ಗಾಂಧಿ ಕುಟುಂಬ, ಪ್ರಶಾಂತ್ ಭೇಟಿಯ ಹಿಂದಿನ ನೈಜ ಕಾರಣವೇನು?
ನವದೆಹಲಿ, ಜು.15: ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಮಂಗಳವಾರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮಾಡಿದರ ಹಿಂದಿನ ಕಾರಣ ಕಾಂಗ್ರೆಸ್ ಪಕ್ಷದ ಪುನರುಜ್ಜೀವನದ ಬಗೆಗಿನ ಚರ್ಚೆಯೇ ನೈಜ ಕಾರಣವೆಂದು ತಿಳಿದು ಬಂದಿದೆ.
ಈ ಸಭೆಯು ಕಳೆದ ಮೇ ತಿಂಗಳಿನಲ್ಲಿ ಪ್ರಶಾಂತ್ ಕಿಶೋರ್, ಗಾಂಧಿ ಕುಟುಂಬದೊಂದಿಗೆ ನಡೆಸಿದ ಸಭೆಗಳ ಮುಂದುವರಿಕೆಯಾಗಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮೂಲಗಳು ತಿಳಿಸಿದೆ. ಕಳೆದ ಮೇನಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗೆ ಪಕ್ಷದ ಪುನರುಜ್ಜೀವನದ ಬಗ್ಗೆ ಕಿಶೋರ್ ಮಾತುಕತೆ ನಡೆಸಿದ್ದಾರೆ. ಬಳಿಕ ಕಾಂಗ್ರೆಸ್ಸಿನ ಇತರ ಕೆಲವು ಉನ್ನತ ನಾಯಕರೊಂದಿಗೆ ಇದೇ ವಿಷಯದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ನಿರಾಕರಿಸಿದೆ. ಆದರೆ ಚರ್ಚೆಯ ಭಾಗವಾಗಿದ್ದ ಕನಿಷ್ಠ ಇಬ್ಬರು ಹಿರಿಯ ನಾಯಕರು ಇದು ಪಕ್ಷವನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ನಡೆದಿದೆ ಎಂದು ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿರುವುದಾಗಿ ವರದಿಯಾಗಿದೆ. ಈ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸುದ್ದಿಗಳು ಎಲ್ಲಾವೂ ಊಹಾಪೋಹಗಳು ಎಂದು ಕಿಶೋರ್ ಸ್ಪಷ್ಟಪಡಿಸಿದ್ದಾರೆ.

ಪಕ್ಷಕ್ಕೆ ಸೇರಿ ಎಂದು ಚಾಣಕ್ಯನಿಗೆ ಹೇಳಿದ ರಾಹುಲ್
ಇನ್ನು ಈ ನಾಯಕರ ಪ್ರಕಾರ, ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಲು ಕಿಶೋರ್ ಆಸಕ್ತಿ ಹೊಂದಿದ್ದರೆ, ಪಕ್ಷಕ್ಕೆ ಸೇರಬೇಕು ಮತ್ತು ಸಂಘಟನೆಯಲ್ಲಿ ಸಕ್ರಿಯರಾಗಬೇಕು ಎಂದು ರಾಹುಲ್ ಗಾಂಧಿ ಕಿಶೋರ್ಗೆ ಹೇಳಿದ್ದಾರೆ. 135 ವರ್ಷಗಳ ಹಳೆಯ ಪಕ್ಷದ ಸಂಘಟನೆಯ ಸಂಪೂರ್ಣ ಪುನರುಜ್ಜೀವನವು ಪ್ರಶಾಂತ್ ಕಿಶೋರ್ನ ಗುರಿಯಾಗಿದೆ. "ಕಿಶೋರ್ ಅನೇಕ ಸನ್ನಿವೇಶಗಳನ್ನು ಚರ್ಚಿಸಿದ್ದಾರೆ. ಪ್ರಶಾಂತ್ ರಾಜಕೀಯ ಸಲಹೆಯ ನಿವೃತ್ತಿ ಘೋಷಿಸಿರುವ ಹಿನ್ನೆಲೆ ಈಗ ರಾಜಕೀಯದಲ್ಲಿ ಹೆಚ್ಚು ಪೂರ್ವಭಾವಿ ಪಾತ್ರವನ್ನು ವಹಿಸಿಕೊಳ್ಳಲು ಬಯಸಬಹುದು," ಎಂದು ಈ ವಿಷಯದ ಬಗ್ಗೆ ತಿಳಿದಿರುವ ಕಾಂಗ್ರೆಸ್ನ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ವದಂತಿಗಳನ್ನು ಸೃಷ್ಟಿಸಿದ್ದ ರಾಹುಲ್, ಪ್ರಶಾಂತ್ ಭೇಟಿ
ಮಂಗಳವಾರ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗೆ ಕಿಶೋರ್ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದಾರೆ. ಈ ಭೇಟಿಯು ಪಂಜಾಬ್ನಲ್ಲಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆಗಿನ ಚರ್ಚೆಗೆ ಸಂಬಂಧಿಸಿದ್ದು, 2022 ರ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚೆ, ಕಾಂಗ್ರೆಸ್ ಸೇರ್ಪಡೆ ಎಂಬ ಹಲವಾರು ವದಂತಿಗಳನ್ನು ಸೃಷ್ಟಿ ಮಾಡಿತ್ತು. ಆದರೆ ನಿಜವಾಗಿ 2024 ರ ಲೋಕಸಭಾ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ನ ಪುನರುಜ್ಜೀವನದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಕಿಶೋರ್ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ. ಇನ್ನು ಮತ್ತೋರ್ವ ವ್ಯಕ್ತಿಯ ಪ್ರಕಾರ ಈ ಭೇಟಿಯ ವೇಳೆ ಪಕ್ಷದಲ್ಲಿನ ಗುಂಪುಗಾರಿಕೆಯನ್ನು ತಡೆಯುವ ವಿಚಾರವನ್ನು ಚರ್ಚಿಸಲಾಗಿದೆ ಎನ್ನಲಾಗಿದೆ.

