ಮೇಕೆದಾಟು ಯೋಜನೆಗೆ ಒಪ್ಪಿಗೆ ಸಿಗುವ ವಿಶ್ವಾಸ: ಕುಮಾರಸ್ವಾಮಿ
ನವದೆಹಲಿ, ಅಕ್ಟೋಬರ್ 05: ಮೇಕೆದಾಟು ಹಾಗೂ ಮಹದಾಯಿ ಸೇರಿದಂತೆ ಹಲವು ವಿಷಯಗಳನ್ನು ಕೇಂದ್ರ ಸಚಿವ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದು ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ನವದೆಹಲಿ ಕೇಂದ್ರ ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಭೇಟಿಯಾದ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೇಕೆದಾಟು ಯೋಜನೆ, ಮಹದಾಯಿ ತೀರ್ಪಿನಂತೆ ನೀರು ಬಳಸಿಕೊಳ್ಳಲು ಒಪ್ಪಿಗೆ ಹಾಗೂ ಪ್ರಕೃತಿ ವಿಕೋಪದಿಂದ ಆದ ಹೆದ್ದಾರಿಗಳ ಹಾನಿ ಹಾಗೂ ಅದಕ್ಕೆ ವಿಶೇಷ ಅನುದಾನ ಬಿಡುಗಡೆ ಸಂಬಂಧ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ದೇವೇಗೌಡ, ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರು ಇಂದು ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು, ಬೆಳಿಗ್ಗೆ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನೂ ಭೇಟಿ ಮಾಡಿದ್ದರು

ಮೇಕೆದಾಟು ಯೋಜನೆ ಅವಶ್ಯಕತೆ ಬಹಳ ಇದೆ
ಮೇಕೆದಾಟು ವಿಷಯದಲ್ಲಿ ನಾವು ಈಗಾಗಲೇ ಸಾಕಷ್ಟು ಕಾಲಹರಣ ಮಾಡಿದ್ದೇವೆ, 346 ಟಿಂಎಸಿ ನೀರು ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ಹಾಗಾಗಿ ಅಲ್ಲಿ ಕೂಡಲೇ ಅಣೆಕಟ್ಟು ನಿರ್ಮಿಸಿ ನೀರು ಶೇಖರಿಸಬೇಕಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹಾಗೂ ಅಣೆಕಟ್ಟೆಯ ಅವಶ್ಯಕತೆಯನ್ನು ನಿತಿನ್ ಗಡ್ಕರಿಗೆ ಅವರಿಗೆ ವಿವರಿಸಲಾಗಿದೆ ಎಂದು ಸಿಎಂ ಹೇಳಿದರು.

ಯಾವಾಗ ಬೇಕಾದರೂ ಕೇಂದ್ರದ ಒಪ್ಪಿಗೆ ಸಿಗಬಹುದು
ಗಡ್ಕರಿ ಅವರು ಈಗಾಗಲೇ ತಮ್ಮ ಕಾರ್ಯದರ್ಶಿಗೆ ಮೇಕೆದಾಟು ವಿಷಯದ ಬಗ್ಗೆ ಕಾರ್ಯೋನ್ಮುಖರಾಗಲು ಸೂಚಿಸಿದ್ದಾರೆ, ಯಾವುದೇ ಸಮಯದಲ್ಲಿ ಬೇಕಾದರೂ ರಾಜ್ಯ ನೀಡಿರುವ ಪ್ರಸ್ತಾವಕ್ಕೆ ಕೇಂದ್ರವು ಒಪ್ಪಿಗೆ ನೀಡಬಹುದು ಎಂದು ಗಡ್ಕರಿ ಹೇಳಿದರು.

ಮಹದಾಯಿ ನೀರು ಬಳಸಿಕೊಳ್ಳಲು ಒಪ್ಪಿಗೆ
ಮಹದಾಯಿ ಟ್ರಿಬ್ಯುನಲ್ ಕೊಟ್ಟಿರುವ ತೀರ್ಪಿನಂತೆ ಮಹದಾಯಿಯ ನೀರು ಬಳಸಿಕೊಳ್ಳಲು ಕೇಂದ್ರದಿಂದ ಅನುಮತಿ ಬೇಕಿದ್ದು ಅದನ್ನು ಕೂಡಲೇ ಕೊಡುವಂತೆ ಗಡ್ಕರಿ ಅವರಿಗೆ ಸಿಎಂ ಮನವಿ ಮಾಡಿದ್ದಾರೆ. ಆದರೆ ಗೋವಾ ಸರ್ಕಾರವು ತೀರ್ಪಿನ ಬಗ್ಗೆ ಸ್ಪಷ್ಟನೆ ಕೋರಿರುವ ಕಾರಣ ಪ್ರಸ್ತುತ ಕರ್ನಾಟಕಕ್ಕೆ ನೀರು ಬಳಸಿಕೊಳ್ಳಲು ಅನುಮತಿ ನೀಡಲಾಗದು ಎಂದು ಗಡ್ಕರಿ ಹೇಳಿದ್ದಾರೆ. ಆದರೆ 5/3 ನಲ್ಲಿ ಸ್ಪಷ್ಟನೆ ಕೋರಿದ್ದರೂ ಸಹ ಜಿಒ (ಅನುಮತಿ) ನೀಡಿದ ಉದಾಹರಣೆಗಳು ಈ ಹಿಂದೆ ಇವೆ ಎಂದು ಗಡ್ಕರಿ ಅವರಿಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಾಲಮನ್ನಾ ಅರ್ಜಿ ಬಗ್ಗೆ ಭಯ ಬೇಡ
ಸಾಲಮನ್ನಾ ಬಗ್ಗೆ ರೈತರಿಂದ ಖಾತೆ ಹಾಗೂ ಇನ್ನತರೆ ಮಾಹಿತಿಯನ್ನು ಆಹ್ವಾನಿಸುವುದು ಸತ್ಯ ಆದರೆ ಅದಕ್ಕೆ ಯಾವುದೇ ಕಾಲಮಿತಿ ಇಲ್ಲ, ಯಾವುದೇ ಕಾರಣಕ್ಕೂ ರೈತರು ಗಾಬರಿ ಆಗಬಾರದು ಎಂದು ಕುಮಾರಸ್ವಾಮಿ ಇದೇ ಸಮಯದಲ್ಲಿ ಹೇಳಿದರು. ಖಾಸಗಿ ಸಾಲ ಕುರಿತು ಸಾಲದಿಂದ ಮುಕ್ತಿ ಕೊಡಿಸಲೆಂದು ಡೆಬ್ಟ್ ರಿಲೀಫ್ ಆಕ್ಟ್ ತರುತ್ತಿದ್ದು ಅದಕ್ಕೆ ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರಪತಿಗಳ ಅಂಕಿತ ಸಿಗಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ರಾಹುಲ್ ಗಾಂಧಿಯನ್ನು ಭೇಟಿ ಆಗುತ್ತೇನೆ
ರಾಹುಲ್ ಗಾಂಧಿ ಭೇಟಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ದಿನಗಳ ಕಾಲ ದೆಹಲಿಯಲ್ಲೇ ಇರುವ ಕಾರಣ ಅವಕಾಶ ಸಿಕ್ಕರೆ ರಾಹುಲ್ ಗಾಂಧಿ ಅವರನ್ನು ಭೇಟಿ ಆಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. ನಾಳೆ ದೆಹಲಿಯಲ್ಲಿ ಅವರು ಖಾಸಗಿ ಪತ್ರಿಕೆಯೊಂದರ ಸಮಿಟ್ನಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications