರು ಗುಜರಾತ್ನ ವಾಡನಗರದಲ್ಲಿ ರೈಲುಗಳಲ್ಲಿ ಚಹಾ ಮಾರುತ್ತ ತಮ್ಮ ತಂದೆಗೆ ಬೆಂಬಲವಾಗಿ ನಿಲುತ್ತಿದ್ದರು ಎಂದು ನೀಲಂಜನ್ ಮುಖ್ಯೋಪಾಧ್ಯಾಯ್ ಎಂಬುವವರು ಬರೆದಿರುವ 'ದಿ ಅನಾಟಮಿ ಆಫ್ ನರೇಂದ್ರ ಮೋದಿ - ದಿ ಮ್ಯಾನ್ ಅಂಡ್ ಹೀಸ್ ಪಾಲಿಟಿಕ್ಸ್' ಪುಸ್ತಕದಲ್ಲಿ ಮೋದಿ ಅವರ ಬಾಲ್ಯ ಜೀವನದ ಬಗ್ಗೆ, ಅವರು ಎದುರಿಸಿದ ಕಷ್ಟಗಳ ಬಗ್ಗೆ ವಿಸ್ತೃತವಾಗಿ ವರ್ಣಿಸಲಾಗಿದೆ.
ಕೆಲ ದಿನಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರವಾಲ್ ಕೂಡ ಮೋದಿ ವಿರುದ್ಧ ಇದೇ ರೀತಿಯ ವಾಗ್ದಾಳಿ ನಡೆಸಿದ್ದರು. ಚಹಾ ಮಾರುತ್ತಿದ್ದ ವ್ಯಕ್ತಿಗೆ ರಾಷ್ಟ್ರೀಯ ಪರಿಕಲ್ಪನೆ ಇರಲು ಸಾಧ್ಯವಿಲ್ಲ. ಒಬ್ಬ ಪೇದೆಯನ್ನು ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಮಾಡಿದರೆ ಆತ ಕಾನ್ಸ್ಟೇಬಲ್ ರೀತಿಯೇ ಚಿಂತಿಸುತ್ತಾನೆ ಹೊರತು ಪೊಲೀಸ್ ಅಧಿಕಾರಿಯಂತೆ ಅಲ್ಲ ಎಂದು ಹೇಳಿಕೆ ನೀಡಿದ್ದರು.












Click it and Unblock the Notifications