ಮೋದಿ ಜಾಹೀರಾತು: ಪೇಚಿಗೀಡಾದ ಕಾಂಗ್ರೆಸ್ಸಿಂದ ವಾಪಸ್?
ನವದೆಹಲಿ, ಜ.25- 'ಚಾಯ್ ವಾಲಾ' ಬಿಜೆಪಿಯ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿ ಮುಂದಿನ ಲೋಕಸಭಾ ಚುನಾವಣೆಯತ್ತ ದಾಪುಗಾಲು ಹಾಕುತ್ತಿದ್ದರೆ ಇತ್ತ ಕಾಂಗ್ರೆಸ್ ಪಕ್ಷವು ಸೈಲೆಂಟಾಗಿ ಅವರ ಹಾದಿಯಲ್ಲೇ ಸಾಗುತ್ತಿರುವಂತಿದೆ.
ಕಾಪಿ ಕ್ಯಾಟ್ ಅವಾಂತರ!:

ಹೌದು ಲೋಕಸಭಾ ಚುನಾವಣೆ ನಿಮಿತ್ತ ಈಗಾಗಲೇ ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಜಾಹೀರಾತು ಪ್ರವಾಹ ಹರಿಯುತ್ತಿದೆ. ಇದಕ್ಕಾಗಿ ಪಕ್ಷವು 500 ಕೋಟಿ ರೂ ವ್ಯಯಿಸುತ್ತಿದೆ. ಈ ಮಧ್ಯೆ, ಕಾಂಗ್ರೆಸ್ ಪಕ್ಷದ ಪ್ರಚಾರ ಸಾರಥ್ಯ ಹೊತ್ತಿರುವ AICC ಉಪಾಧ್ಯಕ್ಷ ರಾಹುಲ್ ಗಾಂಧಿ ಭಾವಚಿತ್ರವುಳ್ಳ ಕಾಂಗ್ರೆಸ್ ಜಾಹೀರಾತು ಆ ಪಕ್ಷಕ್ಕೆ ತೀವ್ರ ಮುಜುಗರ ತಂದಿದೆ.
ಸದರಿ ಜಾಹೀರಾತಿನಲ್ಲಿ ಬಳಸಿರುವ 'ಮೈ ನಹೀ, ಹಮ್' (ನಾನು ಅಲ್ಲ, ನಾವು) ಎಂಬ ಘೋಷ ವಾಕ್ಯವು 2011ರಲ್ಲಿಯೇ ಬಿಜೆಪಿಯ ಹಾಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾಗವಹಿಸಿದ್ದ ಸಮಾರಂಭದಲ್ಲಿಯೇ ಬಳಕೆಯಾಗಿತ್ತು. ಇದರಿಂದ ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗಿದ್ದರೆ, ಬಿಜೆಪಿ ಪಕ್ಷವು ಮುಸಿಮುಸಿ ನಗುವಂತಾಗಿದೆ.
ಆದರೆ ಅಚಾತುರ್ಯದಿಂದ ಎಚ್ಚೆತ್ತಿರುವ ಕಾಂಗ್ರೆಸ್, ಪ್ರಮುಖ ಪ್ರತಿಪಕ್ಷಕ್ಕೆ ಅನಾಯಾಸವಾಗಿ ಮತ್ತೊಂದು ಅಸ್ತ್ರವನ್ನು ಸ್ವತಃ ತಾನೇ ಎತ್ತಿಕೊಡುವ ಬದಲು ಜಾಹೀರಾತನ್ನು ತಕ್ಷಣ ವಾಪಸ್ ತೆಗೆದುಕೊಳ್ಳುವ ಆಲೋಚನೆ ನಡೆಸಿದೆ.
ನಕಲ್ ಕೆ ಲಿಯೆ ಅಕಲ್ ಚಾಹಿಯೆ:
ಜಾಹೀರಾತಿಗೆ ಸಂಬಂಧಿಸಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೂ ಪ್ರತಿಕ್ರಿಯೆ ನೀಡಿದ್ದಾರೆ. ತಾನು ಬಳಸಿದ್ದ ಪದಗುಚ್ಛವನ್ನೇ ಕಾಂಗ್ರೆಸ್ ಪಕ್ಷ ತನ್ನ ಜಾಹೀರಾತಿನಲ್ಲಿ ಬಳಸಿದೆ. ಇದು 'ಕಾಪಿ-ಕ್ಯಾಟ್' ಎಂದಿದ್ದಾರೆ ಮೋದಿ.
'ನಕಲ್ ಕೆ ಲಿಯೆ ಅಕಲ್ ಚಾಹಿಯೆ' (ನಕಲಿ ಮಾಡಲೂ ಬುದ್ಧಿವಂತಿಕೆ ಬೇಕು). ಕಾಂಗ್ರೆಸ್ ಪಕ್ಷವು ಮೋದಿಯನ್ನು ದ್ವೇಷಿಸುತ್ತದೆ, ಆದರೆ ಅವರ ಟ್ಯಾಗ್ ಲೈನ್ ಅನ್ನು ಪ್ರೀತಿಸುತ್ತದೆ. ರಾಹುಲ್ ಅವರು ಸ್ಲೋಗನ್ ಅನ್ನಷ್ಟೇ ಕದಿಯಬಹುದು, ಆದರೆ, ಮೋದಿಯವರ ಅನುಭವ ಹಾಗೂ ಸಾಮರ್ಥ್ಯವನ್ನು ಹೊಂದಲು ಸಾಧ್ಯವೇ?' ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಲೇವಡಿ ಮಾಡಿದ್ದಾರೆ.












Click it and Unblock the Notifications