ಹೊಸ ನಾಯಕತ್ವ ಉತ್ತಮ
"ಕಾಂಗ್ರೆಸ್ನವರು ಹೊರಗಿನಿಂದ ಯಾರನ್ನಾದರೂ ಕರೆತರುವುದು ಒಳ್ಳೆಯದು ಏಕೆಂದರೆ ಕಾಂಗ್ರೆಸ್ ಪಕ್ಷದೊಳಗೆ ರಾಜಕೀಯವು ತುಂಬಾ ವೈಯಕ್ತೀಕರಿಸಲ್ಪಟ್ಟಿದೆ. ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ಪ್ರಾರಂಭವಾದ ಪ್ರವೃತ್ತಿ ಈಗಲೂ ಇದೆ. ಪ್ರಶಾಂತ್ಗೆ ಗಾಂಧಿ ಕುಟುಂಬ ಬೆಂಬಲಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಪಕ್ಷದ ಪ್ರಮುಖ ಸ್ಥಾನಕ್ಕೆ ಹೊರಗಿನ ವ್ಯಕ್ತಿ ಬರುವುದು ಒಂದು ರೀತಿಯಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೆ ಅದೇ ಸಮಯದಲ್ಲಿ, ಪಕ್ಷದೊಳಗೆ ಕಾರ್ಪೊರೇಟ್ ತರಹದ ವ್ಯವಸ್ಥಾಪಕ ಶೈಲಿತರುವುದು ಸರಿಯಲ್ಲ ಎಂಬುದು ನನ್ನ ಭಾವನೆ," ಎಂದು ರಾಜಕೀಯ ವಿಜ್ಞಾನಿ ನೀರಾ ಚಾಂದೋಕ್ ಹೇಳಿದರು.

ಕಾಂಗ್ರೆಸ್ನ ಕಾರ್ಯವೈಖರಿ ಬದಲಾವಣೆ ಮುಖ್ಯ ಎಂದಿದ್ದ ಪ್ರಶಾಂತ್
2017 ರಲ್ಲಿ ಕಾಂಗ್ರೆಸ್ ಉತ್ತರ ಪ್ರದೇಶ ಚುನಾವಣೆಗೆ ಸಮಾಜವಾದಿ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡರೂ ಮೈತ್ರಿ ವಿಫಲವಾಯಿತು, ಬಿಜೆಪಿ ಜಯಗಳಿಸಿತು. ಕಾಂಗ್ರೆಸ್ ಕಾರ್ಯತಂತ್ರವನ್ನು ರೂಪಿಸಿದ ಕಿಶೋರ್ ಪಂಜಾಬ್ನಲ್ಲಿ ಪಕ್ಷದ ಗೆಲುವಿನಿಂದ ಮಾತ್ರ ಸಮಾಧಾನವನ್ನು ಪಡೆದುಕೊಳ್ಳಬೇಕಾಯಿತು. ಅಂದಿನಿಂದ ಭಾರತದ ಹಳೆಯ ಪಕ್ಷ ಮತ್ತು ಅದರ ಕಾರ್ಯವೈಖರಿಯನ್ನು ಹೆಚ್ಚಾಗಿ ಟೀಕಿಸಿದ್ದಾರೆ. ಮೇ ತಿಂಗಳಲ್ಲಿ, "ಕಾಂಗ್ರೆಸ್100 ವರ್ಷಗಳ ಹಳೆಯ ರಾಜಕೀಯ ಪಕ್ಷವಾಗಿದೆ ಮತ್ತು ಅದು ತನ್ನದೇ ಆದ ಕಾರ್ಯನಿರ್ವಹಿಸುವ ವಿಧಾನಗಳನ್ನು ಹೊಂದಿದೆ. ಪ್ರಶಾಂತ್ ಕಿಶೋರ್ ಅಥವಾ ಇತರರು ಸೂಚಿಸಿದ ಮಾರ್ಗಗಳಲ್ಲಿ ಕೆಲಸ ಮಾಡಲು ಅದು ಸಿದ್ದವಿಲ್ಲ. ನನ್ನ ಕಾರ್ಯವೈಖರಿಯ ಪ್ರಕಾರ ಕಾಂಗ್ರೆಸ್ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಈ ಸಮಸ್ಯೆಯನ್ನು ಅರ್ಥೈಸಿ ಸಮಸ್ಯೆ ಕಂಡುಕೊಳ್ಳಬೇಕು. ಕಾಂಗ್ರೆಸ್ ಎಲ್ಲಿ ತಪ್ಪಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು," ಎಂದು ಹೇಳಿದ್ದರು. ಈ ಹಿನ್ನೆಲೆ ಬಳಿಕ ಪಕ್ಷದ ರಚನಾತ್ಮಕ ಬದಲಾವಣೆಗಳ ಕುರಿತು ಸೋನಿಯಾ ಗಾಂಧಿ ಜೊತೆಗೆ ಕಿಶೋರ್ ವಿವರವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಬಳಿಕ ಮೂವರು ಗಾಂಧಿಗಳೊಂದಿಗೆ ಕಿಶೋರ್ ಸಂಪರ್ಕದಲ್ಲಿದ್ದಾರೆ. ಕಮಲ್ ನಾಥ್, ಮಲ್ಲಿಕಾರ್ಜುನ್ ಖರ್ಗೆ, ಮತ್ತು ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications