5 ಕೋಟಿ ಪರಿಹಾರ ಕೋರಿಕೆ ಹಿಂದೆ ದೋಷಪೂರಿತ ಉದ್ದೇಶ: ಸೆರಮ್ ಸಂಸ್ಥೆ
ನವದೆಹಲಿ, ನವೆಂಬರ್.29: ಕೊರೊನಾವೈರಸ್ ಪ್ರಾಯೋಗಿಕ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ತನ್ನ ಆರೋಗ್ಯದಲ್ಲಿ ಏರುಪೇರಾಗಿದೆ. ನನಗೆ 5 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂಬ ಸ್ವಯಂಸೇವಕನ ದೂರು ದುರುದ್ದೇಶಪೂರಿತವಾಗಿದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ದೂಷಿಸಿದೆ.
ಕೊವಿಡ್-19 ಲಸಿಕೆ ವೈದ್ಯಕೀಯ ಪ್ರಯೋಗದ ಹಂತದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಲಸಿಕೆ ಪ್ರಯೋಗ ಮತ್ತು ಸ್ವಯಂಸೇವಕನ ಆರೋಗ್ಯ ಸ್ಥಿತಿ ಬದಲಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಸ್ವಯಂಸೇವಕನು ತನ್ನ ವೈಯಕ್ತಿಕ ಆರೋಗ್ಯ ಸಮಸ್ಯೆಗೂ ಮತ್ತು ಕೊವಿಡ್-19 ಲಸಿಕೆ ಪ್ರಯೋಗಕ್ಕೂ ನಂಟು ಕಲ್ಪಿಸುತ್ತಿದ್ದಾನೆ ಎಂದು ಸಂಸ್ಥೆಯು ಆರೋಪಿಸಿದೆ.
ಕೊವಿಡ್-19 ಲಸಿಕೆ ತೆಗೆದುಕೊಂಡಿದ್ದಕ್ಕೆ 5 ಕೋಟಿ ಪರಿಹಾರ ಕೊಡಿ
ಕೊರೊನಾವೈರಸ್ ಲಸಿಕೆ ವೈದ್ಯಕೀಯ ಪ್ರಯೋಗದಲ್ಲಿ ಭಾಗವಹಿಸುವುದರಿಂದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಆಗುವ ಕುರಿತು ವೈದ್ಯರ ತಂಡವು ಎಚ್ಚರಿಕೆ ನೀಡಿತ್ತು. ಆದಾಗ್ಯೂ, ದುರುದ್ದೇಶಪೂರಿತನಾಗಿ ವ್ಯಕ್ತಿ ವೈದ್ಯಕೀಯ ಪ್ರಯೋಗಕ್ಕೆ ಒಳಗಾದರು. ಇದೀಗ ಕಂಪನಿಯ ಹೆಸರನ್ನು ಕೆಡಿಸಲು ಸಾರ್ವಜನಿಕವಾಗಿ ದೂರು ನೀಡುತ್ತಿದ್ದಾರೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ತಿಳಿಸಿದೆ.

ಹಣ ಸಂಪಾದನೆಗೆ ಕಳ್ಳ ಮಾರ್ಗ:
ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯ ಕೊವಿಡ್-19 ಲಸಿಕೆ ತೆಗೆದುಕೊಂಡಿದ್ದಕ್ಕೆ ತನ್ನ ಆರೋಗ್ಯದಲ್ಲಿ ಏರುಪೇರು ಆಗಿದೆ ಎಂಬ ಆರೋಪದ ಹಿಂದೆ ಹಣ ಗಳಿಸುವ ದುರುದ್ದೇಶವಿದೆ. ಸಂಸ್ಥೆಯ ಹೆಸರು ಹಾಳು ಮಾಡುವುದರ ಜೊತೆಗೆ ಹಣ ಮಾಡಿಕೊಳ್ಳುವುದಕ್ಕಾಗಿ ಈ ರೀತಿ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.
5 ಕೋಟಿ ಪರಿಹಾರ ಕೋರಿದ ಪ್ರಕರಣ:
ಕಳೆದ ಅಕ್ಟೋಬರ್.01ರಂದು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸ್ವಯಂಸೇವಕರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗಿತ್ತು. ಹೀಗೆ ಲಸಿಕೆಯ ಮೊದಲ ಡೋಸ್ ಪಡೆದ ವ್ಯಕ್ತಿಯೊಬ್ಬರಿಗೆ ನರದೌರ್ಬಲ್ಯ ಮತ್ತು ಮಾನಸಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೋವಿಶೀಲ್ಡ್ ಲಸಿಕೆಯ ವೈದ್ಯಕೀಯ ಪ್ರಯೋಗದಿಂದ ತಮ್ಮ ಜೀವಕ್ಕೆ ಅಪಾಯವಾಗಿದ್ದು 5 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಇದರ ಜೊತೆಗೆ ಆ ಲಸಿಕೆಯ ಉತ್ಪಾದನೆ ಮತ್ತು ಸಂಶೋಧನೆ ನಿಲ್ಲಿಸಬೇಕು ಎಂದು ಚೆನ್ನೈ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಮನವಿ ಸಲ್ಲಿಸಿದ್ದರು.












Click it and Unblock the Notifications