ಖಾತೆ ಕ್ಯಾತೆ: ಸಚಿವ ಅನಂತಕುಮಾರ್ ತಿರುಗೇಟು
ಬೆಂಗಳೂರು, ಮೇ 29:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತ ಗೆಲುವಿನೊಂದಿಗೆ ನಾಗಾಲೋಟ ಮುಂದುವರಿಸಿರುವ ಅನಂತಕುಮಾರ್ ಅವರು ನರೇಂದ್ರ ಮೋದಿ ಸಂಪಟುದಲ್ಲಿ ಮೊದಲ ಕಂತಿನಲ್ಲೇ ಕ್ಯಾಬಿನೆಟ್ ಸಚಿವರಾಗಿದ್ದಾರೆ. ಅದೇನೋ ಸರಿ. ಆದರೆ ಅವರಿಗೆ ನೀಡಲಾಗಿರುವ ಖಾತೆ (ರಾಸಾಯನಿಕ, ರಸಗೊಬ್ಬರ) ಸರಿಯಲ್ಲವೆಂದೂ, ಅವರು 13ನೇ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದರಿಂದ ಅವರ ಸ್ಥಾನಮಾನಕ್ಕೆ ಚ್ಯುತಿ ಬಂದಿದೆ ಎಂದೂ ಕೊಂಕು ತೆಗೆದವರಿಗೆ ಅನಂತಕುಮಾರ್ ತಿರುಗೇಟು ನೀಡಿದ್ದಾರೆ.
ನಿನ್ನೆ ಶಾಸ್ತ್ರಿ ಭವನದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಸಚಿವ ಅನಂತಕುಮಾರ್ ಅವರು 'ನನ್ನ ಖಾತೆ ಕೀಳಲ್ಲ ಕೇಳಿರೋ ಅಣ್ಣಾ' ಎಂದಿದ್ದಾರೆ. ಅಷ್ಟೇ ಅಲ್ಲ ಅದರ ಮಹತ್ವ ಏನು ಎಂಬುದು ನಿಮಗಿನ್ನೂ ಗೊತ್ತಿಲ್ಲ. ಖಾತೆ ಹಾಗಿರಲಿ, ಇದುವರೆಗೆ ಖಾತೆ ನಿರ್ವಹಿಸಿದ ಪೈಕಿ ನಾಲ್ವರು ದೇಶದ ಪ್ರಧಾನ ಮಂತ್ರಿಗಳಾಗಿದ್ದಾರೆ, ತಿಳಿದುಕೊಳ್ಳಿ' ಎಂದು ಟೀಕಾಕಾರರಿಗೆ ಅವರು ಬಿಸಿ ಮುಟ್ಟಿಸಿದ್ದದಾರೆ.
ನನಗೆ ಸಿಕ್ಕಿರುವ ಖಾತೆ ಕೀಳಲ್ಲ. 2.5 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆಯನ್ನು ಹೊಂದಿರುವ ಖಾತೆ ಇದು. ನನಗೆ ಮೋದಿ ಟೀಂನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎನ್ನುವುದೇ ಮುಖ್ಯ. ಇದೇ ಖಾತೆಯನ್ನು ಈ ಹಿಂದೆ ನಾಲ್ಕು ಮಂದಿ ಪ್ರಧಾನಿಗಳು ನಿರ್ವಹಿಸಿದ್ದರು. ಹಾಗಾಗಿ, ಅನಂತಕುಮಾರ್ ಗೆ ಮೋದಿ ಸಂಪುಟದಲ್ಲಿ ಸೂಕ್ತ ಸ್ಥಾನ ಸಿಕ್ಕಿಲ್ಲ ಎಂದು ಮಾಧ್ಯಮಗಳಲ್ಲಿ ಮಂದಿ ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುತ್ತಿರುವುದು ಸರಿಯಲ್ಲ' ಎಂದು ಅವರು ಮಾರುತ್ತರ ನೀಡಿದ್ದಾರೆ. (ಕರ್ನಾಟಕದ ನೂತನ ಕೇಂದ್ರ ಸಚಿವರು ಹೇಳಿದ್ದೇನು?)
'ದೇಶದ ರೈತ ಸಮುದಾಯಕ್ಕೆ ಮಳೆಗಾಲಕ್ಕೆ ಮುನ್ನವೇ ಸಕಾಲಕ್ಕೆ ರಸಗೊಬ್ಬರ ಒದಗಿಸುವಂತೆ ಪ್ರಧಾನಿ ಮೋದಿ ಒಪ್ಪಿಸಿರುವ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸುವೆ. ಜತೆಗೆ ದೇಶದಲ್ಲಿ ರಸಗೊಬ್ಬರಗಳ ಉತ್ಪಾದನೆಯನ್ನು ಹೆಚ್ಚಿಸಲಾಗುವುದು. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಎರಡು ಹೊಸ ರಸಗೊಬ್ಬರ ಕಾರ್ಖಾನೆಗಳನ್ನು ಆರಂಭಿಸಲಾಗುವುದು. ಜತೆಗೆ ಮುಚ್ಚಿಹೋಗಿರುವ ಕಾರ್ಖಾನೆಗಳನ್ನು ಮತ್ತೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು' ಎಂದೂ ಸಚಿವರು ವಿವರಿಸಿದರು.
'ದೇಶದಲ್ಲಿ ಶೇ. 60ರಷ್ಟಿ ಮಂದಿ ರೈತರಿದ್ದಾರೆ. ಅಷ್ಟೊಂದು ಬಹುಸಂಖ್ಯಾತರನ್ನು ತಲುಪುವ ಹೊಣೆಗಾರಿಕೆ ನನ್ನ ಮೇಲಿದೆ. ಇನ್ನು, ರಾಸಾಯನಿಕ ಖಾತೆಗೂ ಮಹತ್ವವಿದೆ. ಜನರಿಗೆ ನ್ಯಾಯಯುತ ಬೆಲೆಗಳಲ್ಲಿ ಔಷಧಗಳು ಪೂರೈಕೆ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಖಾತೆಗಿದೆ' ಎಂದು ನೂತನ ಸಚಿವರ ಅನಂತ್ ಸಮರ್ಥಿಸಿಕೊಂಡರು.

