'ಪಾಕಿಸ್ತಾನ ಎಂಬ ಹಾವಿಗೆ ಹಾಲೆರೆಯುತ್ತಿರುವ ಚೀನಾ ಈಗೇನು ಹೇಳುತ್ತದೆ?'
ನವದೆಹಲಿ, ಫೆಬ್ರವರಿ 16: ಜೈಶ್ ಇ ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ರಾಜಾರೋಷವಾಗಿ ಓಡಾಡಿಕೊಂಡಿರುವುದಕ್ಕೆ ಹಾಗೂ ಜಾಗತಿಕವಾಗಿ ಭಯೋತ್ಪಾದನಾ ದಾಳಿ ನಡೆಸುತ್ತಿರುವುದಕ್ಕೆ ಚೀನಾ ದೇಶವೇ ಜವಾಬ್ದಾರಿ ಹೊರಬೇಕು. ಏಕೆಂದರೆ, ಅವನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಭಾರತ ಮಾಡಿದ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದ್ದೇ ಚೀನಾ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಭಾರತವೂ ಸೇರಿದಂತೆ ವಿಶ್ವದಾದ್ಯಂತ ಜೈಶ್ ಇ ಮೊಹ್ಮದ್ ಮುಖ್ಯಸ್ಥ ಮಸೂದ್ ಅಜರ್ ಭಯೋತ್ಪಾದನಾ ಕೃತ್ಯ ಎಸಗುತ್ತಿದ್ದಾನೆ. ಆತನ ಬೆಂಬಲಕ್ಕೆ ನಿಂತ ಚೀನಾವು ಇದಕ್ಕೆ ಹೊಣೆ ಹೊರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಜರ್ ಪಾಕಿಸ್ತಾನದ ಹೊರಗೆ ನೆಲೆಸಿದ್ದಾನೆ. ಇವನನ್ನೇ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವ ಸಂಸ್ಥೆ ಯತ್ನಿಸಿತು. ಆದರೆ ಒಂದು ದೇಶ- ಚೀನಾ ಒಡ್ಡುತ್ತಿರುವ ತಡೆಯಿಂದ ಅದು ಸಾಧ್ಯವಾಗಿಲ್ಲ ಎಂದಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್ ಇ ಮೊಹ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಗುರುವಾರದಂದು ವಾಹನವೊಂದರಲ್ಲಿ ಕೇಜಿಗಟ್ಟಲೆ ಸ್ಫೋಟಕವನ್ನು ಸೇನಾ ಪಡೆಯ ವಾಹನಕ್ಕೆ ಗುದ್ದಿಸಿದ್ದ. ಈ ಘಟನೆಗೆ ಸ್ಪಂದಿಸಿದಂತೆ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ಭಾರತ, ಅಮೆರಿಕ, ಯು.ಕೆಯಿಂದ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಒತ್ತಾಯಿಸಲಾಗಿತ್ತು. ಅದಕ್ಕೆ ಅಡ್ಡಲಾಗಿ ಚೀನಾ ನಿಂತಿದೆ ಎಂದು ಹೇಳಿದ್ದಾರೆ.
ಪುಲ್ವಾಮ ದಾಳಿಯನ್ನು ಕಂಡ ಸಿಆರ್ ಪಿಎಫ್ ಸಿಬ್ಬಂದಿ ಹಂಚಿಕೊಂಡ ಘಟನೆ ವಿವರ
ಈಗಾಗಲೇ ಆರ್ಥಿಕವಾಗಿ ಹಾಗೂ ನೈತಿಕವಾಗಿ ಅಧಃಪತನ ಆಗಿರುವ ಪಾಕಿಸ್ತಾನಕ್ಕೆ ಮುಖ್ಯ ಆರ್ಥಿಕ ಪ್ರಾಯೋಜಿತ ದೇಶ ಚೀನಾ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿ ಮಾಡಲಾಗಿದೆ. ಆದರೂ ಆ ದೇಶದ ಸೇನೆ ಪದೇಪದೇ ಇಂಥ ದಾಳಿ ಮಾಡುತ್ತಿದೆ. ಆ ಮೂಲಕ ಈ ಸಮಸ್ಯೆ ಸರಿಪಡಿಸಲು ಭಾರತ ತೊಡಗಬೇಕು. ಅಂಥ ಸಂದರ್ಭದಲ್ಲಿ ಅಪ್ಘಾನಿಸ್ತಾನದಲ್ಲಿ ತಾನು ಕಾಲೂರಿ, ಅಮೆರಿಕ ಸೈನಿಕರು ಅಲ್ಲಿಂದ ವಾಪಸು ಹೋಗುವಂತೆ ಮಾಡಬೇಕು ಎನ್ನುವುದು ಪಾಕ್ ಉದ್ದೇಶ.
ಅಮೆರಿಕ ಸೇನೆಯು ಅಫ್ಘಾನಿಸ್ತಾನದಿಂದ ಕಾಲ್ತೆಗೆದರೆ ಅಲ್ಲೊಂದು ಶೂನ್ಯ ಸೃಷ್ಟಿ ಆಗುತ್ತದೆ. ಅದರ ಲಾಭ ಪಡೆಯಲು ಪಾಕಿಸ್ತಾನ ಹವಣಿಸುತ್ತಿದೆ. ಭಾರತೀಯ ಸೇನೆ ಜಮ್ಮು-ಕಾಶ್ಮೀರದ ಸಮಸ್ಯೆ ನಿವಾರಿಸುವಲ್ಲೇ ನಿರತ ಆಗಿಬಿಟ್ಟರೆ ತನಗೆ ಅಫ್ಘಾನಿಸ್ತಾನದಲ್ಲಿ ನೆಲೆಯೂರಲು ಅನುಕೂಲ ಆಗುತ್ತದೆ ಎಂಬುದು ಪಾಕ್ ಲೆಕ್ಕಾಚಾರ ಎಂದು ಅವರು ಹೇಳಿದ್ದಾರೆ.
ಪುಲ್ವಾಮಾ ದಾಳಿಕೋರನನ್ನು ಸ್ವಾತಂತ್ರ್ಯ ಯೋಧ ಎಂದ ಪಾಕ್ ಪತ್ರಿಕೆ
ಇಂಥ ಸಂದರ್ಭದಲ್ಲೇ ಜನರು, ರಾಜಕೀಯ ಪಕ್ಷಗಳು ಹಾಗೂ ಧಾರ್ಮಿಕ ಸಂಘಟನೆಗಳು ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಒಂದಾಗಬೇಕು. ಜಮ್ಮು ಕಾಶ್ಮೀರದ ಜನರ ಪರವಾಗಿ ನಾವು ನಿಲ್ಲಬೇಕು. ಅಲ್ಲಿನ ಜನರು ಶಾಂತಿಯುತವಾದ ಬದುಕು ಬಯಸುತ್ತಿದ್ದಾರೆ. ನಮ್ಮೆಲ್ಲರ ಸಿಟ್ಟನ್ನು ಒಟ್ಟು ಮಾಡಿ, ಪಾಕಿಸ್ತಾನ ಹಾಗೂ ಚೀನಾದ ಮೇಲೆ ತಿರುಗಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.