ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್ ಗಾಂಧಿ ನೀಡಿದ್ದಾರೆ ಹೊಸ ಜವಾಬ್ದಾರಿ
Recommended Video

ನವ ದೆಹಲಿ, ಜೂನ್ 22: ಕಾಂಗ್ರೆಸ್ ಹಿರಿಯ ಮುಖಂಡ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೊಸ ಜವಾಬ್ದಾರಿಯನ್ನು ನೀಡಿದ್ದಾರೆ.
ಲೋಕಸಭೆ ಚುನಾವಣೆಗಳು ಸಮೀಪದಲ್ಲಿರುವಂತೆ ವಿವಿಧ ರಾಜ್ಯಗಳಿಗೆ ಕಾಂಗ್ರೆಸ್ ಪಕ್ಷವು ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಿದ್ದು, ಅದರ ಜೊತೆಗೆ ಮಹಾರಾಷ್ಟ್ರಕ್ಕೆ ಹಿರಿಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಹರಾಷ್ಟ್ರದಂತಹಾ ದೊಡ್ಡ ರಾಜ್ಯಕ್ಕೆ ಉಸ್ತುವಾರಿಯಾಗಿ ನೇಮಿಸಿರುವುದರ ಹಿಂದೆ ಕಾಂಗ್ರೆಸ್ಗೆ ಖರ್ಗೆ ಅವರ ರಾಜಕೀಯ ಅನುಭವದ ಮೇಲಿರುವ ನಂಬಿಕೆಯೇ ಕಾರಣ ಎನ್ನಲಾಗಿದೆ. ಆದರೆ ಈ ಜವಾಬ್ದಾರಿ ಖರ್ಗೆ ಅವರಿಗೆ ಸುಲಭವಂತೂ ಆಗಿರುವುದಿಲ್ಲ.

ಮಿತ್ರಪಕ್ಷದೊಂದಿಗೆ ಬಿಜೆಪಿ ಜಗಳ
ಮಹಾರಾಷ್ಟ್ರದಲ್ಲಿ ಪ್ರಸ್ತುತ ಬಿಜೆಪಿ ಆಡಳಿತವಿದ್ದು, ಅದರ ಮಿತ್ರಪಕ್ಷ ಶಿವಸೇನೆಯು ಬಿಜೆಪಿಯ ಸಖ್ಯದಿಂದ ಹೊರ ಬಂದಿರುವ ಈ ಹೊತ್ತಿನಲ್ಲಿ ಅಲ್ಲಿನ ರಾಜಕೀಯ ಬಿರುಸುಪಡೆದುಕೊಂಡಿದೆ. ಹಾಗಾಗಿ ಮಹಾರಾಷ್ಟ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಅನುಭವ ಉಪಯೋಗಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲಿ ಎಂಬ ಉಮೇದು ಕಾಂಗ್ರೆಸ್ ಅಧ್ಯಕ್ಷರದ್ದು.

ಕೇವಲ 42 ಸ್ಥಾನ ಗೆದ್ದಿತ್ತು ಕಾಂಗ್ರೆಸ್
ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ಜೊತೆಜೊತೆಗೆ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಕಳೆದ ಬಾರಿ ಬಿಜೆಪಿ ಪಕ್ಷವು 122 ಸೀಟುಗಳನ್ನು ಪಡೆದುಕೊಂಡು ಶಿವಸೇನೆಯೊಂದಿಗೆ ಮೈತ್ರಿ ಸರ್ಕಾರ ರಚಿಸಿತ್ತು. ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದ 287 ಕ್ಷೇತ್ರಗಳಲ್ಲಿ ಕೇವಲ 42 ಕ್ಷೇತ್ರವನ್ನು ಮಾತ್ರವೇ ಗೆದ್ದು ಮುಖಭಂಗ ಅನುಭವಿಸಿತ್ತು.

ಸಂಕಷ್ಟದಲ್ಲಿ ಕಾಂಗ್ರೆಸ್
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಅಷ್ಟೇನು ಉತ್ತಮ ಸ್ಥಿತಿಯಲ್ಲಿಲ್ಲ ಅಲ್ಲಿ ಪ್ರಾದೇಶಿಕ ಪಕ್ಷ ಶಿವಸೇನೆ ಮತ್ತು ಬಿಜೆಪಿ ಅತ್ಯಂತ ಪ್ರಬಲವಾಗಿದ್ದು ಕಾಂಗ್ರೆಸ್ ಮೂರರ ಸ್ಥಾನದಲ್ಲಿದೆ ಹಾಗಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಗೆ ಜೀವ ತುಂಬುವುದು ಸವಾಲಿನ ಕಾರ್ಯವಾಗಲಿದೆ.

ಎನ್ಸಿಪಿಯೊಂದಿಗೆ ಉತ್ತಮ ಬಾಂಧವ್ಯ
ಮಹರಾಷ್ಟ್ರ ಕಾಂಗ್ರೆಸ್ನಲ್ಲಿನ ಒಳಜಗಳಗಳನ್ನು ಬಗೆಹರಿಸುವುದು ಮತ್ತು ತನ್ನ ಮಿತ್ರ ಪಕ್ಷ ಎನ್ಸಿಪಿಯೊಂದಿಗೆ ಉತ್ತಮ ಬಾಂದವ್ಯವನ್ನು ಮುಂದುವರೆಸಿಕೊಂಡು ಹೋಗಿ ಚುನಾವಣೆ ಎದುರಿಸುವುದು ಮಲ್ಲಿಕಾರ್ಜುನ ಖರ್ಗೆ ಮುಂದಿರುವ ಸವಾಲು.

ಅಸಮಾಧಾನ ಸಾಧ್ಯತೆ
ರಾಷ್ಟ್ರಮಟ್ಟದ ಸಮಿತಿಯಲ್ಲಿ ಸ್ಥಾನ ಪಡೆಯುವ ಹಿರಿವಂತಿಕೆ ಅನುಭವ ಇರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಂದು ರಾಜ್ಯಕ್ಕೆ ಸೀಮಿತ ಮಾಡಿರುವುದು ಅವರಿಗೆ ಮತ್ತು ಅವರ ಬೆಂಬಲಿಗರಿಗೆ ಅಸಮಾಧಾನ ತರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.












Click it and Unblock the Notifications