ರಾಸಾಯನಿಕ, ರಸಗೊಬ್ಬರ ಖಾತೆ ನಿರ್ವಹಿಸಿದ್ದ ಮೊರಾರ್ಜಿ ದೇಸಾಯಿ
ರಾಸಾಯನಿಕ, ರಸಗೊಬ್ಬರ ಖಾತೆ ನಿರ್ವಹಿಸಿದ್ದ ಮೊರಾರ್ಜಿ ದೇಸಾಯಿ ಮುಂದೆ ಪ್ರಧಾನಿಯಾದರು.

ರಾಸಾಯನಿಕ, ರಸಗೊಬ್ಬರ ಖಾತೆ ನಿರ್ವಹಿಸಿದ್ದ ರಾಜೀವ್ ಗಾಂಧಿ
ರಾಸಾಯನಿಕ, ರಸಗೊಬ್ಬರ ಖಾತೆ ನಿರ್ವಹಿಸಿದ್ದ ರಾಜೀವ್ ಗಾಂಧಿ ಮುಂದೆ ಪ್ರಧಾನಿಯಾದರು.

ರಾಸಾಯನಿಕ, ರಸಗೊಬ್ಬರ ಖಾತೆ ನಿರ್ವಹಿಸಿದ್ದ ನರಸಿಂಹರಾವ್
ರಾಸಾಯನಿಕ, ರಸಗೊಬ್ಬರ ಖಾತೆ ನಿರ್ವಹಿಸಿದ್ದ ಪಿವಿ ನರಸಿಂಹರಾವ್ ಮುಂದೆ ಪ್ರಧಾನಿಯಾದರು.

ರಾಸಾಯನಿಕ, ರಸಗೊಬ್ಬರ ಖಾತೆ ನಿರ್ವಹಿಸಿದ್ದ ವಾಜಪೇಯಿ
ರಾಸಾಯನಿಕ, ರಸಗೊಬ್ಬರ ಖಾತೆ ನಿರ್ವಹಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಮುಂದೆ ಪ್ರಧಾನಿಯಾದರು.

ಅನಂತಕುಮಾರ್ ಅಧಿಕಾರ ಸ್ವೀಕಾರ: ಪತ್ನಿ ತೇಜಸ್ವಿನಿ ಉಪಸ್ಥಿತಿ
ಅನಂತಕುಮಾರ್ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರ ಪತ್ನಿ ತೇಜಸ್ವಿನಿ ಸೇರಿದಂತೆ ಕುಟುಂಬವರ್ಗ ಹಾಜರಿದ್ದರು. ರೈಲ್ವೆ ಸಚಿವ ಸದಾನಂದಗೌಡ, ನಾಗರಿಕ ವಿಮಾನಯಾನ ರಾಜ್ಯ ಸಚಿವ ಸಿದ್ದೇಶ್ವರ್, ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಷಿ, ಕರುಣಾಕರ ರೆಡ್ಡಿ, ರೇಣುಕಾಚಾರ್ಯ ಮುಂತಾದವರು ಅನಂತಕುಮಾರ್ ಅವರನ್ನು ಅಭಿನಂದಿಸಿದರು.












Click it and Unblock the Notifications